ಮುಂಡಗೋಡ: ಯಾವುದೇ ಆಂಗ್ಲ ಪದ ಬಳಸದೇ ಸಂಪೂರ್ಣ ಕನ್ನಡಮಯವಾಗಿ ಕನ್ನಡ ಮೌಲ್ಯವನ್ನು ಹೆಚ್ಚಿಸಿದ ಸರ್ವ ಶ್ರೇಷ್ಠ ಕಲೆ ಯಾವುದಾದರೂ ಇದ್ದರೆ ಅದು ಕರಾವಳಿಯ ಯಕ್ಷಗಾನ ಮಾತ್ರ. ಅಂತಹ ಒಂದು ಕಲೆ ಕೇವಲ ಮನರಂಜನ ಕಲೆಯಾಗದೇ ಆರಾಧನ ಕಲೆಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಕುಂದಾಪುರದ ಭಾಗ್ವತ ರಾಘವೇಂದ್ರ ಆಚಾರ್ಯ ಹೇಳಿದರು.ಇಲ್ಲಿಯ ಬಸವಣ್ಣ, ವೀರಭದ್ರೇಶ್ವರ ದೇವಾಲಯ ಆವರಣದಲ್ಲಿ ಕುಂದ ಯಕ್ಷ ಸಾಂಸ್ಕೃತಿಕ ವೇದಿಕೆ ಮುಂಡಗೋಡ ಸಂಯುಕ್ತ ಆಶ್ರಯದಲ್ಲಿ ಯಕ್ಷ ವೈಭವ ಸಂಪೂರ್ಣ ಶ್ರೀದೇವಿ ಮಹಾತ್ಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಾಶ್ಚಿಮಾತ್ಯ ಸಂಸ್ಕೃತಿ ಭರಾಟೆಯ ನಡುವೆ ನಮ್ಮ ಸಾಂಸ್ಕೃತಿಕ ಕಲೆಗಳು ನಶಿಸಿ ಹೋಗುತ್ತಿರುವ ಇಂದಿನ ದಿನಗಳಲ್ಲಿ ಕೂಡ ಸಾಕಷ್ಟು ಶ್ರಮಪಟ್ಟು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಕಲೆಯ ಬಗ್ಗೆ ಜನಜಾಗೃತಿ ಮೂಡಿಸುತ್ತಿರುವ ಸಂಘಟಕರ ಕಾರ್ಯ ಶ್ಲಾಘನಿಯ. ಅದರಲ್ಲಿಯೂ ಸಾವಿರಾರು ಪ್ರದರ್ಶನ ಕಂಡಿರುವ ಸಂಪೂರ್ಣ ದೇವಿಯ ಮಹಾತ್ಮೆ ಕಾರ್ಯಕ್ರಮ ಮಾಡಿರುವುದು ಹೆಮ್ಮೆಯ ವಿಷಯ ಎಂದರು.
ನಾರಾಯಣ ಉಪ್ಪುಂದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ನಾಡಿನ ಯಕ್ಷಗಾನ ಕಲೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ತೋರಿಸಿದ ಕಾಂತಾರ ಚಿತ್ರದ ರಿಷಭ್ ಶೆಟ್ಟಿ ಅವರಿಗೆ ಅಭಿನಂದಿಸಿದರು.ರಮೇಶ ಶೆಟ್ಟಿ, ಅರುಣಕುಮಾರ ಶೆಟ್ಟಿ, ರತ್ನಾಕರ ಶೆಟ್ಟಿ, ರಾಘವೇಂದ್ರ ಮೊಗವೀರ, ಹರೀಶ ಪೂಜಾರ, ಸುರೇಶ ಪೂಜಾರ, ಕೃಷ್ಣ ಪೂಜಾರ, ನಾಗರತ್ನ ಶೆಟ್ಟಿ, ಸುಧಾಕರ ಶೆಟ್ಟಿ, ಪ್ರವೀಣ, ಪ್ರಿಯಾಂಕ ಶೇಟ್ಟಿ, ಪ್ರಜ್ಞಾ ಶೆಟ್ಟಿ ನಾಗರತ್ನ ಮೊಗವೀರ, ನರೇಶ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ವಿನುತಾ ಮೊಗವೀರ ಪ್ರಾರ್ಥಿಸಿದರು. ನರೇಶ ಕೇಣಿ ನಿರೂಪಿಸಿದರು. ನಾಗರತ್ನ ಶೆಟ್ಟಿ ನಿರೂಪಿಸಿದರು.
ಮೈನವಿರೇಳಿಸಿದ ಯಕ್ಷಗಾನ ಕಲೆ:
ಅನಂತಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಮೇಳ ಅವರಿಂದ ಯಕ್ಷಗಾನ ಕಲೆ ಪ್ರದರ್ಶನಗೊಂಡಿತು. ಯಕ್ಷಗಾನ ಕಾರ್ಯಕ್ರಮದ ಗತವೈಭವ ಮುಂಡಗೋಡ ಜನರಿಗೆ ಖುಷಿ ನೀಡಿದ್ದಂತೂ ಸುಳ್ಳಲ್ಲ. ಮಧ್ಯರಾತ್ರಿ 3 ಗಂಟೆವರೆಗೆ ಪ್ರದರ್ಶನಗೊಂಡಿದ್ದು, ಕಾರ್ಯಕ್ರಮ ವೀಕ್ಷಿಸಲು ಜನಸ್ತೋಮವೇ ಹರಿದುಬಂದಿತ್ತು. ಊಟೋಪಹಾರ ವ್ಯವಸ್ಥೆ ಕೂಡ ಕಲ್ಪಿಸಲಾಗಿತ್ತು.