ಧಾರವಾಡ: ಜಾತಿ ಗಣತಿ ವೇಳೆ ಅಧಿಕಾರಿಗಳಿಗೆ ಗೊಂದಲವಾಗಬಾರದು ಎಂದು ರಾಜ್ಯದಾದ್ಯಂತ ಸಮಾಜದ ಎಲ್ಲ ಮನೆಯ ಬಾಗಿಲಗೆ ‘ನಾವು ವಿಶ್ವಕರ್ಮರು’ ಲೇಬಲ್ ಅಂಟಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ವಿಶ್ವಕರ್ಮ ಸಮಾಜದವರು ಜಾತಿ ಗಣತಿ ಸಂದರ್ಭದಲ್ಲಿ ಜಾತಿ ಕಾಲಂನಲ್ಲಿ ಉಪಜಾತಿಗಳ ಹೆಸರು ನಮೂದಿಸದೆ, ವಿಶ್ವಕರ್ಮ ಎಂದು ಬರೆಸುವಂತೆ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ. ನಂಜುಡಿ ಮನವಿ ಮಾಡಿದರು.
ರಾಜ್ಯ ಸರ್ಕಾರವು ಮರು ಜಾತಿ ಸಮೀಕ್ಷೆ ನಡೆಸಲು ಮುಂದಾಗಿದೆ. ಎಲ್ಲ ಸಮಾಜದವರು ಜಾಗೃತರಾಗಿದ್ದು, ನಮ್ಮ ಸಮಾಜದವರು ಜಾಗೃತರಾಗಬೇಕು. ಅಂಕಿ ಸಂಖ್ಯೆಯಲ್ಲಿಯೂ ನಿರ್ಲಕ್ಷ್ಯಕ್ಕೆ ಒಳಗಾದರೆ ಯಾವುದೇ ಸವಲತ್ತು ಹಾಗೂ ಸಾಮಾಜಿಕ ನ್ಯಾಯ ಸಿಗುವುದಿಲ್ಲ ಎಂದರು.
ರಾಜ್ಯದಲ್ಲಿ 30 ಲಕ್ಷಕ್ಕೂ ಹೆಚ್ಚು ವಿಶ್ವಕರ್ಮ ಸಮಾಜದ ಜನಸಂಖ್ಯೆಯಿದೆ. ಆದರೆ, ಎಚ್. ಕಾಂತರಾಜು ಆಯೋಗವು 9 ಲಕ್ಷವಿದೆ ಎಂದು ವರದಿ ನೀಡಿದೆ. ಈ ಸಮೀಕ್ಷೆ ಸರಿಯಾಗಿಲ್ಲ. ಇದನ್ನು ಎಲ್ಲ ಸಮಾಜದವರು ವಿರೋಧಿಸಿದ್ದಾರೆ ಎಂದರು.ಈ ವೇಳೆ ಏಕದಂಡಗಿಮಠದ ದೊಡ್ಡೇಂದ್ರ ಸ್ವಾಮೀಜಿ, ಪ್ರಣವನಿರಂಜನ ಸ್ವಾಮೀಜಿ, ಗಣೇಶ್ವರ ಸ್ವಾಮೀಜಿ, ಮೌನೇಶ್ವರ ಸ್ವಾಮೀಜಿ, ಮಹಾಸಭಾ ಜಿಲ್ಲಾ ಅಧ್ಯಕ್ಷ ಕಾಳಪ್ಪ ಬಡಿಗೇರ, ವಿಠ್ಠಲ ಕಮ್ಮಾರ, ಶ್ರೀಶೈಲ ಸುತಾರ ಇದ್ದರು.