ಯೋಗವು ಮನುಕುಲಕ್ಕೆ ಭಾರತ ಕೊಟ್ಟ ಕೊಡುಗೆ: ಸೀಕಲ್ ರಾಮಚಂದ್ರಗೌಡ

KannadaprabhaNewsNetwork | Published : Jun 22, 2025 11:48 PM

ಪ್ರಧಾನಿ ನರೇಂದ್ರ ಮೋದಿಯವರು ಯೋಗದ ಮಹತ್ವವನ್ನು ವಿಶ್ವಕ್ಕೆ ಸಾರಿದರು. ಈ ಮೂಲಕ ಭಾರತೀಯರಲ್ಲಿ ದೇಶಿ ಯೋಗ ಪದ್ಧತಿ, ಆಹಾರ ಪದ್ಧತಿ, ಸಂಗೀತ - ಸಂಪ್ರದಾಯಗಳನ್ನು ಮರು ಪ್ರತಿಷ್ಠಾಪಿಸುತ್ತಿದ್ದಾರೆ .

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಯೋಗ ಹಾಗೂ ಸಂಗೀತ ಭಾರತೀಯರ ಜೀವನ ಶೈಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.

ನಗರದ ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ ಇಕೋ ಕ್ಲಬ್, ಕೆವಿ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಹಾಗೂ ಶ್ರೀ ಕೆವಿ ದೈಹಿಕ ಶಿಕ್ಷಣ ಮಹಾವಿದ್ಯಾಲಯ ವತಿಯಿಂದ ಶನಿವಾರ ಏರ್ಪಡಿಸಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯೋಗ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಭಾರತೀಯ ಕೌಟುಂಬಿಕ ಪದ್ಧತಿ, ಆಹಾರ ಪದ್ಧತಿ ಮತ್ತು ವ್ಯಾಯಾಮ ಪದ್ಧತಿಗಳು ಅತ್ಯಂತ ವೈಶಿಷ್ಟ್ಯಪೂರ್ಣವಾಗಿವೆ .ಇತ್ತೀಚಿನ ದಿನಗಳಲ್ಲಿ ಭಾರತೀಯರು ಬದಲಾದ ಜೀವನ ಶೈಲಿಗೆ ಮಾರು ಹೋಗುತ್ತಿದ್ದಾರೆ. ಯೋಗಾಸನ, ಪ್ರಾಣಾಯಾಮ, ಸಂಗೀತ ಮತ್ತು ಸಾಂಪ್ರದಾಯಿಕ ಆಹಾರ ಪದ್ಧತಿಗಳಿಂದ ದೂರವಾಗುತ್ತಿರುವುದು ದೌರ್ಭಾಗ್ಯವೇ ಸರಿ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಯೋಗದ ಮಹತ್ವವನ್ನು ವಿಶ್ವಕ್ಕೆ ಸಾರಿದರು. ಈ ಮೂಲಕ ಭಾರತೀಯರಲ್ಲಿ ದೇಶಿ ಯೋಗ ಪದ್ಧತಿ, ಆಹಾರ ಪದ್ಧತಿ, ಸಂಗೀತ - ಸಂಪ್ರದಾಯಗಳನ್ನು ಮರು ಪ್ರತಿಷ್ಠಾಪಿಸುತ್ತಿದ್ದಾರೆ ಎಂದು ಹೇಳಿದರು.

ಪ್ರಸ್ತುತ ವಿವಿಧ ರಾಷ್ಟ್ರಗಳು ಯೋಗ ಆಚರಣೆಯಲ್ಲಿ ತೊಡಗಿವೆ. ನಮ್ಮ ದೇಶದ ಪ್ರಾಚೀನ ಪರಂಪರೆಯಲ್ಲಿ ಪತಂಜಲಿ ಮಹರ್ಷಿಯವರಿಂದ ರೂಪುಗೊಂಡು, ಕೋಲಾರ ಜಿಲ್ಲೆಯಲ್ಲಿ ಜನಿಸಿದ ಬಿ.ಕೆ.ಎಸ್ ಅಯ್ಯಂಗಾರ್ ಅವರು ಜಾಗತಿಕವಾಗಿ ಯೋಗದ ಅಭ್ಯಾಸವನ್ನು ಕ್ರಾಂತಿಗೊಳಿಸಿದರು. ಆರೋಗ್ಯ ಸಮಸ್ಯೆಗಳಿಂದ ಕೂಡಿದ ಬಾಲ್ಯದ ಹೊರತಾಗಿಯೂ, ಅಯ್ಯಂಗಾರ್ ಅವರ ಯೋಗದ ಪಯಣ, ಅವರ ಸೋದರ ಮಾವ ಟಿ. ಕೃಷ್ಣಮಾಚಾರ್ಯರ ಮಾರ್ಗದರ್ಶನದಲ್ಲಿ ಜೀವಮಾನದ ಸಮರ್ಪಣೆಯನ್ನಾಗಿ ಪರಿವರ್ತಿಸಿತು. ಹೀಗೆ ಆಚರಣೆಗೆ ಬಂದ ಯೋಗ ಶಿಕ್ಷಣಕ್ಕೆ ಇಂದು ಜಗತ್ತಿನಾದ್ಯಂತ ಬೇಡಿಕೆ ಮತ್ತು ಗೌರವವಿದ್ದು, ಯೋಗವನ್ನು ಮನುಕುಲಕ್ಕೆ ಕೊಡುಗೆಯಾಗಿ ನೀಡಿರುವ ಗೌರವಕ್ಕೆ ಭಾರತ ಪಾತ್ರವಾಗಿದೆ. ಉತ್ತಮ ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ನಾವೆಲ್ಲರೂ ಪ್ರತಿದಿನ ಯೋಗಾಭ್ಯಾಸ ಮಾಡುವ ಪ್ರತಿಜ್ಞೆ ಮಾಡೋಣ ಎಂದು ಕರೆ ನೀಡಿದರು.