ಕುಂದಾಪುರ: ಯಕ್ಷ ಶಿಕ್ಷಣ ಟ್ರಸ್ಟ್, ಸಿದ್ದಾಪುರದ ಪ್ರದರ್ಶನ ಸಂಘಟನಾ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ನಾಲ್ಕು ಶಾಲೆಗಳ ಯಕ್ಷಗಾನ ಪ್ರದರ್ಶನ ಡಿ. 29ರಂದು ಸಮಾಪನಗೊಂಡಿತು. ಅಧ್ಯಕ್ಷತೆ ವಹಿಸಿದ್ದ ಶಾಸಕ ಗುರುರಾಜ ಗಂಟಿಹೊಳೆ ಅವರು ಯಕ್ಷಗಾನ ಕಲಾ ರಂಗದ ಕಾರ್ಯಕ್ರಮ ಶಿಸ್ತುಬದ್ಧವಾಗಿರುತ್ತದೆ. ಸಮಯಕ್ಕೆ ಅವರು ಕೊಡುವ ಮಹತ್ವದಿಂದ ಅದಕ್ಕೊಂದು ಅನನ್ಯತೆ ಇದೆ. ಅವರಿಗಿರುವ ಸಾಮಾಜಿಕ ಮತ್ತು ಕಲಾ ಕಾಳಜಿ, ಕಾರ್ಯಕ್ರಮದ ಅಗಾಧ ವ್ಯಾಪ್ತಿ ಗಮನಿಸಿದರೆ ದೇಶದಲ್ಲೇ ಇಂತಹ ಇನ್ನೊಂದು ಸಂಸ್ಥೆ ಇರಲಿಕ್ಕಿಲ್ಲ ಎಂದು ಹೇಳಿದರು.
ಎಂ. ಗಂಗಾಧರ ರಾವ್, ಬಾಲಚಂದ್ರ ಭಟ್, ಕೃಷ್ಣ ಪೂಜಾರಿ, ಕೃಷ್ಣರಾಜ ತಂತ್ರಿ, ಶ್ರೀಕಾಂತ ನಾಯಕ್ ಅತಿಥಿಗಳಾಗಿ ಭಾಗವಹಿಸಿದ್ದರು. ಚಂದ್ರ ಕುಲಾಲ, ಗೋಪಾಲ ಕಾಂಚನ್, ಪ್ರದೀಪ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಅಶ್ವಿನಿ, ಆಕಾಂಕ್ಷ್, ಸೌರಭ ಮಯ್ಯ, ರಶ್ಮಿತಾ, ಸಾಕ್ಷಿ ಶೆಟ್ಟಿ ತಮ್ಮ ಯಕ್ಷ ಶಿಕ್ಷಣದ ಅನುಭವ ಹಂಚಿಕೊಂಡರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಯಕ್ಷಗಾನ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಗೊಂಡ ಮುರಲಿ ಕಡೆಕಾರ ಅವರನ್ನು ಪ್ರದರ್ಶನ ಸಂಘಟನಾ ಸಮಿತಿ ವತಿಯಿಂದ ಅಭಿನಂದಿಸಲಾಯಿತು. ಬಾಲಕೃಷ್ಣ ಮಂಜ ನಿರೂಪಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಸಿದ್ದಾಪುರ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ‘ಶಶಿಪ್ರಭಾ ಪರಿಣಯ’, ಶಂಕರನಾರಾಯಣ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ‘ಮಾಯಾಪುರಿ ಮಹಾತ್ಮ್ಯೆ’ ಪ್ರಸಂಗಗಳು ಪ್ರದರ್ಶನಗೊಂಡವು.