ಕುಷ್ಟಗಿ: ಆಷಾಢ ಮಾಸ ಕಳೆಯುತ್ತಾ ಬಂದರೂ ನಿರೀಕ್ಷಿತ ಮಳೆಯಾಗದ ಹಿನ್ನೆಲೆ ರೈತರಲ್ಲಿ ಆತಂಕ ಮನೆಮಾಡಿದೆ. ಬಿತ್ತನೆ ಮಾಡಿದ ಬೆಳೆಗಳು ನೀರಿನ ಕೊರತೆಯಿಂದ ಒಣಗುವ ಭೀತಿ ಎದುರಾಗಿರುವ ಕಾರಣ,ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಮಳೆಗಾಗಿ ವಿಶಿಷ್ಟ ಧಾರ್ಮಿಕ ಆಚರಣೆ ನಡೆಯುತ್ತಿದೆ.
ಗ್ರಾಮೀಣ ಬದುಕಿನಲ್ಲಿ ಮಳೆಯೇ ರೈತನ ಜೀವನಾಡಿ ಎಂಬ ನಂಬಿಕೆಯೊಂದಿಗೆ ಮಹಿಳೆಯರು ಭಕ್ತಿಭಾವದಿಂದ ವರುಣ ದೇವನನ್ನು ಕೊಂಡಾಡುತ್ತಿದ್ದಾರೆ. ಗಾಯನದ ನಡುವೆ ರೈತರ ಸಂಕಷ್ಟ, ಬೆಳೆಗಳ ಉಳಿವು, ಜಾನುವಾರುಗಳ ರಕ್ಷಣೆ ಹಾಗೂ ಉತ್ತಮ ಮಳೆಯ ಆಶಯ ವ್ಯಕ್ತವಾಗುತ್ತಿದೆ.
ಯುವತಿಯರಿಂದ ಹಿಡಿದು ಹಿರಿಯ ಮಹಿಳೆಯವರೆಗೆ ಎಲ್ಲ ವಯೋಮಾನದವರು ಈ ಗಾಯನದಲ್ಲಿ ಪಾಲ್ಗೊಂಡಿದ್ದು, ದೇವಸ್ಥಾನದ ಆವರಣ ಭಕ್ತಿಮಯ ವಾತಾವರಣದಿಂದ ಕಂಗೊಳಿಸುತ್ತಿದೆ. ಗ್ರಾಮಸ್ಥರೂ ಸಹ ಪ್ರಾರ್ಥನೆಯಲ್ಲಿ ಭಾಗಿಯಾಗಿ ಮಳೆಯಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ.ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗಲೆಂದು ಕಪ್ಪೆ ಮದುವೆ, ವಿಶೇಷ ಪೂಜೆ, ಹೋಮ-ಹವನಗಳಂತಹ ಆಚರಣೆ ನಡೆಯುವಂತೆ ದೋಟಿಹಾಳದಲ್ಲಿ ಮಹಿಳೆಯರ ಈ ಸಾಮೂಹಿಕ ಗಾಯನವೂ ವಿಶಿಷ್ಟ ಸಂಪ್ರದಾಯವಾಗಿ ಗಮನ ಸೆಳೆಯುತ್ತಿದೆ. ಗ್ರಾಮೀಣ ಸಂಸ್ಕೃತಿ, ಭಕ್ತಿ ಮತ್ತು ಪ್ರಕೃತಿ ಮೇಲಿನ ಅವಲಂಬನೆಯ ಪ್ರತೀಕವಾಗಿ ಈ ಕಾರ್ಯಕ್ರಮ ರೂಪುಗೊಂಡಿದೆ.
ಕಾರ್ಯಕ್ರಮದಲ್ಲಿ ರುದ್ರಮ್ಮ ಮಾಳಗಿ, ಶಾಂತವ್ವ ಸರೂರು, ನಿಂಗಪ್ಪ ಸರೂರು, ಹನಮವ್ವ ಗೌಡರ, ಶಂಕರವ್ವ ಹನುಮಕಟ್ಟಿ, ಹನಮವ್ವ ಚೌರಿ, ರೇಣಮ್ಮ ಸರೂರು, ರತ್ನಮ್ಮ ಗೋತಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.