ಯಡಿಯೂರು: ಟೋಲ್ ತೆರವು ಮಾಡಲು ರೈತರ ಹೋರಾಟ

KannadaprabhaNewsNetwork |  
Published : Oct 28, 2025, 12:03 AM IST
ಗುಬ್ಬಿ ತಾಲ್ಲೂಕಿನ ಜಿ.ಹೊಸಹಳ್ಳಿ ಬಳಿಯ ಟೋಲ್ ನಿರ್ಮಿಸಿರುವ ಸ್ಥಳದಲ್ಲಿ ಬೆಳಿಗ್ಗೆ ಜಮಾಯಿಸಿದ ನೂರಾರು ರೈತರು ಸರ್ಕಾರ ಹಾಗೂ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ತಹಶೀಲ್ದಾರ್ .ಬಿ ಆರತಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು | Kannada Prabha

ಸಾರಾಂಶ

ಇಕ್ಕಟ್ಟಿನ ರಸ್ತೆಯಲ್ಲಿನ ಟೋಲ್ ದಿಢೀರ್ ಹತ್ತು ವರ್ಷದ ಬಳಿಕ ಬಂದಿದ್ದು, ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಸರ್ಕಾರ ಹಣ ಕ್ರೋಢೀಕರಣಕ್ಕೆ ರೈತರ ಬಳಿ ತೆರಿಗೆ ಸಂಗ್ರಹಕ್ಕೆ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಗುಬ್ಬಿ

ಕಳೆದ ಹತ್ತು ವರ್ಷದಿಂದ ನಿತ್ಯ ರೈತರ ರಸ್ತೆಯಾಗಿದ್ದ ಯಡಿಯೂರು ಕೇಶಿಪ್ ರಸ್ತೆಗೆ ದಿಢೀರ್ ಟೋಲ್ ನಿರ್ಮಾಣವನ್ನು ವಿರೋಧಿಸಿ ಈಗಾಗಲೇ ಹೋರಾಟ ಮಾಡಿದ್ದರೂ ಮರಳಿ ಟೋಲ್ ತೆರಿಗೆ ಸಂಗ್ರಹ ಆರಂಭಿಸಿದ್ದು ಖಂಡನೀಯ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.ತಾಲೂಕಿನ ಜಿ.ಹೊಸಹಳ್ಳಿ ಬಳಿಯ ಟೋಲ್ ನಿರ್ಮಿಸಿರುವ ಸ್ಥಳದಲ್ಲಿ ಬೆಳಿಗ್ಗೆ ಜಮಾಯಿಸಿದ ನೂರಾರು ರೈತರು ಸರ್ಕಾರ ಹಾಗೂ ಜಿಲ್ಲಾಡಳಿತ, ತಾಲೂಕು ಆಡಳಿತ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿ, ರೈತಾಪಿ ವರ್ಗ ಇರುವ ಹೊಸಹಳ್ಳಿ ಸುತ್ತಲಿನ ಗ್ರಾಮದ ರೈತರಿಗೆ ಕೃಷಿ ಚಟುವಟಿಕೆಗೆ ತೊಂದರೆ ಮಾಡಿದ ಟೋಲ್ ಚಿಕ್ಕ ರಸ್ತೆಯಲ್ಲಿ ರೈತರ ವಾಹನಕ್ಕೆ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ.

ಇಕ್ಕಟ್ಟಿನ ರಸ್ತೆಯಲ್ಲಿನ ಟೋಲ್ ದಿಢೀರ್ ಹತ್ತು ವರ್ಷದ ಬಳಿಕ ಬಂದಿದ್ದು, ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಸರ್ಕಾರ ಹಣ ಕ್ರೋಢೀಕರಣಕ್ಕೆ ರೈತರ ಬಳಿ ತೆರಿಗೆ ಸಂಗ್ರಹಕ್ಕೆ ಮುಂದಾಗಿದೆ. ಇದು ಅವೈಜ್ಞಾನಿಕ ಎಂದು ಈಗಾಗಲೇ ಹೋರಾಟ ಮಾಡಿದ್ದರೂ ಸಹ ತಿಂಗಳಲ್ಲಿ ಟೋಲ್ ಮರು ನಿರ್ಮಾಣ ಮಾಡಿ ತೆರಿಗೆ ಪಡೆಯುತ್ತಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ಟೋಲ್ ತೆರವು ಮಾಡದಿದ್ದರೆ ಶಾಂತಿ ಹೋರಾಟ ಉಗ್ರ ರೂಪ ಪಡೆಯುವುದರಲ್ಲಿ ಸಂದೇಹವಿಲ್ಲ ಎಂದು ಎಚ್ಚರಿಸಿದರು.ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿದರೆ, ರಾಜ್ಯ ಸರ್ಕಾರ ಹುಡುಕಿ ಹಳೇ ರಸ್ತೆಗಳಿಗೆ ತೆರಿಗೆ ಹಾಕಲು ಟೋಲ್ ನಿರ್ಮಾಣ ಮಾಡುತ್ತಿದೆ. ಇದು ಹಣವಿಲ್ಲದೆ ಗ್ಯಾರಂಟಿ ಯೋಜನೆ ನಡೆಸಲು ನಡೆದಿರುವ ತಂತ್ರ. ರೈತರ ಮೇಲೆ ಪ್ರಹಾರ ಮಾಡುತ್ತಾ ಹಣ ಮಾಡಲು ಮುಂದಾಗಿದ್ದಾರೆ. ಅವೈಜ್ಞಾನಿಕ ಟೋಲ್ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಿದ್ದರೂ ಸಮಸ್ಯೆ ಮತ್ತಷ್ಟು ಕಗ್ಗಂಟು ಮಾಡುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಕೂಡಲೇ ಟೋಲ್ ತೆರವು ಮಾಡಬೇಕು ಎಂದು ಆಗ್ರಹಿಸಿದರು.ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ, ಕೇಶಿಪ್ ರಸ್ತೆಯ ಎರಡೂ ಬದಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಈಗಾಗಲೇ ಎರಡು ಬಾರಿ ತೆರಿಗೆ ಹಣ ನೀಡಿ ಈ ರಸ್ತೆಗೆ ಬರಬೇಕಿದೆ. ಮಂಡ್ಯ ತಲುಪುವ ಈ ರಸ್ತೆ ಕೇವಲ ರೈತರ ವಾಹನ ಮಾತ್ರ ಓಡಾಡುತ್ತದೆ. ಹೋರಾಟ ಮಾಡಿ ಸ್ಥಗಿತ ಮಾಡಿದ್ದರೂ ಮರಳಿ ಟೋಲ್ ಸಂಗ್ರಹ ಮುಂದಾಗಿರುವುದು ಖಂಡನೀಯ ಎಂದರು.ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ಇಲ್ಲಿ ಯಾವುದೇ ಕೈಗಾರಿಕಾ ವಲಯ ಇಲ್ಲ. ಬೃಹತ್ ವಾಹನ ಸಂಚಾರ ಮಾಡಲ್ಲ. ನಮ್ಮ ಶಾಂತಿ ಹೋರಾಟ ಉಗ್ರ ರೂಪಕ್ಕೆ ತಿರುಗುವ ಮುನ್ನ ಟೋಲ್ ತೆರವು ಮಾಡುವಂತೆ ಒತ್ತಾಯಿಸಿದರು.ರೈತ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟೇಗೌಡ ಹಾಗೂ ಜೆಡಿಎಸ್ ಮುಖಂಡ ಹೊನ್ನಗಿರಿಗೌಡ ಮಾತನಾಡಿದರು. ಸುಮಾರು ನಾಲ್ಕು ಗಂಟೆ ಮಳೆಯಲ್ಲೇ ನಡೆದ ಪ್ರತಿಭಟನೆಗೆ ಶಾಸಕ ಎಸ್.ಆರ್.ಶ್ರೀನಿವಾಸ್ ಹಾಗೂ ತಹಸೀಲ್ದಾರ್ ಆರತಿ.ಬಿ ಪ್ರತಿಭಟನಾಕಾರರ ಜೊತೆ ಮಾತನಾಡಿ, ನಂತರ ಸಂಬಂಧಪಟ್ಟ ರಸ್ತೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚಿಸಿ ವರ್ಷಕ್ಕೆ ಒಂದು ಕೋಟಿ ಸಂಗ್ರಹದ ಟೆಂಡರ್ ಇಲ್ಲಿ ಆಗಿದೆ. ಆದರೆ ವಾಸ್ತವದಲ್ಲಿ ರೈತರ ಬಳಕೆಯ ರಸ್ತೆ ಇದಾಗಿದೆ. ಈ ಟೋಲ್ ಬಗ್ಗೆ ಸಂಬಂಧಪಟ್ಟ ಸಚಿವರು ಹಾಗೂ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ಮುಂದಿನ ಹದಿನೈದು ದಿನ ಯಾವುದೇ ತೆರಿಗೆ ಸಂಗ್ರಹ ಮಾಡದೆ ಕಾರ್ಯ ಚಟುವಟಿಕೆ ನಿಲ್ಲಿಸಲು ಸೂಚಿಸಿದರು. ನಂತರ ತಾತ್ಕಾಲಿಕವಾಗಿ ರೈತರು ಹೋರಾಟ ಸ್ಥಗಿತಗೊಳಿಸಿದರು.ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ಅಜ್ಜಪ್ಪ, ರೈತ ಸಂಘದ ಸಿ.ಜಿ.ಲೋಕೇಶ್, ಸಿ.ಟಿ.ಕುಮಾರ್, ಶಿವಕುಮಾರ್, ಕುಮಾರಸ್ವಾಮಿ, ಚಿಕ್ಕ ಚಂಗಾವಿ ಪ್ರಕಾಶ್, ಮಂಜಣ್ಣ, ಜಗದೀಶ್, ಗುರುಚನ್ನಬಸವಯ್ಯ, ಸತ್ತಿಗಪ್ಪ, ಕುಮಾರಸ್ವಾಮಿ, ಯೋಗೀಶ್, ಮುಖಂಡರಾದ ನರಸೇಗೌಡ ಸೇರಿದಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು, ನೂರಾರು ರೈತರು ಭಾಗವಹಿಸಿದ್ದರು.27 ಜಿ ಯು ಬಿ 1

ಗುಬ್ಬಿ ತಾಲೂಕಿನ ಜಿ.ಹೊಸಹಳ್ಳಿ ಬಳಿಯ ಟೋಲ್ ನಿರ್ಮಿಸಿರುವ ಸ್ಥಳದಲ್ಲಿ ಬೆಳಿಗ್ಗೆ ಜಮಾಯಿಸಿದ ನೂರಾರು ರೈತರು ಸರ್ಕಾರ ಹಾಗೂ ಜಿಲ್ಲಾಡಳಿತ, ತಾಲೂಕು ಆಡಳಿತ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ತಹಸೀಲ್ದಾರ್ .ಬಿ ಆರತಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ನಂಗೆ ಯಶಸ್ಸು ಸಿಕ್ಕೇ ಸಿಗುತ್ತೆ, ಸ್ವಲ್ಪ ಶ್ರಮ ಪಡಬೇಕು - ಹೈಕಮಾಂಡ್‌ ಬಳಿ ‘ಎಲ್ಲವನ್ನೂ’ ಮಾತಾಡಿದ್ದೇನೆ''
ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದು ಬ್ಲೇಡ್‌, ಮನೆಗೆ ಬಂದಿದ್ದು ಹಳೆ ಬಟ್ಟೆ