ಹರಪನಹಳ್ಳಿ: ಪಕ್ಷ ಭೇದ ಮರೆತು ನನಗೆ ಈ ಬಾರಿ ಬೆಂಬಲಿಸಿ ವಿಧಾನ ಪರಿಷತ್ನಲ್ಲಿ ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ವಿಧಾನ ಪರಿಷತ್ ಈಶಾನ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಾರಾ ಪ್ರತಾಪ್ ರೆಡ್ಡಿ ಹೇಳಿದರು.
ಕಳೆದ ಬಾರಿ ನಾನು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಅಲ್ಪ ಮತಗಳಿಂದ ಸೋತಿದ್ದೇನೆ. ಈ ಬಾರಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೂ ಪಕ್ಷ ನನಗೆ ಅವಕಾಶ ನೀಡಲಿಲ್ಲ. ಹಾಗಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ನನಗೆ ಮೊದಲನೇ ಪ್ರಾಶಸ್ತ್ಯದ ಮತವನ್ನು ನೀಡುವ ಮೂಲಕ ಒಮ್ಮೆ ಅವಕಾಶ ಮಾಡಿಕೊಡಿ ಎಂದು ಮತದಾರರಲ್ಲಿ ವಿನಂತಿ ಮಾಡಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿ, ಅಖಂಡ ಬಳ್ಳಾರಿ ಜಿಲ್ಲೆಯ ನಮ್ಮೆಲ್ಲರ ಪ್ರತಿನಿಧಿಯಾಗಿ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ನಾರಾ ಪ್ರತಾಪ್ ರೆಡ್ಡಿಯವರನ್ನು ಬೆಂಬಲಿಸೋಣ ಎಂದು ಕರೆ ನೀಡಿದರು.ಪ್ರತಾಪ್ ರೆಡ್ಡಿಯವರು ಉತ್ತಮ ನಾಯಕತ್ವ ಹೊಂದಿದ್ದು ವಿಧಾನ ಪರಿಷತ್ಗೆ ಆಯ್ಕೆಯಾದರೆ, ಸರ್ಕಾರದ ಮೇಲೆ ಒತ್ತಡ ತಂದು ಈ ಭಾಗದ ಅಭಿವೃದ್ಧಿ, ಶಿಕ್ಷಣ ನಿರುದ್ಯೋಗ ಸಮಸ್ಯೆಗಳ ಪರಿಹರಿಸುವ ಪ್ರಯತ್ನ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖಂಡ ಪಾಟೀಲ್ ಬೆಟ್ಟನಗೌಡ ಮಾತನಾಡಿ, ನಾರಾ ಪ್ರತಾಪ್ ರೆಡ್ಡಿಯವರು ಜನಪರ ಚಿಂತೆನೆ, ರಾಜಕೀಯ ಪರಿಣಿತಿ ಹೊಂದಿರುವ ವ್ಯಕ್ತಿ, ಇಂತವರು ವಿಧಾನ ಪರಿಷತ್ಗೆ ಆಯ್ಕೆಯಾದರೆ ಪದವೀಧರರ ಎಲ್ಲಾ ನ್ಯೂನ್ಯತೆಗಳನ್ನು ಸರಿಪಡಿಸುತ್ತಾರೆ ಎಂದರು.ಕಸಾಪ ತಾಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ, ಕಳೆದ ಬಾರಿ ಅಲ್ಪ ಮತಗಳಿಂದ ಸೋತಿರುವ ನಾರಾ ಪ್ರತಾಪ್ ರೆಡ್ಡಿಯವರಿಗೆ ಈ ಬಾರಿ ಹೆಚ್ಚು ಮತಗಳನ್ನು ನೀಡುವ ಮೂಲಕ ಅವರನ್ನು ಗೆಲ್ಲಿಸಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ನಿಚ್ಚವನಹಳ್ಳಿ ಪರಶುರಾಮಪ್ಪ, ಪರಮೇಶ್ವರಪ್ಪ, ಕಣವಿಹಳ್ಳಿ ಮಂಜುನಾಥ್, ರಾಜು, ನಂದೀಶ್ ರಾಯಪ್ಪ ಇದ್ದರು.