ಪೂರ್ಣಪ್ರಜ್ಞಾ ಶಾಲೆಯಲ್ಲಿ ಯೋಗ, ಪರಿಸರ ದಿನ । ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗ ಪ್ರದರ್ಶನ
ಇಂದಿನ ಒತ್ತಡದ ಜೀವನದಲ್ಲಿ ಮನುಷ್ಯನ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸ ಅಗತ್ಯವಾಗಿದೆ. ಯಾವುದೇ ವಯಸ್ಸಿನ ಮಿತಿಯಿಲ್ಲದೆ ಯೋಗವನ್ನು ಅಭ್ಯಾಸ ಮಾಡಿಕೊಳ್ಳಬೇಕು . ದೇಹ ಮತ್ತು ಮನಸ್ಸು ಎರಡನ್ನೂ ಸ್ವಸ್ಥವಾಗಿಡಲು ಯೋಗದಿಂದ ಸಾಧ್ಯವಿದೆ ಎಂದು ಪೂರ್ಣಪ್ರಜ್ಞಾ ಶಾಲೆಯ ಪ್ರಾಂಶುಪಾಲ ಪ್ರಶಾಂತ್ ಕುಮಾರ್ ಹೇಳಿದರು.
ಪಟ್ಟಣದ ಪೂರ್ಣಪ್ರಜ್ಞಾ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನ ಹಾಗೂ ಪರಿಸರ ದಿನ ಆಚರಿಸಲಾಯಿತು. ವೇಳೆ ಮಾತನಾಡಿ, ಯೋಗವೆಂದರೆ ಔಷಧ ರಹಿತ ಚಿಕಿತ್ಸಾ ಪದ್ಧತಿಯ ದೇಸಿ ಕ್ರಮ, ಮಿತ ಆಹಾರ ಸೇವನೆ, ಉಪವಾಸ, ವ್ಯಾಯಾಮದಂತಹ ಚಿಕಿತ್ಸಾ ಕ್ರಮಗಳ ಮೂಲಕ ಮನುಷ್ಯನ ದೇಹವನ್ನು ನಿಯಂತ್ರಣ ತರಬಹುದಾಗಿದೆ. ಪ್ರತಿದಿನ ಯೋಗ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಬಹುದು. ಜೆತೆಗೆ ಸರಳ ಯೋಗಗಳು ಮನಸ್ಸನ್ನು ಉಲ್ಲಾಸವಾಗಿಡುತ್ತದೆ ಎಂದು ತಿಳಿಸಿದರು.ಜ್ಞಾನ ವಿಜ್ಞಾನ ಸಮಿತಿಯ ಸೌಭಾಗ್ಯ ಅಂತೋಣಿ ಮಾತನಾಡಿ, ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ. ಪರಿಸರವನ್ನು ಉಳಿಸಿದರೆ ಮಾತ್ರ ಆರೋಗ್ಯವಾದ ಜೀವನ ನಡೆಸಲು ಸಾಧ್ಯ. ವಿದ್ಯಾರ್ಥಿಗಳು ಕನಿಷ್ಠ ಒಂದು ಗಿಡವನ್ನು ನೆಟ್ಟು ಬೆಳೆಸಬೇಕಾಗಿದೆ. ನಶಿಸಿ ಹೋಗುತ್ತಿರುವ ಪರಿಸರವನ್ನು ಉಳಿಸಿ, ಬೆಳೆಸಬೇಕಾಗಿರುವುದು ಎಲ್ಲರ ಜವಾಬ್ದಾರಿಯಾಗಿದೆ. ಶಾಲೆಯ ಪರಿಸರವನ್ನು ಶುಚಿತ್ವದಿಂಡುವುದು ವಿದ್ಯಾರ್ಥಿಗಳು ಕರ್ತವ್ಯವಾಗಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ನೆನಪಿಗಾಗಿ ಗಿಡವನ್ನು ನೆಟ್ಟು ಬೆಳೆಸಬೇಕು. ಸುತ್ತಲಿನ ಪರಿಸರವನ್ನು ಸಂರಕ್ಷಿಸಿ, ವಿದ್ಯಾರ್ಥಿ ಜೀವನದಿಂದಲೇ ಪರಿಸರ ಪ್ರೇಮವನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯದರ್ಶಿ ಮುರಳಿ ಹತ್ವಾರ್, ಸಹ ಕಾರ್ಯದರ್ಶಿ ಅನಂತರಾಮು, ಪ್ರಾಥಮಿಕ ಶಾಲೆಯ ಪ್ರಾಂಶುಪಾಲೆ ಸುನಿತಾ ಕುಮಾರಿ ಹಾಜರಿದ್ದರು.