ಮುಳಬಾಗಿಲು: ಯಾವಾಗ ಅಧರ್ಮ ಮಿತಿಮೀರಿ ತಾಂಡವವಾಡುತ್ತದೆಯೋ ಆಗ ಧರ್ಮ ಸಂಸ್ಥಾಪನೆಗೆ ನಾನು ಅವತರಿಸಿ ಬಂದೇ ಬರುತ್ತೇನೆ ಎಂದು ಶ್ರೀ ಕೃಷ್ಣ ಪರಮಾತ್ಮನು ಗೀತೆಯಲ್ಲಿ ಸಾರಿದ್ದಾರೆ. ಅಂತೆಯೇ ಧರ್ಮವನ್ನು ಕಾಪಾಡಲು ನಾವೆಲ್ಲಾ ಮುಂದಾಗಬೇಕೆಂದು ಶಾಸಕ ಸಮೃದ್ಧಿ ಮಂಜುನಾಥ್ ಕರೆ ನೀಡಿದರು.
ನಗರದ ನೇತಾಜಿ ಕ್ರೀಡಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉದ್ಘಾಟಿಸಿ ಮಾತನಾಡಿ, ಯಾವುದೇ ಕೆಲಸ ಮಾಡಿದರೂ ಜನ ಮೆಚ್ಚುವಂತಿರಬೇಕು ಎಂದರಲ್ಲದೆ, ಈ ಬಾರಿ ವಿಜೃಂಭಣೆಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಶ್ರೀ ಕೃಷ್ಣ ಪರಮಾತ್ಮನು ಒಂದೇ ಜಾತಿಗೆ ಸೀಮಿತವಲ್ಲ ಎಂದರಲ್ಲದೆ, ಈ ಬಾರಿ ಎಲ್ಲಾ ಸಮುದಾಯಗಳ ಯುವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದರಿಂದ ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.
ತಾಪಂ ಇಒ ಡಾ.ಕೆ.ಸರ್ವೇಶ್ರಿಗೆ ತಾಲೂಕಿನ ಎಲ್ಲಾ ಮೂಲೆಗಳಿಂದ ಪಲ್ಲಕ್ಕಿಗಳನ್ನು ತರಿಸುವ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆಂದು ವೇದಿಕೆಯಲ್ಲಿ ಶಹಬಾಸ್ಗಿರಿ ನೀಡಿದರು.ಯಾದವ ಸಮುದಾಯದ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಈಗಾಗಲೇ ಭೂಮಿ ಪೂಜೆ ನೆರವೇರಿಸಲಾಗಿದ್ದು ೨ ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದೆಂದು ಸಮುದಾಯದ ಮುಖಂಡರಿಗೆ ಭರವಸೆ ನೀಡಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಶ್ರೀಕೃಷ್ಣ ಪರಮಾತ್ಮನ ಭಾವಚಿತ್ರಗಳು ಇರುವ ಪುಷ್ಪ ಪಲ್ಲಕ್ಕಿಗಳ ಮೆರವಣಿಗೆ ಮಾಡಿದರು. ತಹಸೀಲ್ದಾರ್ ವಿ.ಗೀತಾ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಲ್ಲೂರು ವಿ.ರಘುಪತಿ ರೆಡ್ಡಿ, ರೋಟರಿ ಸಂಸ್ಥೆಯ ಅಧ್ಯಕ್ಷ ಎನ್.ಆರ್ ಸತ್ಯಣ್ಣ, ಯಾದವ ಸಂಘದ ತಾಲೂಕು ಅಧ್ಯಕ್ಷ ನಾಗಮಂಗಲ ಶಂಕರಪ್ಪ, ಕಾರ್ಯದರ್ಶಿ ರಾಮಚಂದ್ರಪ್ಪ, ಖಜಾಂಚಿ ವೆಂಕಟರಾಮರೆಡ್ಡಿ, ತಾ.ಪಂ ಮಾಜಿ ಅಧ್ಯಕ್ಷ ಸೊನ್ನವಾಡಿ ಸಿ.ರಘುಪತಿ, ಮುಖಂಡರಾದ ಸೊಣ್ಣವಾಡಿ ಬಿಜೆಪಿ ಮುನಿರಾಜು, ಪ್ರಕೃತಿ ನಾರಾಯಣಪ್ಪ, ವಿ.ಗುಟ್ಟಹಳ್ಳಿ ಸೋಮಣ್ಣ, ಗುಡಿಪಲ್ಲಿ ಸುಬ್ರಮಣಿರೆಡ್ಡಿ, ರಚ್ಚಬಂಡಹಳ್ಳಿ ಶ್ರೀರಾಮಪ್ಪ, ನರಸಿಂಹರೆಡ್ಡಿ, ಗಣೇಶ್ಯಾದವ್, ಗ್ಯಾಸ್ ರಘು, ಬಲ್ಲ ಹರೀಶ್ ಇದ್ದರು.