ಉತ್ತಮ ಸಮಾಜ ಕಟ್ಟಲು ಯುವ ಜನತೆ ಮುಂದೆ ಬನ್ನಿ: ಪಟೇಲ್

KannadaprabhaNewsNetwork | Published : Dec 28, 2023 1:45 AM

ಸಾರಾಂಶ

ಯುವಕರು ಮೋಬೈಲ್‌ನಲ್ಲಿ ಸಮಯ ಹಾಳು ಮಾಡುವ ಬದಲು ಉತ್ತಮವಾಗಿ ವಿದ್ಯೆ ಪಡೆದುಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು.

ದಾವಣಗೆರೆ: ರಾಷ್ಟ್ರ, ರಾಜ್ಯಗಳಲ್ಲಿ ರೈತ, ದಲಿತ, ಕಾರ್ಮಿಕ ಸಂಘಟನೆಗಳಲ್ಲಿ ವಯಸ್ಕರು ಇದ್ದಾರೆ. ಆದರೆ ಕನ್ನಡ ಪರ ಸಂಘಟನೆಗಳಲ್ಲಿ ಅತೀ ಹೆಚ್ಚು ಯುವಕರೇ ಇರುವುದು ಗಮನಿಸಬೇಕಾದಂತಹ ವಿಷಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ವಿ.ಪಟೇಲ್ ಹೇಳಿದರು.

ಇಲ್ಲಿನ ಹೊನ್ನಮರಡಿಯ (ಕಾರಿಗನೂರು ಕ್ರಾಸ್) ಆಂಜನೇಯ ನಗರದಲ್ಲಿ ಸುವರ್ಣ ಕರ್ನಾಟಕ ವೇದಿಕೆ ಗ್ರಾಮ ಘಟಕದಿಂದ ಆಯೋಜಿಸಿದ 68ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಕರು ಅಂದರೆ ಭವಿಷ್ಯದ ಪ್ರಜೆಗಳು ದೇಶ, ಪ್ರಪಂಚದ ಇತಿಹಾಸ ಗಮನಿಸುತ್ತಾ ಬಂದರೆ, ಹಲವು ದೇಶಗಳ ಪ್ರಾಂತ್ಯಗಳಲ್ಲಿ ಅದರಲ್ಲೂ ಸ್ವಾತಂತ್ರ್ಯ ಸಂಗ್ರಾಮದ ಕಾಲದ ಯುವಕರು ಪ್ರಜ್ಞಾವಂತರಾಗಿದ್ದ ಕಾರಣ ಅವರು ಉತ್ತಮ ಸಮಾಜ ನಿರ್ಮಾಣ ಮಾಡಿದರು. ಅದೇ ರೀತಿ ಸಮಾಜವನ್ನು ಇನ್ನಷ್ಟು ಉತ್ತಮವಾಗಿಸಲು ಯುವ ಜನತೆ ಮುಂದೆ ಬಂದರೆ ಉತ್ತಮ ಕರ್ನಾಟಕ ಉದಯವಾಗುವುದರಲ್ಲಿ ಸಂದೇಹವಿಲ್ಲ ಎಂದರು.

ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಮಾತನಾಡಿ, ಹೊನ್ನಮರಡಿಯ ಆಂಜನೇಯ ನಗರದ ಪವಿತ್ರ ಪರಿಸರದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಸುವರ್ಣ ಕರ್ನಾಟಕ ವೇದಿಕೆಯ ಎಲ್ಲಾ ಪದಾಧಿಕಾರಿಗಳು ಸೇರಿ ಸಮಾರಂಭವನ್ನು ಏರ್ಪಾಡು ಮಾಡಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಯಾವುದೇ ಜಾತಿ, ಭೇದ, ಧರ್ಮ, ಮತ, ಪಂಥಗಳೆನ್ನೆಲ್ಲಾ ಮರೆತು ದೇಶ ಕಾಯುವ ಕೆಲಸಕ್ಕೆ ಮಕ್ಕಳು ಮುಂದೆ ಬರಬೇಕೆಂದು ಶ್ರೀಗಳು ಕರೆ ನೀಡಿದರು.

ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಂತೋಷ್ ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಘವೇಂದ್ರ ಕಾಲೇಜಿನ ಉಪಪ್ರಾಚಾರ್ಯ ಎಂ.ಆರ್.ಹರೀಶ, ಗ್ರಾಪಂ ಮಾಜಿ ಅಧ್ಯಕ್ಷ ಎನ್.ಡಿ.ಮುರಿಗೆಪ್ಪ, ಎ.ಎಂ.ನಾಗರಾಜ, ವೇದಿಕೆಯ ಪ್ರಧಾನ ಕಾರ್ಯದರ್ಶಿ ಪೋತುಲ ಶ್ರೀನಿವಾಸ, ಜಿಲ್ಲಾಧ್ಯಕ್ಷ ಶಿವಕುಮಾರ, ನಮ್ಮ ಜೈ ಕರುನಾಡ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಟಿ.ಮಂಜುನಾಥ ಗೌಡ, ಗ್ರಾಮ ಘಟಕದ ಅಧ್ಯಕ್ಷ ಬಸವರಾಜ್, ಪ್ರಧಾನ ಕಾರ್ಯದರ್ಶಿ ಆಂಜಿನಪ್ಪ, ರುದ್ರಸ್ವಾಮಿ, ಸಿದ್ಧಣ್ಣ ಗಂಗಣ್ಣನವರ್, ರೇವಣ ಸಿದ್ದಯ್ಯ, ಪುಟ್ಟರಾಜು, ಯುವ ಘಟಕದ ಅಧ್ಯಕ್ಷ ಬಸವರಾಜು, ಪ್ರಶಾಂತ್, ತಿಪ್ಪೇಶ, ಮಹಾಂತೇಶ್, ವೇದಿಕೆಯ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Share this article