ಕನ್ನಡಪ್ರಭ ವಾರ್ತೆ ಮೈಸೂರುವೇದಗಳು ಜಗತ್ತಿನ ಪ್ರಪ್ರಥಮ ಜ್ಞಾನಕೋಶಗಳು ಎಂದು ಶ್ರೀರಾಮಕೃಷ್ಣ ಪರಮಹಂಸ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ಅಭಿಪ್ರಾಯಪಟ್ಟರು.ಶ್ರೀರಾಮಕೃಷ್ಣ ಪರಮಹಂಸ ಸೇವಾ ಪ್ರತಿಷ್ಠಾನವು ರಾಮಕೃಷ್ಣ ವೃತ್ತದ ನೆಲಮಾಳಿಗೆಯಲ್ಲಿ ಆಯೋಜಿಸಿದ್ದ ತಿಂಗಳ ತಿಳಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜರ್ಮನಿಯ ತತ್ವಜ್ಞಾನಿ ಮತ್ತು ಸಂಶೋಧಕ ಮ್ಯಾಕ್ಸ್ ಮುಲ್ಲರ್ ಈ ಮಾತನ್ನು ದೃಢಪಡಿಸಿದ್ದಾನೆ. ವೇದಗಳು ಸ್ವತಃ ಸೃಷ್ಟಿಕರ್ತನಿಂದಲೇ ಬೋಧಸಲ್ಪಟ್ಟ ಸೃಷ್ಟಿಯ ಬಗೆಗಿನ ಮಾಹಿತಿ. ನಮ್ಮ ಪ್ರಾಚೀನ ಋಷಿಮುನಿಗಳು ಆಧ್ಯಾತ್ಮಿಕ ತಪಸ್ಸಿನಿಂದ ಮೆದುಳಿನಲ್ಲಿ ಪೂರ್ವ ನಿಗದಿತವಾಗಿ ಅಡಕವಾಗಿರುವ ಈ ಜ್ಞಾನವನ್ನು ಸ್ವಯಂ ಅನಾವರಣ ಮಾಡಿಕೊಂಡು ಲೋಕಕ್ಕೆ ಬೋಧಿಸಿದ್ದಾಗಿ ಹೇಳಿದರು.ವಾಲ್ಮೀಕಿ ಋಷಿ ಪ್ರಥಮವಾಗಿ ವೇದಗಳ ಜ್ಞಾನವನ್ನು ರಾಮಾಯಣದ ಕಥೆ ಮೂಲಕ ಲೋಕಕ್ಕೆ ಪ್ರಚುರಪಡಿಸಿದರು. ಅನಂತರ ವೇದವ್ಯಾಸರು ಬಾಯಿಯಿಂದ ಬಾಯಿಗೆ ಹರಿದುಬಂದಿದ್ದ ವೇದ ಜ್ಞಾನವನ್ನು ನಾಲ್ಕು ಗುಂಪುಗಳನ್ನಾಗಿ ವರ್ಗೀಕರಿಸಿ ಲಿಖಿತ ರೂಪಕ್ಕೆ ತಂದರು. ವೇದಗಳು ಅಂಚಿಲ್ಲದ ಮಹಾಸಾಗರದಂತೆ ಸೃಷ್ಟಿಯ ಎಲ್ಲಾ ಜ್ಞಾನವನ್ನು ಒಳಗೊಂಡಿದ್ದು, ಇವೆಲ್ಲವನ್ನೂ ಅರಗಿಸಿಕೊಳ್ಳುವುದು ಸುಲಭ ಸಾಧ್ಯವಲ್ಲ. ಹಾಗಾಗಿ ವ್ಯಾಸರು ಮಹಾಭಾರತದಲ್ಲಿ ಭಗವದ್ಗೀತೆಯ ಮೂಲಕ ವೇದಗಳ ಎಲ್ಲ ಸಾರವನ್ನು ದಾಖಲಿಸಿದ್ದಾರೆ ಎಂದರು.ಭಗವದ್ಗೀತೆ ಎಲ್ಲಾ ಭಾಷೆಗಳಲ್ಲಿಯೂ ಲಭ್ಯವಿದ್ದು, ಅದನ್ನು ಅಧ್ಯಯನ ಮಾಡುವುದರಿಂದ ವೇದಗಳ ಸಂಕ್ಷಿಪ್ತ ದರ್ಶನವನ್ನು ಪಡೆಯಬಹುದಾಗಿದೆ. ವೇದಗಳು ಸೃಷ್ಟಿಯ ವಿಜ್ಞಾನ. ಅದನ್ನು ಆಧ್ಯಾತ್ಮಿಕ ಜ್ಞಾನ ಎಂದು ಕರೆಯಲಾಗುತ್ತದೆ. ಆಧುನಿಕ ಜ್ಞಾನದ ಎಲ್ಲ ಶಾಖೆಗಳನ್ನು, ವೇದದಲ್ಲಿರುವ ಜ್ಞಾನಗಳಿಗೆ ಇಂದು ಕೂಡ ಜೋಡಿಸಬಹುದಾಗಿರುತ್ತದೆ. ವೇದದ ಆರೋಗ್ಯ ಶಾಸ್ತ್ರ ವೇದದ ಗಣಿತ, ವೇದದ ಕಂಪ್ಯೂಟರ್ ಜ್ಞಾನ, ವೇದದ ಭೌತಶಾಸ್ತ್ರ, ವೇದದ ರಾಸಾಯನಿಕ ಶಾಸ್ತ್ರ, ವಿವಿಧ ಕೃತಕ ಬುದ್ಧಿಮತ್ತೆ ಹೀಗೆ ಆಧುನಿಕವಾಗಿರುವ ಎಲ್ಲಾ ಜ್ಞಾನವನ್ನು ವೇದ ಜ್ಞಾನಗಳಿಗೆ ಜೋಡಿಸಬಹುದಾಗಿರುತ್ತದೆ ಎಂದರು.ಪ್ರತಿಷ್ಠಾನ ಕಾರ್ಯದರ್ಶಿ ಕೆ. ಕೆಂಪಲಿಂಗರಾಜು, ಜಂಟಿ ಕಾರ್ಯದರ್ಶಿ ಬೋರೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಅಮೃತಾ, ಸದಸ್ಯೆ ಆಶಾ, ಗೋಪಿನಾಥ್ ಮೊದಲಾದವರು ಇದ್ದರು.