ಯೋಗ ದಿನಾಚರಣೆ । ಹೊಣೆಗಾರಿಕೆ ಸ್ವೀಕಾರ ಸಮಾರಂಭ । ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ
ಯೋಗವು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸಮತೋಲನವನ್ನು ತರಲು ಸಹಾಯಕವಾಗುತ್ತದೆ. ಅಲ್ಲದೇ ವೈಜ್ಞಾನಿಕ ಅಧ್ಯಯನಗಳೂ ಸಹ ಯೋಗದ ಪ್ರಭಾವವನ್ನು ಮಾನ್ಯ ಮಾಡಿವೆ ಎಂದು ಆಳಂದ ಮಾಜಿ ಶಾಸಕ ಸುಭಾಷ್ ಆರ್.ಗುತ್ತೇದಾರ ಅಭಿಪ್ರಾಯಪಟ್ಟರು.
ಪಟ್ಟಣದ ಎಸ್ಆರ್ಜಿ ಫೌಂಡೇಷನ್ ಅಡಿಯಲ್ಲಿ ಎಸ್ಆರ್ಜಿ ಆಂಗ್ಲ್ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚಾರಣೆ ಹಾಗೂ ಹೊಣೆಗಾರಿಕೆ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಜೀವನದಲ್ಲಿ ಪ್ರತಿದಿನ ಯೋಗ ಅಭ್ಯಾಸ ಮಾಡುವುದರಿಂದ ರೋಗಮುಕ್ತ ಜೀವನ ನಡೆಸಬಹುದಾಗಿದೆ. ಯೋಗ ಮೂಲತಃ ಅತ್ಯಂತ ಪ್ರಾಚೀನ ಕಲೆ ಇದು ಆರೋಗ್ಯಕರ ದೇಹದೊಳಗೆ ಆರೋಗ್ಯಕರ ಮನಸ್ಸನ್ನು ಬೆಳೆಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಯೋಗ ಕಲಿಕೆಯಿಂದ ಮಕ್ಕಳಲ್ಲಿ ವೈಚಾರಿಕತೆ, ಭಾವನಾತ್ಮಕ ರಚನೆ ಮತ್ತು ಸೃಜನ ಶೀಲತೆಯನ್ನು ಗಮನಿಸಬಹುದಾಗಿದೆ. ʼಯಮ-ನಿಯಮ ಪಾಪ ನಿವೃತ್ತಿʼ ಅಂದರೆ ಯಮ-ನಿಯಮಗಳ ಅಭ್ಯಾಸವು ವ್ಯಕ್ತಿಯ ಮನಸ್ಸಿನಲ್ಲಿ ಬರುವ ಪಾಪಕರ್ಮಗಳನ್ನು ಮಾಡಬೇಕೆಂಬ ಯೋಜನೆಗಳನ್ನು ನಾಶಗೊಳಿಸುತ್ತದೆ ಎಂದು ಹೇಳಿದರು.
ಇಂದಿನ ಮಕ್ಕಳಿಗೆ ಕೇವಲ ಪುಸ್ತಕ ಓದು ನೀಡುವುದು ನೀಡುವುದಷ್ಟೇ ನಮ್ಮ ಕರ್ತವ್ಯವಾಗಬಾರದು. ಅವರಿಗೆ ಹೊಣೆಗಾರಿಕೆ ನಿಭಾಯಿಸುವ ಮತ್ತು ನಾಯಕತ್ವದ ಗುಣ ಪರಿಚಯಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.ಪ್ರಾಮಾಣಿಕತೆ, ಅಧಿಕಾರ ನೀಡುವ ಸಾಮಥ್ರ್ಯ, ಸಂವಹನ, ದೃಢ ವಿಶ್ವಾಸ, ನಂಬಿಕೆ ಧೈರ್ಯ ಮತ್ತು ತಾಳ್ಮೆ, ಔದಾರ್ಯತೆ ನಿರ್ವಹಣಾ ಕಲೆ, ಸಕಾರಾತ್ಮಕ ಭಾವನೆ ಉತ್ತಮ ನಾಯಕತ್ವದ ಗುಣಗಳಾಗಿವೆ ಅವುಗಳನ್ನು ಬೆಳಸಿಕೊಳ್ಳಲು ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದರು.
ಇಂದಿನ ಮಕ್ಕಳಲ್ಲಿ ನಾಯಕತ್ವ ಗುಣ ಹುಟ್ಟಿನಿಂದಲೇ ಬರುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ನಡೆದು ಹೋಗಲು ಶಿಕ್ಷಕರು ಮತ್ತು ಪಾಲಕರು ಮಾರ್ಗದರ್ಶನ ಮಾಡಬೇಕು ಎಂದರು.ಯೋಗ ತರಬೇತುದಾರ ಮಾಜಿ ಯೋಧರ ಅಧಿನಸ್ಥ ಅಧಿಕಾರಿ ಗುರುಭೀಮರಾಯ ಕವಲಗಾ, ಯೋಗ ಮತ್ತು ಪ್ರಾಣಾಯಾಮದ ಮಹತ್ವ ಬಗ್ಗೆ ತಿಳಿ ಹೇಳಿ ಶಾಲೆಯ ಸುಮಾರು 600 ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಯೋಗ ಪ್ರಸ್ತುತ ಪಡಿಸಿದರು.
ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ, ವಿಷಯ ಪರಿವೀಕ್ಷಕ ಪಂಕಜ ಪಾಟೀಲ, ಶಾಲೆಯ ಪ್ರಾಚಾರ್ಯೆ ಜ್ಯೋತಿ ವಿಶಾಖ, ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.