ಕನ್ನಡಪ್ರಭ ವಾರ್ತೆ ತುಮಕೂರು
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 83ನೇ ಹುಟ್ಟುಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿ.ಎಸ್.ಯಡಿಯೂರಪ್ಪ ಓರ್ವ ಹುಟ್ಟು ಹೋರಾಟಗಾರರು, ಸೈಕಲ್ ಮೇಲೆ ಶಿಕಾರಿಪುರದಿಂದ ವಿಧಾನಸೌಧದವರೆಗೆ ಯಾತ್ರೆ ಕೈಗೊಂಡು, ಬಿಜೆಪಿ ಪಕ್ಷವನ್ನು ಹಂತ ಹಂತವಾಗಿ ಅಧಿಕಾರಕ್ಕೆ ತಂದವರು.
ಹಿಡಿದ ಕೆಲಸವನ್ನು ಎಂದಿಗೂ ಕೈಬಿಡದೆ ನಡೆಸುತ್ತಿದ್ದ ಅವರ ಜೀವನ ಇತರೆ ರಾಜಕಾರಣಿಗಳಿಗೆ ಮಾದರಿ ಎಂದರು.83ನೇ ವಯಸ್ಸಿನಲ್ಲಿಯೂ ಪಕ್ಷವನ್ನು ಮುನ್ನಡೆಸುವ ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಭಗವಂತ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಶುಭ ಹಾರೈಸಿದರು.
ಹತ್ತಾರು ವರ್ಷಗಳಿಂದಲೂ ದಕ್ಷಿಣ ಭಾರತದಲ್ಲಿ ರಾಜಕೀಯ ಅಸ್ತಿತ್ವ ಕಂಡುಕೊಳ್ಳಲು ಬಿಜೆಪಿ ಕನಸನ್ನು 2008ರಲ್ಲಿ ಮುಖ್ಯಮಂತ್ರಿಯಾಗುವ ಮೂಲಕ ನನಸು ಮಾಡಿದ ಕೀರ್ತಿ ಬಿ.ಎಸ್.ಯಡಿಯೂರಪ್ಪನವರಿಗೆ ಸಲ್ಲುತ್ತದೆ. ಒಂದು ಕಾಲದಲ್ಲಿ ಬಿ.ಎಸ್.ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ತಮ್ಮನ್ನು ನಂಬಿ ಬಂದವರನ್ನು ಕೈಬಿಡದೆ ರಾಜಕೀಯವಾಗಿ ದಡ ಸೇರಿಸಿದ ವ್ಯಕ್ತಿ ಎಂದರೆ ಬಿ.ಎಸ್.ಯಡಿಯೂರಪ್ಪ ಮಾತ್ರ. ಅವರಿಗೆ ದೇವರು ಒಳ್ಳೆಯ ಆರೋಗ್ಯ ಕೊಟ್ಟು, ಮತ್ತಷ್ಟು ಮಾರ್ಗದರ್ಶನ ಮಾಡುವ ಹುಮ್ಮಸ್ಸು ನೀಡಲಿ ಎಂದು ಶುಭ ಹಾರೈಸಿದರು.
ಇದೇ ವೇಳೆ ಕರ್ನಾಟಕ ರಾಜ್ಯ ಹಿರಿಯ ಬಿಜೆಪಿ ಕಾರ್ಯಕರ್ತರ ವೇದಿಕೆ ಹಾಗೂ ಬಿ.ಎಸ್.ವೈ ಅಭಿಮಾನಿ ಬಳಗದಿಂದ ಬಿ.ಎಸ್.ವೈ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ, 100ಕ್ಕೂ ಹೆಚ್ಚು ಅನಾಥ ಮಕ್ಕಳಿಗೆ ಉಪಹಾರ ವಿತರಿಸಲಾಯಿತು. ಹಿರಿಯ ಬಿಜೆಪಿ ಮುಖಂಡರಾದ ಆರ್.ಜಿ.ಸುರೇಶ್, ಷಣ್ಮುಖ, ಷಡಕ್ಷರಿ, ಜಗದೀಶ್, ಲೋಕೇಶ್, ಚಂದ್ರು, ರವಿ, ವಿನಯಜೈನ್, ನಂಜುಂಡಸ್ವಾಮಿ, ಚಂದ್ರಣ್ಣ ಮತ್ತಿತರರು ಪಾಲ್ಗೊಂಡಿದ್ದರು.