ವಿಶ್ವ ರಕ್ತದಾನಿಗಳ ದಿನಾಚರಣೆ: ದಾನಿಗಳಿಗೆ ಸನ್ಮಾನ

KannadaprabhaNewsNetwork | Updated : Jun 17 2025, 12:00 AM IST

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ರಕ್ತದಾನಿಗಳ ಸನ್ಮಾನ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಸೋಮವಾರಪೇಟೆ ಜೇಸೀ ಪುಷ್ಪಗಿರಿ ನೇತೃತ್ವದಲ್ಲಿ ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಒಕ್ಕಲಿಗರ ಯುವ ವೇದಿಕೆಯ ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ರಕ್ತದಾನಿಗಳಿಗೆ ಸನ್ಮಾನ, ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು.ಜಿಲ್ಲಾ ರಕ್ತನಿಧಿ ಘಟಕದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರಸಕ್ತ ವರ್ಷ ‘ರಕ್ತ ನೀಡಿ-ಭರವಸೆ ನೀಡಿ-ಒಟ್ಟಾಗಿ ನಾವು ಜೀವಗಳನ್ನು ರಕ್ಷಿಸೋಣ’ ಎಂಬ ಘೋಷ ವಾಕ್ಯದಡಿ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತಿದೆ. ರಕ್ತಕ್ಕೆ ಪರ್ಯಾಯ ಯಾವುದೂ ಇಲ್ಲ. ಆದ್ದರಿಂದ ರಕ್ತದಾನದ ಬಗ್ಗೆ ಸಮಾಜದಲ್ಲಿ ಹೆಚ್ಚು ಅರಿವು ಮೂಡಿಸಬೇಕು. ಒಮ್ಮೆ ರಕ್ತದಾನ ಮಾಡಿದರೆ ಎರಡರಿಂದ ಮೂರು ಜೀವಗಳನ್ನು ಉಳಿಸಬಹುದು ಎಂದರು.

ರಕ್ತದಾನಿಗಳ ದಿನದಂದು ಇತರರಿಗೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ರಕ್ತದಾನಿಗಳನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದ ಅವರು, ಆರೋಗ್ಯವಂತರು ನಿಯಮಿತವಾಗಿ ರಕ್ತದಾನ ಮಾಡಬೇಕು. ಜಿಲ್ಲಾಸ್ಪತ್ರೆಯಲ್ಲಿ ರಕ್ತದ ಬೇಡಿಕೆ ತೀವ್ರವಾಗಿ ಹೆಚ್ಚಾಗುತ್ತಿದೆ. ನೆರೆ ಜಿಲ್ಲೆಗಳಿಂದಲೂ ರೋಗಿಗಳು ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ವರ್ಷಕ್ಕೆ ಕನಿಷ್ಟ ಒಮ್ಮೆಯಾದರೂ ರಕ್ತದಾನ ಶಿಬಿರ ಆಯೋಜಿಸಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೇಸೀ ಸಂಸ್ಥೆಯ ಅಧ್ಯಕ್ಷೆ ಜಗದಾಂಬ ಗುರುಪ್ರಸಾದ್ ಮಾತನಾಡಿ, ಗರ್ಭಿಣಿಯರು, ಅಪಘಾತದಿಂದ ಗಾಯಗೊಂಡವರು, ಶಸ್ತ್ರಚಿಕಿತ್ಸೆ ಅವಶ್ಯಕ ಇರುವವರು, ರಕ್ತ ಹೀನತೆಯಿಂದ ಬಳಲುತ್ತಿರುವ ಮಂದಿಗೆ ಹೆಚ್ಚಿನ ರಕ್ತದ ಅವಶ್ಯಕತೆಯಿರುತ್ತದೆ. ಇದನ್ನು ಮನಗಂಡು ಜೇಸೀ ಸಂಸ್ಥೆಯಿಂದ ಪ್ರತಿವರ್ಷವೂ ಶಿಬಿರವನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು.ವೇದಿಕೆಯಲ್ಲಿ ಆಸ್ಪತ್ರೆಯ ವೈದ್ಯರಾದ ಮಂಜುಳಾ, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಚಕ್ರವರ್ತಿ ಸುರೇಶ್, ಡಾಲ್ಫೀನ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮಹೇಶ್, ಕಾರ್ಯದರ್ಶಿ ವಿನುತಾ, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ರಾಜೇಶ್ ಉಪಸ್ಥಿತರಿದ್ದರು. ದಿಶಾ ಗಿರೀಶ್ ಜೇಸೀ ಧ್ಯೇಯ ವಾಚಿಸಿದರು.ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ತಂತ್ರಜ್ಞರಾಗಿರುವ, ೧೫ ಬಾರಿ ರಕ್ತದಾನ ಮಾಡಿರುವ ಚಂದ್ರಾವತಿ ಹಾಗೂ ೩೨ ಬಾರಿ ರಕ್ತದಾನ ಮಾಡಿರುವ ವಿಜಯ್ ಹಾನಗಲ್ ಅವರನ್ನು ರಕ್ತದಾನಿಗಳ ದಿನದ ಅಂಗವಾಗಿ ಜೇಸೀ ಸಾಮಾಜಿಕ ಸೇವಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಶಿಬಿರದಲ್ಲಿ ಒಟ್ಟು ೪೮ ಮಂದಿ ರಕ್ತದಾನ ಮಾಡಿದರು.