ಮೂಲಭೂತ ಸೌಕರ್ಯದಲ್ಲಿ ಯಲಬುರ್ಗಾ ಕ್ಷೇತ್ರ ನಂ.1

KannadaprabhaNewsNetwork | Published : May 27, 2025 11:48 PM
ರಾಜ್ಯದಲ್ಲಿ ಕಡಿಮೆ ಆದಾಯ, ಕಡಿಮೆ ಜನಸಂಖ್ಯೆ ಹೊಂದಿರುವ ಕ್ಷೇತ್ರ ಯಲಬುರ್ಗಾ. ಆರ್ಥಿಕ ಚಟುವಟಿಕೆ ಸಹ ಇಲ್ಲಿ ಕಡಿಮೆ ಇದ್ದರೂ ಇದೀಗ ಮೂಲಭೂತ ಸೌಕರ್ಯದಿಂದ ನಂ. 1 ಮಾಡಿದ್ದೇನೆ ಎಂದು ಬಸವರಾಜ ರಾಯರಡ್ಡಿ ಹೇಳಿದರು.

ಕುಕನೂರು:

ಮೂಲಭೂತ ಸೌಕರ್ಯದಲ್ಲಿ ಯಲಬುರ್ಗಾ ಕ್ಷೇತ್ರ ನಂ.1 ಆಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದರು.

ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭೋತ್ಸವ ಹಾಗೂ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, 1985ರಲ್ಲಿ ನಾನು ಪ್ರಥಮ ಬಾರಿಗೆ ಶಾಸಕನಾದಾಗ ಎರಡೇ ವಸತಿ ನಿಲಯ ಇದ್ದವು. ಸದ್ಯ ಒಟ್ಟು 60 ವಸತಿ ನಿಲಯಗಳಾಗಿವೆ. ರಾಜ್ಯದಲ್ಲಿ ಕಡಿಮೆ ಆದಾಯ, ಕಡಿಮೆ ಜನಸಂಖ್ಯೆ ಹೊಂದಿರುವ ಕ್ಷೇತ್ರ ಯಲಬುರ್ಗಾ. ಆರ್ಥಿಕ ಚಟುವಟಿಕೆ ಸಹ ಇಲ್ಲಿ ಕಡಿಮೆ ಇದ್ದರೂ ಇದೀಗ ಮೂಲಭೂತ ಸೌಕರ್ಯದಿಂದ ನಂ. 1 ಮಾಡಿದ್ದೇನೆ ಎಂದರು.

ತಳಕಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ 1200 ವಿದ್ಯಾರ್ಥಿಗಳಿದ್ದು,‌ ಅದರಲ್ಲಿ 80 ಪ್ರತಿಶತ ವಿದ್ಯಾರ್ಥಿಗಳು ಕಲ್ಯಾಣ ಕರ್ನಾಟಕ ಭಾಗದವರು. ಅಲ್ಲಿ 600 ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಮಂಜೂರಾಗಿದೆ. ತಳಬಾಳಿನ ಡಿಗ್ರಿ ಕಾಲೇಜಿನಲ್ಲಿ 400 ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಗುನ್ನಾಳದಲ್ಲಿ, ಮಂಗಳೂರಿನಲ್ಲಿ, ಇಟಗಿಯಲ್ಲಿ ಹಾಸ್ಟೆಲ್ ಹಾಗೂ ಯಲಬುರ್ಗಾದ ಪಿಜಿ ಸೆಂಟರ್‌ಗೆ ಹಾಸ್ಟೆಲ್‌ಗೆ ಮಂಜೂರು ಮಾಡಿಸಲಾಗುವುದು ಎಂದರು.

ಗುಣಮಟ್ಟದ ವಸತಿ ಶಾಲೆ,‌ ಶಿಕ್ಷಣ ನನ್ನ ಗುರಿಯಾಗಿದ್ದು ಯಡ್ಡೋಣಿಯಲ್ಲಿ ಆಶ್ರಮ ಶಾಲೆ ಆರಂಭಿಸಲಾಗಿದೆ ಎಂದ ರಾಯರಡ್ಡಿ, ಗದಗ-ವಾಡಿ ರೈಲ್ವೆ ಯೋಜನೆ ಮುಂದಿನ ದಿನದಲ್ಲಿ ಟ್ರಂಕ್ ರೂಟ್ ಆಗಲಿದೆ ಎಂದು ಹೇಳಿದರು.

ನೂತನ ಕುಕನೂರು ತಹಸೀಲ್ದಾರ್‌ ಕಚೇರಿ ಕಟ್ಟಡಕ್ಕೆ ₹ 18.5 ಕೋಟಿ ಮಂಜೂರಾಗಿದ್ದು ಸ್ಥಳೀಯರು ಕೋರ್ಟ್‌ ಮೋರೆ ಕಾರಣ ಕೆಲಸ ನಿಂತಿದೆ ಎಂದು ಅವರು, ಈ ಇಂದಿರಾ ಕ್ಯಾಂಟೀನಲ್ಲಿ ನಿತ್ಯ 900 ಜನ ಊಟ ಮಾಡಲು ಅವಕಾಶವಿರಲಿದ್ದು ಜನರಿಗೆ ಅನುಕೂಲವಾಗಲಿದೆ ಎಂದರು.

ಬಿಸಿಎಂ ಇಲಾಖೆ ಜಿಲ್ಲಾಧಿಕಾರಿ ನಾಗವೇಣಿ, ಪಪಂ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟೆ, ತಹಸೀಲ್ದಾರ್ ಎಚ್. ಪ್ರಾಣೇಶ, ತಾಪಂ ಇಒ ಸಂತೋಷ ಬಿರಾದಾರ, ಬಿಸಿಎಂ ತಾಲೂಕಾಧಿಕಾರಿ ಶಿವಶಂಕರ ಕರಡಕಲ್, ಪ್ರಮುಖರಾದ ಖಾಸಿಂಸಾಬ ತಳಕಲ್, ನಾರಾಯಣಪ್ಪ ಹರಪನಹಳ್ಳಿ, ಹನುಮಂತೇಗೌಡ ಚಂಡೂರು, ಮಂಜುನಾಥ ಕಡೇಮನಿ, ರೆಹೆಮಾನಸಾಬ್ ಮಕ್ಕಪ್ಪನವರ, ವೀರಯ್ಯ ತೋಂಟದಾರ್ಯಮಠ, ಸುಧೀರ್ ಕೊರ್ಲಹಳ್ಳಿ, ಸಂಗಮೇಶ ಗುತ್ತಿ, ವೀರಣ್ಣ ಕಲಬುರ್ಗಿ, ಮಂಜುನಾಥ ಯಡಿಯಾಪೂರ, ಪಪಂ ಸದಸ್ಯರಾದ ಸಿರಾಜ್ ಕರಮುಡಿ, ರಾಮಣ್ಣ ಬಂಕದಮನಿ, ಗಗನ ನೋಟಗಾರ ಇದ್ದರು.