- ಜಮೀರ್, ಜಬ್ಬಾರ್ ಬಗ್ಗೆ ಸಚಿವ ಎಸ್ಸೆಸ್ಸೆಂ ಹಗುರ ಹೇಳಿಕೆ ಸಲ್ಲದು । ತಕ್ಷಣವೇ ಸಮಾಜದ ಕ್ಷಮೆ ಕೇಳಲು ತಾಕೀತು - - -
ದಾವಣಗೆರ ದಕ್ಷಿಣ ಕ್ಷೇತ್ರದ ಬಹುಸಂಖ್ಯಾತ ಮುಸ್ಲಿಮರಿಗೆ ಉಪ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಕೇಳಲು ನಮಗೆ ಯಾರ ಅಪ್ಪಣೆಯೂ ಬೇಕಿಲ್ಲ. ಸಂವಿಧಾನಬದ್ಧ ನಮ್ಮ ಹಕ್ಕನ್ನು ನಾವು ಕೇಳುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಘನಿ ತಾಹೀರ್ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನಿಂದಲೂ ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷ, ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಹಾಗೂ ಕಳೆದ ಲೋಕಸಭೆ ಚುನಾವಣೆಯಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನೇ ಗೆಲ್ಲಿಸಿದ್ದೇವೆ. ಈಗ ನಮಗೊಂದು ಅವಕಾಶ ಬಂದಿದೆ. ಈಗ ಉಪ ಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ಕೇಳಲು ನಾವ್ಯಾರ ಅಪ್ಪಣೆ ಕೇಳಬೇಕಾಗಿಲ್ಲ ಎಂದರು.ದಕ್ಷಿಣ ಕ್ಷೇತ್ರದಲ್ಲಿ ಅಹಿಂದ ವರ್ಗದ ಜನರೇ ಹೆಚ್ಚಾಗಿದ್ದಾರೆ. ಇಡೀ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ. ಹಾಗಾಗಿ ಸಚಿವ ಜಮೀರ್ ಅಹಮ್ಮದ್ ಮುಸ್ಲಿಮರಿಗೆ ಟಿಕೆಟ್ ನೀಡುವಂತೆ ವರಿಷ್ಠರಿಗೆ ಒತ್ತಾಯಿಸಿದ್ದಾರೆ. ಎಂಎಲ್ಸಿ ಅಬ್ದುಲ್ ಜಬ್ಬಾರ್ ಸಹ ಟಿಕೆಟ್ ಕೇಳಿದ್ದಾರೆ. ಆದರೆ, ಇವರಿಬ್ಬರ ಬಗ್ಗೆ ಸಚಿವ ಮಲ್ಲಿಕಾರ್ಜುನ ಏಕವಚನದಲ್ಲಿ ಮಾತನಾಡಿದ್ದು ಖಂಡನೀಯ. ಗುಲಾಂ ನಬೀ, ದಿಗ್ವಿಜಯ ಸಿಂಗ್ ಸೇರಿದಂತೆ ಎಐಸಿಸಿ ನಾಯಕರ ಬಳಿ ಹೋಗಲು, ಶಾಮನೂರು ಶಿವಶಂಕರಪ್ಪ ಅವರಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದು ಇದೇ ಅಬ್ದುಲ್ ಜಬ್ಬಾರ್ ಎಂಬುದನ್ನೂ ಸಚಿವರು ಮರೆಯಬಾರದು. ತಕ್ಷಣವೇ ಸಮಾಜದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಜಮೀರ್ ಅಹಮ್ಮದ್ ಅವರನ್ನು ಇಡೀ ಮುಸ್ಲಿಂ ಸಮುದಾಯ ನಾಯಕನೆಂದು ಒಪ್ಪಿಕೊಂಡಿದ್ದು, ರಾಜ್ಯಾದ್ಯಂತ 224 ಕ್ಷೇತ್ರಗಳಲ್ಲೂ ಸಚಿವ ಜಮೀರ್ ಅಹಮ್ಮದ್ ಪ್ರಭಾವವಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 90 ಸಾವಿರ ಮತದಾರರಿದ್ದೇವೆ. ಅಹಿಂದ ವರ್ಗಗಳೇ ದಕ್ಷಿಣದಲ್ಲಿ ಶೇ.90ರಷ್ಟು ಮತದಾರರಿದ್ದು, ಮುಸ್ಲಿಮರಿಗೆ ಅವಕಾಶ ನೀಡಿದರೆ ಅಹಿಂದ ವರ್ಗದ ಶಾಸಕರನ್ನು ದಕ್ಷಿಣ ಕ್ಷೇತ್ರ ಹೊಂದಲಿದೆ. ಕೆಪಿಸಿಸಿ, ಎಐಸಿಸಿ ನಾಯಕರಿಗೆ ದಕ್ಷಿಣ ಟಿಕೆಟ್ ಅನ್ನು ಮುಸ್ಲಿಮರಿಗೆ ನೀಡುವಂತೆ ಒತ್ತಡ ಹೇರುವಂತೆ ಸಮಾಜದ ಧರ್ಮಗುರುಗಳು, ಮುಖಂಡರು ಒಕ್ಕೊರಲಿನಿಂದ ಒತ್ತಾಯಿಸಿದ್ದೇವೆ ಎಂದು ತಿಳಿಸಿದರು.
ಮುಸ್ಲಿಂ ಮುಖಂಡರಾದ ಎಸ್.ಕೆ. ಅಮ್ಜದ್ವುಲ್ಲಾ, ಖಾಸಿಂ ಸಾಬ್, ರಿಯಾಜ್, ಅಬ್ದುಲ್ ಜಬ್ಬಾರ್, ನೂರ್ ಅಹಮ್ಮದ್, ಶೇಖ್ ಅಹಮ್ಮದ್, ಶಹನವಾಜ್ ಖಾನ್ ಇತರರು ಇದ್ದರು.- - -
(ಕೋಟ್) ಮುಸ್ಲಿಮರು ಇನ್ನೂ ಎಷ್ಟು ದಿನ ಬರೀ ಪಂಕ್ಚರ್ ಹಾಕಿಕೊಂಡಿರಬೇಕು? ನಮಗೆ ಯಾವುದೇ ಗುರು, ಮಠ ಇಲ್ಲ. ನಮಗೂ ರಾಜಕೀಯ ಸ್ಥಾನಮಾನ, ಅವಕಾಶಗಳು ಬೇಕು. ಎಂಎಲ್ಸಿ ಅಬ್ದುಲ್ ಜಬ್ಬಾರ್ ತಳಮಟ್ಟದಿಂದ ಪಕ್ಷದ ಪೋಸ್ಟರ್ ಅಂಟಿಸಿ, ಬೆಳೆದವರು. 4 ದಶಕದಿಂದ ರಾಜಕಾರಣ ಮಾಡಿದ್ದಾರೆಯೇ ಹೊರತು, ದುಡ್ಡು ಮಾಡಿಲ್ಲ.- ಸಂತೆಬೆನ್ನೂರು ಎಸ್.ಕೆ. ಎಜಾಜ್ ಸಾಬ್, ಮುಸ್ಲಿಂ ಮುಖಂಡ.
- - --10ಕೆಡಿವಿಜಿ1:
ದಾವಣಗೆರೆಯಲ್ಲಿ ಮಂಗಳವಾರ ಮುಸ್ಲಿಂ ಸಮಾಜದ ಮುಖಂಡರಾದ ಅಬ್ದುಲ್ ಘನಿ ತಾಹೀರ್, ಸಂತೇಬೆನ್ನೂರು ಎಸ್.ಕೆ.ಎಜಾಜ್ ಸಾಬ್ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಟಿಕೆಟ್ ಕುರಿತು ಮಾತನಾಡಿದರು.