ಅವರು ಸುಮಾರು 5 ದಿನಗಳ ಹಿಂದೆ ವಿಷಸೇವನೆ ಮಾಡಿದ್ದು, ಅಸ್ವಸ್ಥಗೊಂಡಿದ್ದ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಕರಾವಳಿಯ ಅನೇಕ ಮೇಳಗಳಲ್ಲಿ ಸ್ತ್ರೀ ವೇಷಧಾರಿಯಾಗಿ ಮಿಂಚುತ್ತಿದ್ದ ಯುವ ಕಲಾವಿದ ಗುರುಪ್ರಸಾದ್ ನೀರ್ಜೆಡ್ಡು (28) ಮಂಗಳವಾರ ಬೆಳಗ್ಗೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರು ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.
ಅವರು ಸುಮಾರು 5 ದಿನಗಳ ಹಿಂದೆ ವಿಷಸೇವನೆ ಮಾಡಿದ್ದು, ಅಸ್ವಸ್ಥಗೊಂಡಿದ್ದ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಜು.27ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಪರೀತ ಕುಡಿದು ಬಂದು ಮನೆಯಲ್ಲಿ ವಾಂತಿ ಮಾಡಿಕೊಂಡಿದ್ದರು. 28ರಂದು ಬೆಳಗ್ಗೆ ಪುನಃ ವಾಂತಿ ಶುರುವಾಗಿ, ವಿಪರೀತ ಹೊಟ್ಟೆನೋವು ಎಂದು ಹೇಳಿದ್ದರು. ನಂತರ ಅವರ ತಾಯಿ ಸಾಯಿಬ್ರಕಟ್ಟೆ ಕ್ಲಿನಿಕ್ನಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆತಂದಿದ್ದರು. 29ರಂದು ರಾತ್ರಿ 11 ಗಂಟೆಗೆ ಮತ್ತೆ ವಿಪರೀತ ಹೊಟ್ಟೆನೋವು ಎಂದು ವಾಂತಿ ಮಾಡಲಾರಂಭಿಸಿ ಅಸ್ವಸ್ಥರಾದಾಗ ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲಿ ಗುರುಪ್ರಸಾದ್, ವೈದ್ಯರ ಬಳಿ ತಾನು 4 ದಿನದ ಹಿಂದೆ ಬಿಯರಿಗೆ ಇಲಿ ಪಾಷಾಣ ಸೇರಿಸಿ ಕುಡಿದಿರುವುದಾಗಿ ಹೇಳಿದ್ದರು. ಅವರು ಮಂಗಳವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮಂದಾರ್ತಿ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಹಾರಾಡಿ ರಮೇಶ ಗಾಣಿಗರಿಂದ ಯಕ್ಷಗಾನ ನೃತ್ಯಾಭ್ಯಾಸ ಮಾಡಿದ್ದು, ಭರವಸೆಯ ಕಲಾವಿದರಾಗಿದ್ದರು. ಮುಂದಿನ ತಿರುಗಾಟಕ್ಕೆ ಹಾಲಾಡಿ ಮೇಳಕ್ಕೆ ನೇಮಕಗೊಂಡಿದ್ದರು. ಅವರ ನಿಧನಕ್ಕೆ ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.