ಇ-ತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಸಂಪೂರ್ಣ ನಿರ್ಮೂಲನೆ ಗುರಿ: ಮಧು ಎಸ್. ಮನೋಹರ್
ಕನ್ನಡಪ್ರಭ ವಾರ್ತೆ ಪುತ್ತೂರುವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪುತ್ತೂರು ನಗರ ಸಭೆಯ ವತಿಯಿಂದ ಮೂರು ಪ್ರಮುಖ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇ-ತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯದ ಸಂಪೂರ್ಣ ನಿರ್ಮೂಲನೆಯ ಗುರಿಯೊಂದಿಗೆ ಈ ಬಾರಿಯ ವಿಶ್ವ ಪರಿಸರ ದಿನಾಚರಣೆ ಹಮ್ಮಿಕೊಳ್ಳಲಾಗುತ್ತಿದೆ. ಎಂದು ಪೌರಾಯುಕ್ತ ಮಧು ಎಸ್ ಮನೋಹರ್ ತಿಳಿಸಿದ್ದಾರೆ. ಅವರು ಗುರುವಾರ ಪುತ್ತೂರು ನಗರಸಭೆಯಲ್ಲಿ ಸುದ್ಧಿಗಾರಗೊಂದಿಗೆ ಮಾತನಾಡಿ, ಗಾರ್ಬೇಜ್ ಟು ಗಾರ್ಡನ್, ಪ್ಲಾಸ್ಟಿಕ್ ಸಂಗ್ರಹ ಘಟಕ ಮತ್ತು ಇ-ತ್ಯಾಜ್ಯ ಸಂಗ್ರಹ ಘಟಕ ನಿರ್ಮಾಣದ ಗುರಿ ಹೊಂದಲಾಗಿದೆ. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪುತ್ತೂರು ನಗರಸಭೆಯ ವತಿಯಿಂದ ಈ ಮೂರು ಪ್ರಮುಖ ಕಾರ್ಯಕ್ರಮಗಳಿಗೆ ಇಂದು ಚಾಲನೆ ನೀಡಲಾಗುತ್ತಿದೆ ಎಂದರು. ನಗರ ಮತ್ತು ಗ್ರಾಮ ಪಂಚಾಯಿತಿ ನಡುವಿನ ಅಂತರದಲ್ಲಿ ಕಸ ಎಸೆಯುವುದನ್ನು ತಡೆಯುವ ನಿಟ್ಟಿನಲ್ಲಿ ‘ಗಾರ್ಬೇಜ್ ಆನರೇಬಲ್ ಪಾಯಿಂಟ್’ ಅಂತ ಗುರುತಿಸಿ ಅಲ್ಲಿ ಸ್ವಚ್ಚಗೊಳಿಸಿ ಬಳಿಕ ಅಲ್ಲಿ ‘ಗಾರ್ಬೇಜ್ ಟು ಗಾರ್ಡನ್’ ಹೆಸರಿನಲ್ಲಿ ಗಾರ್ಡನ್ ನಿರ್ಮಾಣ ಮಾಡಲಾಗುತ್ತಿದೆ. ಇಂದು ಮೊಟ್ಟೆತ್ತಡ್ಕದಲ್ಲಿ ಗಾರ್ಬೇಜ್ ಟು ಗಾರ್ಡನ್ಗೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಪ್ಲಾಸ್ಟಿಕ್ನಿಂದ ಉಂಟಾಗುತ್ತಿರುವ ದುಷ್ಪರಿಣಾಮವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಸಂಗ್ರಹಣಾ ತೊಟ್ಟಿಯನ್ನು ಗುರುತಿಸಿದ ಕಡೆಗಳಲ್ಲಿ ಇಡಲಾಗುತ್ತಿದೆ. ಈ ತೊಟ್ಟಿಯಲ್ಲಿ ಒಣ ತ್ಯಾಜ್ಯವಾಗಿರುವ ಪ್ಲಾಸ್ಟಿಕ್ಗಳನ್ನು ಬಳಸಲು ಅವಕಾಶವಿದೆ. ಬಳಸಿದ ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಆಹಾರ ಪಾತ್ರೆಗಳು ಮತ್ತು ಪ್ಯಾಕೇಜಿಂಗ್, ಕ್ಯಾರಿ ಬ್ಯಾಗ್ಗಳು ಇನ್ನಿತರ ಈ ತೊಟ್ಟಿಯಲ್ಲಿ ಹಾಕಬಹುದಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಹಾಗೂ ವರ್ತಕರಿಗೆ ಬಟ್ಟೆ ಚೀಲ ವಿತರಣೆ ಮಾಡಲಾಗುವುದು ಎಂದು ವಿವರಿಸಿದರು.ಪ್ಲಾಸ್ಟಿಕ್ ಕಸದ ವೈಜ್ಞಾನಿಕ ವಿಲೇವಾರಿಯ ಜೊತೆಗೆ ಇ-ಕಸದ ಸಮರ್ಪಕ ವಿಲೇವಾರಿಯ ಗುರಿಯನ್ನೂ ಹೊಂದಲಾಗಿದ್ದು, ನಗರಸಭೆಯಲ್ಲಿ ಸಂಗ್ರಹವಾಗುವ ಇ ಕಸವನ್ನು ವೈಜ್ಞಾನಿಕ ವಿಲೇವಾರಿಗಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಮಂಗಳೂರು ಬೈಕಂಪಾಡಿಯಲ್ಲಿರುವ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮುಂದೆ ಹಸಿ ಕಸ, ಒಣ ಕಸಗಳ ಜೊತೆಗಹೆ ಇ-ಕಸವನ್ನೂ ವಿಂಗಡನೆಗೊಳಿಸಿ ಮನೆ ಮನೆಯಿಂದ ಸಂಗ್ರಹ ಮಾಡಲಾಗುವುದು. ಇ-ಕಸದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರಸಭೆಯ ವ್ಯಾಪ್ತಿಯಲ್ಲಿನ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿನ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ, ಶಿಕ್ಷಣ ಸಂಸ್ಥೆಗಳನ್ನು ಇ-ಕಸ ಸಂಗ್ರಹ ಕೇಂದ್ರವಾಗಿ ಗುರುತಿಸಲಾಗುವುದು ಎಂದರು.ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ‘ಮಹಿಳೆಗೊಂದು ಮರ’ ಎಂಬ ಯೋಜನೆಯಡಿ ಪ್ರತಿ ಮಹಿಳೆಯರಿಗೆ ಒಂದು ಗಿಡ ನೆಡುವ ಕಾರ್ಯ ಯೋಜನೆ ಹಮ್ಮಿಕೊಳ್ಳಲಾದೆ. ಇಂದು ನಗರದ ಚಿಣ್ಣರ ಪಾರ್ಕ್ನಲ್ಲಿ ನಗರಸಭಾ ಅಧ್ಯಕ್ಷರು ಈ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಮನೆಗಳಿಗೂ ಒಂದೊಂದು ಗಿಡ ವಿತರಣೆ ಮಾಡಿ ಮನೆಯವರಿಗೆ ಗಿಡ ನೆಟ್ಟು ಪೋಷಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.