ಕನ್ನಡಪ್ರಭ ವಾರ್ತೆ ಚಿತ್ರದುರ್ಗ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಚಿತ್ರದುರ್ಗ ನಗರದಲ್ಲಿ ಬುಧವಾರ ಜಾಗೃತಿ ಜಾಥಾ ನಡೆಯಿತು.
ಜಾಥಾದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳ ಬಾಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸಿ-ಕೆಲಸಕ್ಕಲ್ಲ, ಮಕ್ಕಳ ದುಡಿಮೆ ಜೀವನವಿಡೀ ಬವಣೆ, ಶಿಕ್ಷಣವಿಲ್ಲದ ಬಾಳು ಅಂಧಕಾರದ ಗೋಳು, ಮಕ್ಕಳಿಗೆ ವಿದ್ಯೆ-ದೊಡ್ಡವರಿಗೆ ಕೆಲಸ, ಮಕ್ಕಳ ದುಡಿಮೆ ಸಾಕು ಶಿಕ್ಷಣ ಬೇಕು, ಕೂಲಿ ಬಿಡಿಸಿ ಶಾಲೆಗೆ ಕಳುಹಿಸಿ, ಎಳೆಯ ವಯಸ್ಸು ಕಲಿಯುವ ವಯಸ್ಸು, ಬಾಲ್ಯದಲ್ಲಿ ಕಮರಿದ ಜೀವ ಮತ್ತೆಂದೂ ಅರಳದು, ಬೆಳೆಯುವ ವಯಸ್ಸಿನಲ್ಲಿ ದುಡಿಯಲು ದೂಡಬೇಡಿ, ಬಾಲಕಾರ್ಮಿಕ ಪದ್ದತಿ ನಿವಾರಣೆ ದೇಶದ ಸರ್ವತೋಮುಖ ಸುಧಾರಣೆ, ಮಕ್ಕಳಿಗೆ ಬೇಕು ಆಟ-ಪಾಠ, ಬೇಡ ಕಾರ್ಖನೆಗಳ ಕೆಲಸಗಳ ಕಾಟ, ಎಂಬಿತ್ಯಾದಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ವಿರೋಧಿ ಘೋಷಣೆಗಳು ಮೊಳಗಿದವು. ನಗರದ ಹೊಳಲ್ಕೆರೆ ರಸ್ತೆಯ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲಾ ಆವರಣದಿಂದ ಪ್ರಾರಂಭವಾದ ಜಾಗೃತಿ ಜಾಥಾ ನಗರದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು.
ಜಾಥಾವು ಕಚೇರಿ ಹತ್ತಿರದ ಒನಕೆ ಒಬವ್ವ ವೃತ್ತದ ಬಳಿ ಆಗಮಿಸಿದಾಗ ಮಾನವ ಸರಪಳಿ ನಿರ್ಮಿಸಿ, ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಕುರಿತು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರೋಣ ವಾಸುದೇವ್ ಅವರು ಪ್ರಮಾಣ ವಚನ ಬೋಧಿಸಿದರು.ಜಾಥಾದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಿಡಿದಿದ್ದ ಹಲವಾರು ಸಂದೇಶದ ಫಲಕಗಳು ಗಮನ ಸೆಳೆದವು. ನಗರದ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು, ಎಸ್ಜೆಎಂ ಕಾನೂನು ಕಾಲೇಜಿನ ವಿದ್ಯಾರ್ಥಿಗಳು, ಅಗಸನಕಲ್ಲು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗಿಯಾಗಿದ್ದರು.