ವೈದ್ಯರ ನಿರ್ದೇಶನದಂತೆ ಮೃತ ಯುವಕನ ಕಣ್ಣು, ಕಿಡ್ನಿ, ಹೃದಯದ ಕವಾಟಗಳು, ಕರುಳು ಹಾಗೂ ಪ್ಯಾಂಕ್ರಿಯಾಸ್ ಅಂಗಾಂಗಗಳನ್ನು ದಾನ ನೀಡಿ ವಸ್ತ್ರದ ಕುಟುಂಬ ಸಾರ್ಥಕತೆ ಮೆರೆದಿದೆ.
ಕನಕಗಿರಿ: ರಸ್ತೆ ಅಪಘಾತದಲ್ಲಿ ಜನ್ಮದಿನದಂದೇ ಮೃತನಾದ ಯುವಕನೊಬ್ಬನ ಅಂಗಾಂಗಗಳನ್ನು ದಾನ ನೀಡುವ ಮೂಲಕ ಪಟ್ಟಣದ ಕುಟುಂಬವೊಂದು ಮಾದರಿಯಾಗಿದೆ.
ಪಟ್ಟಣದ ನಿವಾಸಿ ಗವಿಸ್ವಾಮಿ ವಸ್ತ್ರದ ಧಾರವಾಹಿ ಹಾಗೂ ಚಲನಚಿತ್ರಗಳಲ್ಲಿ ನಟಿಸುತ್ತ, ತನ್ನ ಕುಟಂಬದೊಟ್ಟಿಗೆ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ಅವರ 2 ನೇ ಮಗ ಆರ್ಯನ್ (22) ತನ್ನ ಸ್ನೇಹಿತರೊಂದಿಗೆ ಬೈಕ್ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಕಳೆದ ಅ .6ರಂದು ಹಾಸನದಲ್ಲಿ ಡಿವೈಡರ್ಗೆ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿದ್ದ. ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಶುಕ್ರವಾರ ಅ.24ರಂದು 16 ದಿನಗಳ ಹೋರಾಟದ ಬಳಿಕ ಕೊನೆಯುಸಿರೆಳೆದಿದ್ದಾನೆ.
ಅಂಗಾಂಗ ದಾನ: ಎಳೆ ವಯಸ್ಸಿನಲ್ಲಿ ಮಗನ ಕಳೆದುಕೊಂಡಿರುವ ದುಃಖದ ಮಡುವಿನಲ್ಲಿಯೂ ತಂದೆ, ತಾಯಿ ಅಂಗಾಂಗ ದಾನ ಮಾಡಲು ಒಪ್ಪಿ ಸಮಾಜಕ್ಕೆ ಸ್ಫೂರ್ತಿಯಾಗಿದ್ದಾರೆ. ವೈದ್ಯರ ನಿರ್ದೇಶನದಂತೆ ಮೃತ ಯುವಕನ ಕಣ್ಣು, ಕಿಡ್ನಿ, ಹೃದಯದ ಕವಾಟಗಳು, ಕರುಳು ಹಾಗೂ ಪ್ಯಾಂಕ್ರಿಯಾಸ್ ಅಂಗಾಂಗಗಳನ್ನು ದಾನ ನೀಡಿ ವಸ್ತ್ರದ ಕುಟುಂಬ ಸಾರ್ಥಕತೆ ಮೆರೆದಿದೆ.
ಆರ್ಯನ್ ಜನ್ಮದಿನದಂದು ಮೃತಪಟ್ಟಿದ್ದರಿಂದ ಕುಟುಂಬಸ್ಥರು ಆತನನ್ನು ನೆನೆದು ಕಣ್ಣೀರಿಟ್ಟರು. ಆಸ್ಪತ್ರೆಯಲ್ಲಿನ ಆರ್ಯನ್ ಕೈ ಹಿಡಿದು ತಂದೆ ಗವಿಸ್ವಾಮಿ, ತಾಯಿ ಹೇಮಲತಾ, ಅಣ್ಣ ರೋಷನ್ ಆಸ್ಪತ್ರೆಯಲ್ಲಿ ಕೇಕ್ ಕತ್ತರಿಸಿ ಭಾವುಕರಾದರು.
ಮೃತ ಯುವಕನ ಅಂತ್ಯ ಸಂಸ್ಕಾರ ಅ. 25ರ ಶನಿವಾರದಂದು ನಡೆಯಲಿದೆ ಎಂದು ಕುಟುಂಬಸ್ಥರಿಂದ ತಿಳಿದು ಬಂದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.