ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನೀವು ಸ್ಥಳೀಯರು, ನಮ್ಮೂರಿನ ಮಗ, ಹಾಗಾಗಿ ನಮ್ಮ ಮತ ನಿಮಗೆ ನೀಡುತ್ತೇವೆ, ನೀವು ಗೆಲ್ತೀರಿ.! ಹೀಗೆಂದು ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ಅವರಿಗೆ ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯ ಸುತ್ತೂರು ಮತ್ತು ಇರಸವಾಡಿ ಗ್ರಾಮದ ಹಲವು ದಲಿತ ಮುಖಂಡರು ವಾಗ್ದಾನ ಮಾಡಿದರು.ಮತಯಾಚನೆಗಾಗಿ ಬಾಲರಾಜು ತೆರಳಿದ ವೇಳೆಯಲ್ಲಿ ಹಾಜರಿದ್ದ ಅನೇಕ ದಲಿತ ಮುಖಂಡರು ಹಾಗೂ ಯುವಕರು ನೀವು ನಮ್ಮೂರಿನವರು, ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ, ಗೆಲ್ಲಿಸಿ ನಾವು ಅವರನ್ನು ಹುಡುಕಿಕೊಂಡು ಹೋಗಲು ಸಾಧ್ಯವಿಲ್ಲ, ನೀವು ಗೆಲ್ತೀರ, ಗೆದ್ದ ಬಳಿಕ ನಮ್ಮೂರಿನಲ್ಲಿ ಆಗಬೇಕಾದ ಕೆಲಸ ಮಾಡಿಕೊಡಿ ಎಂದು ಮನವಿ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದರೆ ನೀವು ಕ್ಯೂನಲ್ಲಿ ನಿಲ್ಲಬೇಕಾಗುತ್ತತೆ: ಎಸ್.ಬಾಲರಾಜು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದರೆ, ಲೆಟರ್ ಬೇಕಾದರೆ, ಇನ್ನಿತರೆ ಕೆಲಸ, ಕಾರ್ಯಗಳಿಗಾಗಿ ಬೆಂಗಳೂರು, ಮೈಸೂರು, ನರಸೀಪುರ ಸೇರಿದಂತೆ ಹಲವೆಡೆ ಹುಡುಕಿಕೊಂಡು ಹೋಗಿ ಕ್ಯೂನಲ್ಲಿ ನಿಲ್ಲಬೇಕಾಗುತ್ತದೆ. ನಾನು ಸ್ಥಳೀಯನಾಗಿದ್ದು ಕಳೆದ 32 ವರ್ಷಗಳಿಂದಲೂ ಸಕ್ರಿಯ ರಾಜಕಾರಣದಲ್ಲಿರುವೆ. 2004ರಲ್ಲಿ 3ವರ್ಷ ಶಾಸಕರಾಗಿದ್ದು ಬಿಟ್ಟರೆ ನನಗೆ ರಾಜಕೀಯದಲ್ಲಿ ಅಂತಹ ಅವಕಾಶ ಸಿಕ್ಕಿಲ್ಲ, ನನಗೆ ಅವಕಾಶ ಸಿಕ್ಕರೂ, ಸಿಗದಿದ್ದರೂ ಸಹಾ ನನ್ನ ಕೈಲಾದ ಮಟ್ಟಿಗೆ ಈ ಭಾಗದ ಜನರ ದುಃಖ ದುಮ್ಮಾನಗಳಿಗೆ ಸ್ಪಂದಿಸಿರುವೆ, ಬಿಜೆಪಿ ಹೈಕಮಾಂಡ್ ನನಗೆ ಟಿಕೆಟ್ ನೀಡುವ ಮೂಲಕ ಅವಕಾಶ ಕಲ್ಪಿಸಿದೆ. ಹಾಗಾಗಿ ನನಗೊಂದು ಅವಕಾಶ ಮಾಡಿಕೊಡಿ. ನಾನು ಇಲ್ಲೆ ಇದ್ದು ನಿಮ್ಮ ಸೇವೆ ಮಾಡುವೆ, ಕಾಂಗ್ರೆಸ್ ಪಕ್ಷ ನನ್ನನ್ನು ದುಡಿಸಿಕೊಂಡು ಮೋಸ ಮಾಡಿತು. ಧ್ರುವನಾರಾಯಣ್ ಬದುಕಿದ್ದರೆ ನನಗೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೊಡಿಸುತ್ತಿದ್ದರು, ಅವರ ನಿಧನದ ನಂತರ ಸಹಾ ನನಗೆ ಯಾವುದೆ ಸ್ಥಾನ ಕಲ್ಪಿಸುವಲ್ಲಿ ಮುಖ್ಯಮಂತ್ರಿಯಾದಿಯಾಗಿ ಯಾರು ಭರವಸೆ ನೀಡಲಿಲ್ಲ, ಹಾಗಾಗಿ ಬೇಸತ್ತು ಪಕ್ಷ ತೊರೆಯಬೇಕಾಯಿತು ಎಂದರು.ನಿಜವಾಗಿಯೂ ಅಂಬೇಡ್ಕರ್ ಅವರಿಗೆ ಗೌರವ ನೀಡುವ ಕೆಲಸ ಮಾಡಿದ್ದು ಬಿಜೆಪಿ, ಕಾಂಗ್ರೆಸ್ ಪಕ್ಷ ಅವರನ್ನು ಸೋಲಿಸಿತ್ತು, ಅವರ ಸಮಾಧಿಗೂ ಸ್ಥಳ ನೀಡದೆ ಅವರಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್ ಎಂಬ ವಾಸ್ತವಾಶಂವನ್ನು ಅರಿಯಬೇಕು, ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂಬುದೆಲ್ಲ ಸುಳ್ಳು, ಮತದಾರರು ಇಂತಹ ಅಪಪ್ರಚಾರಕ್ಕೆ ಕಿವಿಗೊಡಬಾರದು.- ಎಸ್ ಬಾಲರಾಜು, ಎನ್ಡಿಎ ಮೈತ್ರಿ ಕೂಟದ ಅಭ್ಯರ್ಥಿ