ಶಾಂತಿ, ಸಹಬಾಳ್ವೆಗೆ ಯೋಗ ಪೂರಕ : ಸಂಸದ ಕ್ಯಾ.ಬ್ರಿಜೇಶ್‌ ಚೌಟ

KannadaprabhaNewsNetwork | Updated : Jun 23 2025, 11:47 PM IST

ದಕ್ಷಿಣ ಕನ್ನಡ ಜಿಲ್ಲಾಡಳಿತ, ಆಯುಷ್‌ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಯೋಗ ಭಾರತೀಯರ ಬದುಕಿನ ವಿಧಾನವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದ ಯೋಗವನ್ನು ಇಂದು ವಿದೇಶಗಳೂ ಒಪ್ಪಿಕೊಂಡು ಅನುಸರಿಸುತ್ತಿವೆ. ಯೋಗಕ್ಕೆ ಇಡೀ ಮನುಕುಲವನ್ನು ಒಗ್ಗೂಡಿಸುವ ಸಾಮರ್ಥ್ಯವಿದೆ. ಶಾಂತಿ, ಸಹಬಾಳ್ವೆಗೆ ಯೋಗ ಪೂರಕವಾಗಿದೆ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್‌ ಚೌಟ ಹೇಳಿದರು.ದಕ್ಷಿಣ ಕನ್ನಡ ಜಿಲ್ಲಾಡಳಿತ, ಆಯುಷ್‌ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಯೋಗದಂತಹ ಶ್ರೇಷ್ಠ ಸಂಸ್ಕೃತಿಯನ್ನು ನಮಗೆ ಕಲಿಸಿರುವ ಋುಷಿ, ಮುನಿಗಳು, ಗುರುಗಳನ್ನು ನಾವು ಸದಾ ಸ್ಮರಿಸಬೇಕು. ಭಾರತೀಯ ಸನಾತನ ಸಂಸ್ಕೃತಿಯ ಯೋಗವನ್ನು ಜಗತ್ತಿಗೆ ಪಸರಿಸಿದವರು ಪ್ರಧಾನಿ ನರೇಂದ್ರ ಮೋದಿ. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಯುದ್ಧದ ಕಾರ್ಮೋಡ ಆವರಿಸಿದೆ. ಉಗ್ರವಾದವನ್ನು ನಾಶ ಮಾಡಿ ಜಗತ್ತಿನಲ್ಲಿ ಶಾಂತಿ ನೆಲೆಸಬೇಕಾಗಿದೆ ಎಂದರು.ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ಮಾತನಾಡಿ, ಭಾರತದ ಯೋಗ ಪದ್ಧತಿಯನ್ನು ಹಲವು ದೇಶಗಳು ಅನುಕರಿಸುತ್ತಿವೆ. ವಸುದೈವ ಕುಟುಂಬಕಂ ಸಂದೇಶ ನೀಡಿರುವ ಭಾರತದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕು. ಯೋಗ ಮಾಡುವುದು ಒಂದು ದಿನಕ್ಕೆ ಸೀಮಿತವಾಗದೆ, ಪ್ರತಿದಿನ ಆಚರಣೆಯಲ್ಲಿರಬೇಕು. ದೈಹಿಕ, ಮಾನಸಿಕ ಸಮತೋಲನಕ್ಕೆ ಯೋಗ ಸಹಕಾರಿ. ಯೋಗವು ಜೀವನ ಶೈಲಿಯ ಭಾಗವಾಗಲಿ ಎಂದರು.ಶಾಸಕರಾದ ವೇದವ್ಯಾಸ ಕಾಮತ್‌, ಡಾ. ಭರತ್‌ ಶೆಟ್ಟಿ, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ದ.ಕ. ಜಿಪಂ ಸಿಇಒ ಡಾ. ಆನಂದ್‌, ಡಿಸಿಪಿ ರವಿಶಂಕರ್‌, ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್‌ ಡಿಸೋಜಾ, ಜಿಲ್ಲಾ ವಾರ್ತಾಧಿಕಾರಿ ಖಾದರ್‌ ಶಾ ಇದ್ದರು.

ಜಿಲ್ಲಾ ಆಯುಷ್‌ ಅಧಿಕಾರಿ ಡಾ. ಮಹಮ್ಮದ್‌ ಇಕ್ಬಾಲ್‌ ಸ್ವಾಗತಿಸಿದರು.ಯೋಗ ದಿನಾಚರಣೆ ಅಂಗವಾಗಿ ಯೋಗಪಟುಗಳು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಸಾಮೂಹಿಕ ಯೋಗಾಭ್ಯಾಸ ಮಾಡಿದರು. ಯೋಗ ಗುರು ಗೋಪಾಲಕೃಷ್ಣ ದೇಲಂಪಾಡಿ ಹಾಗೂ ಅವರ ಶಿಷ್ಯರು ಯೋಗಾಭ್ಯಾಸಕ್ಕೆ ಮಾರ್ಗದರ್ಶನ ನೀಡಿದರು. ಯೋಗಾಸನ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.