ಯಲ್ಲಾಪುರ: ಸಮಾಜದಲ್ಲಿಂದು ಹಿರಿಯರನ್ನು ಗೌರವಿಸುವ, ಪ್ರೀತಿಸುವ ಮನೋಭಾವ ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಅಡಕೆ ವ್ಯವಹಾರಸ್ಥರ ಸಂಘ ಹಿರಿಯರನ್ನು ಗೌರವಿಸುವ ಈ ಸಂಪ್ರದಾಯ ಸಮಾಜದಲ್ಲಿ ಆದರ್ಶಪ್ರಾಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ಅವರು ಶನಿವಾರ ಪಟ್ಟಣದ ಅಡಕೆ ಭವನದಲ್ಲಿ ಅಡಕೆ ವ್ಯವಹಾರಸ್ಥರ ಸಂಘದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರವಿ ಹೆಗಡೆ ಮಾತನಾಡಿ, ನಮ್ಮ ಸಂಘವನ್ನು ಅನೇಕ ಹಿರಿಯರು ಸ್ಥಾಪನೆ ಮಾಡಿದ್ದರು. ಅವರ ಸ್ಮರಣೆ ಅತ್ಯಂತ ಮಹತ್ವದ್ದಾಗಿದೆ. ನಮ್ಮ ಸಂಘದ ಸದಸ್ಯರ ಸಲಹೆ, ಸೂಚನೆಯಂತೆ ಸಂಘ ಕಟ್ಟಿ ಬೆಳೆಸಿದ ಹಿರಿಯರ ಭಾವಚಿತ್ರವನ್ನು ಅನಾವರಣ ಮಾಡುವ ಚಿಂತನೆ ಮಾಡಿದ್ದೇವೆ ಎಂದರು.
ಸನ್ಮಾನ ಸ್ವೀಕರಿಸಿದ ಹಿರಿಯ ವರ್ತಕ ಡಿ.ಶಂಕರ ಭಟ್ಟ ಮಾತನಾಡಿ, ಸಮಾಜದಲ್ಲಿಂದು ಪಾಲಕರನ್ನೇ ಗೌರವಿಸದ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ಮಾನವೀಯ ಸಂಬಂಧ ಕಳಚಿ ಹೋಗುತ್ತಿರುವ ಸಂದರ್ಭದಲ್ಲಿ ನೀವು ನಮ್ಮಂತ ಹಿರಿಯ ಸಹೋದ್ಯೋಗಿಗಳನ್ನು ಗುರುತಿಸಿ ಗೌರವಿಸಿರುವುದು ಯುವ ವ್ಯಾಪಾರಸ್ಥರಿಗೆ ಸ್ಫೂರ್ತಿದಾಯಕವಾಗಲಿ. ಹಿರಿ-ಕಿರಿಯರ ಪರಸ್ಪರ ಸಂಬಂಧ ಇದ್ದಾಗ ಮಾತ್ರ ಮಾನವೀಯ ಸಂಬಂಧ ಉಳಿಯಲು ಸಾಧ್ಯ ಎಂದರು.ಸನ್ಮಾನಿತರಾದ ವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ, ಗಾಯತ್ರಿ ಕಂಪನಿ ಭಾಗೀದಾರ ಉಮೇಶ ಭಟ್ಟ ಸಾಂದರ್ಭಿಕ ಮಾತನಾಡಿದರು. ಹಿರಿಯ ವ್ಯಾಪಾರಸ್ಥರಾದ ಎಸ್.ಎನ್.ಭಟ್ಟ ಏಕಾನ, ಮಧುಕೇಶ್ವರ ಭಟ್ಟ, ಸುಬ್ರಾಯ ಭಟ್ಟ ಬಗನಗದ್ದೆ ಅವರನ್ನು ಸನ್ಮಾನಿಸಲಾಯಿತು.
ಸಂಘದ ಪ್ರಮುಖರಾದ ಎಂ.ಎನ್.ಭಟ್ಟ ಕವಾಳೆ, ಗೋಪಾಲಕೃಷ್ಣ ಗಾಂವ್ಕರ, ರಾಘವೇಂದ್ರ ಭಟ್ಟ, ವಿನಾಯಕ ಭಟ್ಟ ಮತ್ತಿತರರು ಇದ್ದರು. ಸಂಘದ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಗಡೆ ಸ್ವಾಗತಿಸಿದರು. ನಿಕಟಪೂರ್ವ ಅಧ್ಯಕ್ಷ ಎಂ ಆರ್.ಹೆಗಡೆ ಕುಂಬ್ರಿಗುಡ್ಡೆ ಪ್ರಾಸ್ತಾವಿಕ ಮಾತನಾಡಿದರು. ಸಂಘದ ಸದಸ್ಯ ಟಿ.ಆರ್.ಹೆಗಡೆ ನಿರ್ವಹಿಸಿದರು. ಕಾರ್ಯದರ್ಶಿ ಮಾರುತಿ ಘಟ್ಟಿ ವಂದಿಸಿದರು.