ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ದೆಹಲಿ ಗಣರಾಜ್ಯೋತ್ಸವಕ್ಕೆ ಯಾದಗಿರಿಯ ಯೋಗಪಟು ಶಿವಾರೆಡ್ಡಿ ವಿಶೇಷ ಅತಿಥಿ

KannadaprabhaNewsNetwork | Published : Jan 12, 2024 1:46 AM

ಜ. 26 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಶಿವಾರೆಡ್ಡಿ ಯೋಗ ಪ್ರದರ್ಶಿಸಲ್ಲಿದ್ದಾರೆ. ಯಾದಗಿರಿಯಲ್ಲಿ ಸ್ವಾಮಿ ವಿವೇಕಾನಂದ ಯೋಗಾ ಟ್ರಸ್ಟ್ ಮೂಲಕ ಸಾವಿರಾರು ಜನರಿಗೆ ಯೋಗ ಕಲಿಸುತ್ತಿರುವ 35 ವರ್ಷದವರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಜ.26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭಕ್ಕೆ ಯಾದಗಿರಿಯ ಯೋಗ ತರಬೇತುದಾರ, ಅರಕೇರಾ (ಬಿ) ಗ್ರಾಮದ ಶಿವಾರೆಡ್ಡಿ ಅವರಿಗೆ ವಿಶೇಷ ಅತಿಥಿಗಳೆಂದು ಕೇಂದ್ರ ರಾಷ್ಟ್ರೀಯ ಆಯುಷ್‌ ಮಿಷನ್‌ ಯೋಜನೆ ನಿರ್ದೇಶಕರಿಂದ ಆಹ್ವಾನ ಪತ್ರ ಆಹ್ವಾನ ಬಂದಿದೆ.

ಯಾದಗಿರಿಯಲ್ಲಿ ಸ್ವಾಮಿ ವಿವೇಕಾನಂದ ಯೋಗಾ ಟ್ರಸ್ಟ್ ಮೂಲಕ ಸಾವಿರಾರು ಜನರಿಗೆ ಯೋಗ ಕಲಿಸುತ್ತಿರುವ 35 ವರ್ಷದ ಶಿವಾರೆಡ್ಡಿ, ಸದ್ಯ, ಮೈಲಾಪುರದ ಹೋಮೊಯೋಪಥಿ ಚಿಕಿತ್ಸಾಲಯದಲ್ಲಿ ಯೋಗ ತರಬೇತುದಾರನೆಂದು ಕಾರ್ಯನಿರ್ವಹಿಸುತ್ತಿದ್ದಾರೆ. ಶಿವಾರಡ್ಡಿ ರಾಜ್ಯ ಆಯುಷ್ ಇಲಾಖೆಯಿಂದ ನಾಮ ನಿರ್ದೇಶನಗೊಂಡಿದ್ದರು.

ಯಾದಗಿರಿಯ ಶಿವಾರೆಡ್ಡಿ ಸೇರಿದಂತೆ, ಕಲಬುರಗಿ, ಕೊಪ್ಪಳ, ಬಳ್ಳಾರಿ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ ವಿವಿಧೆಡೆಯ ರಾಜ್ಯದ 18 ಯೋಗ ತರಬೇತುದಾರರನ್ನು ರಾಜ್ಯ ಆಯುಷ್ ಇಲಾಖೆ (ಕಾರ್ಯಕ್ರಮ) ನಾಮನಿರ್ದೇಶನ ಮಾಡಿ, ಪಟ್ಟಿಯನ್ನು ಕೇಂದ್ರ ಸರ್ಕಾರದ ಆಯುಷ್ ಇಲಾಖೆ ಕಾರ್ಯದರ್ಶಿಗಳಿಗೆ ಕಳುಹಿಸಿತ್ತು.

ಈಗ, ಇವರೆಲ್ಲರಿಗೂ ವಿಶೇಷ ಅತಿಥಿಗಳೆಂದು ಪರಿಗಣಿಸಿ ದೆಹಲಿಯಲ್ಲಿ ಗಣರಾಜ್ಯೋತ್ಸವದಲ್ಲಿ ರಾಜ್ಯದ ಪರವಾಗಿ ಪ್ರತಿನಿಧಿಸಲು ರಾಜ್ಯ ಆಯುಷ್ ಇಲಾಖೆ ನಿರ್ದೇಶಕರು (ಆಯುಕ್ತರು) ಮತ್ತು ರಾಷ್ಟ್ರೀಯ ಆಯುಷ್ ಮಿಷನ್ ಯೋಜನೆಯ ನಿರ್ದೇಶಕರು ಶಿಫಾರಸು ಪ್ರಕಟಿಸಿದ್ದಾರೆ. ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೆದುರು ಯೋಗ ಪ್ರದರ್ಶನ ನೀಡಲಿದ್ದಾರೆ.

ಯಾದಗಿರಿಯ ಜವಾಹರ್ ಮಹಾವಿದ್ಯಾಲಯದಿಂದ ಕಾನೂನು ಪದವಿ ಪಡೆದಿರುವ ಶಿವಾರೆಡ್ಡಿ, ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಪಿಜಿ ಡಿಪ್ಲೋಮಾ ಇನ್ ಯೋಗಾ ಸರ್ಟಿಫಿಕೇಟ್ ಕೋರ್ಸ್ ಪೂರ್ಣಗೊಳಿಸಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಾಧನೆಗೈದಿರುವ ಶಿವಾರೆಡ್ಡಿ, 2023ರಲ್ಲಿ ಮೈಸೂರು ದಸರಾ ಯೋಗದಲ್ಲಿ ಸ್ಪರ್ಧೆಯ ನಿರ್ಣಾಯಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 2017 ರಾಜ್ಯಮಟ್ಟದ ಯೋಗ ಪ್ರತಿಭಾ ಪುರಸ್ಕಾರ ಲಭಿಸಿದೆ. ರಾಜ್ಯ ಯೋಗಾಸನ ಸಂಸ್ಥೆ ನಿರ್ಣಾಯಕರಾಗಿದ್ದಾರೆ.