ಹೊಸ ಸಾಮಾಜಿಕ ವ್ಯವಸ್ಥೆ ರೂಪಿಸಲು ಯುವಜನರು ಮುಂದಾಗಬೇಕು

KannadaprabhaNewsNetwork |  
Published : May 28, 2024, 01:00 AM IST
ಹೊನ್ನಾಳಿ ಫೋಟೋ 27ಎಚ್.ಎಲ್.ಐ2. ಹೊನ್ನಾಳಿ ತಾಲೂಕಿನ ಗಡಿಭಾಗದಲ್ಲಿರುವ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಾಹಿತಿ ಜಿ.ರಂಗನಗೌಡ ಅವರ ದುಶ್ಚಟಗಳು ದುಷ್ಪರಿಣಾಮಗಳು ಸಾಮಾಜಿಕ ಪಿಡುಗುಗಳು ಕೃತಿ ಬಿಡುಗಡೆಗೊಳಿಸಿ ಸಮಾರಂಭದಲ್ಲಿ ಹೈಕೋರ್ಟ್ ನ್ಯಾಯಾಧೀಶ ಅರಳಿ ನಾಗರಾಜ  ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. | Kannada Prabha

ಸಾರಾಂಶ

ದೇಶದಲ್ಲಿ ಜಾತೀಯತೆ, ಸಂಕುಚಿತ ಧಾರ್ಮಿಕ ಮನೋಭಾವ, ಅತಿಯಾದ ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆ ಉಲ್ಬಣ, ರೋಗ, ಹಸಿವು, ಮೂಢನಂಬಿಕೆಗಳು ತಾಂಡವವಾಡುತ್ತಿವೆ. ಈ ಹಿನ್ನೆಲೆ ಹೊಸ ಸಾಮಾಜಿಕ ವ್ಯವಸ್ಥೆ ರೂಪಿಸಲು ಯುವಸಮೂಹ ಮುಂದಾಗಬೇಕು ಎಂದು ಹೈಕೋರ್ಟ್ ನ್ಯಾಯಾಧೀಶ ಅರಳಿ ನಾಗರಾಜ ಹೇಳಿದ್ದಾರೆ.

- ಹೈಕೋರ್ಟ್ ನ್ಯಾಯಾಧೀಶ ಅರಳಿ ನಾಗರಾಜ ಸಲಹೆ - - - ಕನ್ನಡಪ್ರಭ ವಾರ್ತೆ, ಹೊನ್ನಾಳಿ

ದೇಶದಲ್ಲಿ ಜಾತೀಯತೆ, ಸಂಕುಚಿತ ಧಾರ್ಮಿಕ ಮನೋಭಾವ, ಅತಿಯಾದ ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆ ಉಲ್ಬಣ, ರೋಗ, ಹಸಿವು, ಮೂಢನಂಬಿಕೆಗಳು ತಾಂಡವವಾಡುತ್ತಿವೆ. ಈ ಹಿನ್ನೆಲೆ ಹೊಸ ಸಾಮಾಜಿಕ ವ್ಯವಸ್ಥೆ ರೂಪಿಸಲು ಯುವಸಮೂಹ ಮುಂದಾಗಬೇಕು ಎಂದು ಹೈಕೋರ್ಟ್ ನ್ಯಾಯಾಧೀಶ ಅರಳಿ ನಾಗರಾಜ ಹೇಳಿದರು.

ತಾಲೂಕಿನ ಗಡಿಭಾಗದ ಬಸವಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಾಹಿತಿ ಜಿ.ರಂಗನಗೌಡ ಅವರ "ದುಶ್ಚಟಗಳ ದುಷ್ಪರಿಣಾಮಗಳು- ಸಾಮಾಜಿಕ ಪಿಡುಗುಗಳು " ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಗ್ರಾಮ ಪಂಚಾಯಿತಿ ಸದಸ್ಯ ಆಗಬೇಕಾದರೆ ಚುನಾವಣೆಯಲ್ಲಿ ಸಾಕಷ್ಟು ಹಣ ಖರ್ಚು ಮಾಡಿದರೆ ಮಾತ್ರ ಗೆಲ್ಲಲು ಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಸಮಯದಲ್ಲಿ ಭ್ರಷ್ಟಾಚಾರ ರಹಿತ, ಪ್ರಾಮಾಣಿಕ ವ್ಯಕ್ತಿಯನ್ನು ಶಾಸನ ಸಭೆಗಳಿಗೆ ಆಯ್ಕೆ ಮಾಡಿ, ಬಲಿಷ್ಠ ಪ್ರಜಾಪ್ರಭುತ್ವ, ಸರ್ಕಾರ ರಚನೆಗೆ ಮುಂದಾಗಬೇಕಿದೆ. ದೇಶದಲ್ಲಿ ಮೂಢ್ಯಗಳು, ಅನಿಷ್ಟ ಪದ್ಧತಿಗಳನ್ನು ನಿವಾರಿಸಬೇಕಿದೆ ಎಂದರು.

ಸಭೆಯಲ್ಲಿ ಮೈಸೂರಿನ ಬನುಮಯ್ಯ ಕಾಲೇಜಿನ ನಿವೃತ್ತ ಪಾಂಶುಪಾಲ ಎಚ್.ಜಿ. ಕೃಷ್ಣಪ್ಪ ಕೃತಿ ಲೋಕರ್ಪಣೆಗೊಳಿಸಿ ಮಾತನಾಡಿ, ಜೀವನದಲ್ಲಿ ಸುಖದ ಭ್ರಮೆಗೆ ಬಿದ್ದು ದುಶ್ಚಟಗಳಿಗೆ ಬಲಿಯಾಗಿ ಅವುಗಳ ದುಷ್ಪರಿಣಾಮ ಎದುರಿಸಿ ಜೀವನ ನರಕಯಾತನೆ ಮಾಡಿಕೊಳ್ಳುವವರೇ ಹೆಚ್ಚು. ಇಂಥ ವ್ಯಕ್ತಿಗಳ ವಿಚಾರಗಳಿಗೆ ಸಂಬಂಧಿಸಿ ಸಾಹಿತಿ ರಂಗನಗೌಡ ತಮ್ಮ ಕೃತಿ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು.

ನಿವೃತ್ತ ಪ್ರಾಂಶುಪಾಲ ಕೆ.ಆರ್. ಭೋಗೇಶ್ವರಪ್ಪ ಮಾತನಾಡಿ, ಸಾಹಿತಿ ರಂಗನಗೌಡ ಅವರ ನಾಲ್ಕು ಕೃತಿಗಳು ಸಮಾಜದ ಲೋಪಗಳನ್ನು ಎತ್ತಿತೋರಿಸುವಲ್ಲಿ ಮಹತ್ತರ ಪಾತ್ರ ವಹಿಸಿವೆ. ಸಾಮಾಜಿಕ ವ್ಯವಸ್ಥೆ ಬಗ್ಗೆ ಸಂಶೋಧನಾ ಗ್ರಂಥ ಬರೆಯುವ ವಿದ್ಯಾರ್ಥಿಗಳಿಗೆ ಈ ಸಾಹಿತಿಯ ಕೃತಿಗಳು ಮಾರ್ಗದರ್ಶಕವಾಗಿವೆ. ರಂಗನಗೌಡ ಅವರು ತಮ್ಮ ಗ್ರಾಮೀಣ ಭಾಗದ ಜೀವನ ಅನುಭವದಿಂದ ಕೃತಿಗಳನ್ನು ರಚಿಸಿರುವುದು ಶ್ಲಾಘನೀಯ ಎಂದರು.

ಹೊಸದುರ್ಗ ಕುಂಚಿಟಿಗ ಶಾಖಾ ಮಠದ ಶಾಂತವೀರ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು. ಚನ್ನಗಿರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ, ಪಾಂಶುಪಾಲ ಎಂ.ಆರ್. ಲೋಕೇಶ್ ಮಾತನಾಡಿದರು. ಸಾಹಿತಿ ರಂಗನಗೌಡ ಅವರನ್ನು ಸನ್ಮಾನಿಸಲಾಯಿತು. ರವಿ ಹೊನ್ನಾಳಿ, ಎಸ್.ಷಣ್ಮುಖಪ್ಪ, ತಕ್ಕನಹಳ್ಳಿ ಸುರೇಶ್ ಇದ್ದರು.

- - - -27ಎಚ್.ಎಲ್.ಐ2:

ಹೊನ್ನಾಳಿ ತಾಲೂಕಿನ ಗಡಿಭಾಗದ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಹಿತಿ ಜಿ.ರಂಗನಗೌಡ ಅವರ "ದುಶ್ಚಟಗಳು ದುಷ್ಪರಿಣಾಮಗಳು- ಸಾಮಾಜಿಕ ಪಿಡುಗುಗಳು " ಕೃತಿ ಬಿಡುಗಡೆಗೊಳಿಸಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ