ನೀಟ್‌ ರದ್ದು ಖಂಡಿಸಿ ಸಿಡಿದೆದ್ದ ಯುವ ಕಾಂಗ್ರೆಸ್‌

KannadaprabhaNewsNetwork |  
Published : May 22, 2026, 02:00 AM IST
Youth Congress Protest 4 | Kannada Prabha

ಸಾರಾಂಶ

ನೀಟ್ ಪರೀಕ್ಷೆ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ರಾಜ್ಯ ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಕ್ರೋಶ ವ್ಯಕ್ತಪಡಿಸಿದರು. ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ತಳ್ಳಿ ಲೋಕಭವನ ಮುತ್ತಿಗೆ ಯತ್ನಿಸಿದ ಘಟನೆಯೂ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು:

ನೀಟ್ ಪರೀಕ್ಷೆ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ರಾಜ್ಯ ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಕ್ರೋಶ ವ್ಯಕ್ತಪಡಿಸಿದರು. ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ತಳ್ಳಿ ಲೋಕಭವನ ಮುತ್ತಿಗೆ ಯತ್ನಿಸಿದ ಘಟನೆಯೂ ನಡೆಯಿತು.

ಗುರುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎಸ್‌.ಮಂಜುನಾಥ್‌ ಗೌಡ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಲೋಕಭವನಕ್ಕೆ ನುಗ್ಗಲು ಮುಂದಾದ ಯುವ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ತಡೆದರು. ಈ ಸಂದರ್ಭದಲ್ಲಿ ಬ್ಯಾರಿಕೇಡ್‌ ಹತ್ತಿ ನುಗ್ಗಲು ಯತ್ನಿಸಿದ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣಗೊಂಡಿತು.

ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕುತ್ತಿದ್ದ ಕಾರ್ಯಕರ್ತರು ಏಕಾಏಕಿ ಬ್ಯಾರಿಕೇಡ್‌ ಹತ್ತಲು ಮುನ್ನುಗ್ಗಿದರು. ಕೂಡಲೇ ಕಾರ್ಯೋನ್ಮುಖರಾದ ಪೊಲೀಸರು ಮಂಜುನಾಥ ಗೌಡ ಸೇರಿ ನೂರಾರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಸರ್ಕಾರ ಗುಂಡಿಟ್ಟುಕೊಲ್ಲಬೇಕು:

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಯುವ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ ಗೌಡ, ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುವಂತ ಕಿಡಿಗೇಡಿಗಳನ್ನು ಸರ್ಕಾರ ಗುಂಡಿಟ್ಟು ಕೊಲ್ಲಬೇಕು. ಪರೀಕ್ಷಾ ಪತ್ರಿಕೆ ಸೋರಿಕೆ ಮಾಡುವ ಮೂಲಕ ಭವಿಷ್ಯದ ವೈದ್ಯರಾಗಬೇಕೆಂದು ಕನಸು ಕಂಡಿದ್ದ ಯುವರನ್ನು ಈ ಕಿಡಿಗೇಡಿಗಳು ಕೊಂದಿದ್ದಾರೆ. ನೀಟ್‌ಗೆ ಸಂಬಂಧಿಸಿ 70 ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಅಂದರೆ, ಕೇಂದ್ರ ಸರ್ಕಾರಕ್ಕೆ ಯುವಕರ ಭವಿಷ್ಯದ ಮೇಲೆ ಆಸಕ್ತಿಯಿಲ್ಲ. ಚುನಾವಣೆ ಮಾಡುವುದು, ಸುಳ್ಳು ಹೇಳುವುದು, ಹಿಂದು ಮುಸ್ಲಿಂ ಗಲಾಟೆ ಮಾಡಿಸುವುದು ಬಿಟ್ಟರೆ ಮೋದಿಯವರಿಗೆ ವಿದ್ಯಾರ್ಥಿಗಳ ಮೇಲೆ ಕಿಂಚಿತ್ತೂ ಅಭಿಮಾನ ಇಲ್ಲ ಎಂದು ಕಿಡಿಕಾರಿದರು.

ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಯುವಕರ ಜೀವನದಲ್ಲಿ ಕೇಂದ್ರ ಸರ್ಕಾರ‌ ಚೆಲ್ಲಾಟವಾಡುತ್ತಿದೆ. ಕಳೆದ ಆರು ವರ್ಷಗಳಿಂದ ನೀಟ್ ಪರೀಕ್ಷೆಯಲ್ಲಿ ಗೊಂದಲವಾಗುತ್ತಿದೆ. ನಾವು ಕೇಂದ್ರ ಸರ್ಕಾರ‌ಕ್ಕೆ ಪತ್ರ ಬರೆದಿದ್ದೇವೆ. ನಮ್ಮೊಂದಿಗೆ ಕೇರಳ, ತಮಿಳುನಾಡಿನವರೂ ಪತ್ರ ಬರೆದಿದ್ದಾರೆ. ಅವರಿಗೆ ನೀಟ್ ನಡೆಸಲು ಆಗುತ್ತಿಲ್ಲ. ಇನ್ನು ಹೀಗೆಯೇ ಮುಂದುವರೆದರೆ ನಮ್ಮ ರಾಜ್ಯ ನೀಟ್​​ನಿಂದ ಹಿಂದೆ ಸರಿಯಲಿದೆ ಎಂದರು.

ಪ್ರತಿಭಟನೆಯಲ್ಲಿ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಉದಯಭಾನು ಚಿಬ್, ಸಚಿವ ಬೈರತಿ ಸುರೇಶ್, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಪೊನ್ನಣ್ಣ, ಶಾಸಕ ರಿಜ್ವಾನ್ ಅರ್ಷದ್, ಮಾಜಿ ಸಂಸದ ಉಗ್ರಪ್ಪ, ಮಾಜಿ ಪರಿಷತ್ ಸದಸ್ಯರು ಸೇರಿ ಇತರರಿದ್ದರು.

ಕೋಟ್‌..

ಮೋದಿ ಪೇಪರ್‌ ಲೀಕ್‌

ಪೇ ಚರ್ಚೆ ಮಾಡಬೇಕು ಮೋದಿ ಸರ್ಕಾರ ಶಿಕ್ಷಣ ಮಾಫಿಯಾಗೆ ಎಲ್ಲವನ್ನೂ ಒಪ್ಪಿಸಿಬಿಟ್ಟಿದೆ.‌ ಹಿಂದಿನ ಬಿಜೆಪಿ ಸರ್ಕಾರ ಪೇಪರ್ ಲೀಕ್​ಗೆ ಹೆಸರುವಾಸಿಯಾಗಿತ್ತು. ನೂರಾರು ಪರೀಕ್ಷೆಗಳು ಬಿಜೆಪಿ ನಾಯಕರ ಮೂಗಿನ ಅಡಿಯಲ್ಲೇ ನಡೆದಿವೆ. ಮೋದಿ ಪರೀಕ್ಷಾ ಪೇ ಚರ್ಚಾ ಬಿಟ್ಟು ಪೇಪರ್ ಲೀಕ್ ಪೇ ಚರ್ಚೆ ಮಾಡಬೇಕು.

- ರಣದೀಪ್‌ಸಿಂಗ್‌ ಸುರ್ಜೇವಾಲಾ, ಎಐಸಿಸಿ ರಾಜ್ಯ ಉಸ್ತುವಾರಿ.

ಕೋಟ್‌..

ವಿದ್ಯಾರ್ಥಿಗಳ ಭವಿಷ್ಯ ಇಂದು ಅತಂತ್ರವಾಗಿದೆ. 22 ಲಕ್ಷ ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕೋಚಿಂಗ್ ಸೆಂಟರ್ ನಡೆಸುತ್ತಿದ್ದವರೇ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದಾರೆ. ಇದೊಂದು ದೊಡ್ಡ ದಂಧೆ‌. ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ ನಮ್ಮ ಕೈಯಲ್ಲಿ ಪರೀಕ್ಷೆ ಬರೆಸುವುದಕ್ಕೆ ಯೋಗ್ಯತೆಯಿಲ್ಲ ಅಂತ ಹೇಳಲಿ. ನಾವು ಮೊದಲಿನಂತೆ ಮಾಡುತ್ತಿರುವ ಸಿಇಟಿ ಪರೀಕ್ಷೆಗೆ ಅವಕಾಶ ಕೊಡಲಿ.- ಎಂ.ಸಿ.ಸುಧಾಕರ್‌, ಉನ್ನತ ಶಿಕ್ಷಣ ಸಚಿವ.

‘ಪಿಎಂ ಈಸ್‌ ಕಾಂಪ್ರಮೈಸ್ಡ್‌’, ಐ ಆ್ಯಮ್‌ ಕಾಕ್ರೋಜ್‌ ಟೀ ಶರ್ಟ್‌ ಬಿಡುಗಡೆ:

ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಸೇರಿ ಇತರ ನಾಯಕರು ‘ಪಿಎಂ ಈಸ್‌ ಕಾಂಪ್ರಮೈಸ್ಡ್‌’ ಎನ್ನುವ ಟೀಶರ್ಟ್‌ಗಳನ್ನು ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿದ್ದ ಕೆಲವರು ‘ಐ ಆ್ಯಮ್‌ ಕೊಕ್ರೋಜ್‌’ ಎನ್ನುವ ಟೀಶರ್ಟ್‌ಗಳನ್ನೂ ಪ್ರದರ್ಶಿಸಿದರು. ಸಿಇಟಿ ಪರೀಕ್ಷೆ ನಡೆಸಲು ರಾಜ್ಯಗಳಿಗೆ ಅವಕಾಶ ಕೊಡಿ; ಸಿದ್ದರಾಮಯ್ಯ:

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಜವಾಬ್ದಾರಿಯನ್ನು ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೊರಬೇಕು. ಪ್ರಧಾನಿ ಮೋದಿ ಅವರು ನೀಟ್ ವಿದ್ಯಾರ್ಥಿಗಳಿಗೆ ಬೇಷರತ್ ಕ್ಷಮೆ ಕೋರಬೇಕು. ಸಿಇಟಿ ಪರೀಕ್ಷೆ ನಡೆಸಲು ರಾಜ್ಯಗಳಿಗೆ ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.

ಗುರುವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ರಾಜ್ಯ ಯುವ ಕಾಂಗ್ರೆಸ್‌ ನೀಟ್‌ ಪರೀಕ್ಷಾ ಅಕ್ರಮದ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಜವಾಬ್ದಾರಿಯನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಾಗಲಿ ಅಥವಾ ಪ್ರಧಾನಿ ಮೋದಿ ಅವರಾಗಲಿ ಹೊತ್ತುಕೊಂಡಿಲ್ಲ. ಧರ್ಮೇಂದ್ರ ಪ್ರಧಾನ್ ಅವರು ನೀಟ್ ಪರೀಕ್ಷೆಗೆ ಮತ್ತೊಂದು ದಿನಾಂಕ ನಿಗದಿ ಮಾಡಿ ಕೈ ತೊಳೆದುಕೊಂಡಿದ್ದು, ಈ ಜವಾಬ್ದಾರಿ ಕೇಂದ್ರ ಶಿಕ್ಷಣ ಸಚಿವ ಮತ್ತು ಪ್ರಧಾನಮಂತ್ರಿ ಹೋರಬೇಕು ಎಂದು ಒತ್ತಾಯಿಸಿದರು.5 ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆ: ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಬಯಸುವವರಿಗೆ ಕರ್ನಾಟಕ ಸೇರಿ ಇತರೆ ರಾಜ್ಯಗಳಲ್ಲಿ ಸಿಇಟಿ ಪರೀಕ್ಷೆ ಪಾರದರ್ಶಕವಾಗಿ ನಡೆಯುತ್ತಿತ್ತು. ಮೋದಿ ಪ್ರಧಾನಿಯಾದ ನಂತರ ಈ ಪದ್ಧತಿ ಬದಲಿಸಿ, 2016ರಲ್ಲಿ ನೀಟ್‌ ಪರೀಕ್ಷೆ ಜಾರಿಗೆ ತಂದರು. ಕಳೆದ ಹತ್ತು ವರ್ಷಗಳಿಂದ ಐದು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಸತತ ಪರಿಶ್ರಮ ನೀಡಿದ್ದ ವಿದ್ಯಾರ್ಥಿಗಳು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದ ಹತಾಶರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ ನೀಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದರು.ವೈದ್ಯಕೀಯ ಪ್ರವೇಶ ಪರೀಕ್ಷೆ ಕೇಂದ್ರೀಕೃತವಾಗಬಾರದು. ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿರುವ ವಿಷಯ. ಒಕ್ಕೂಟದ ವ್ಯವಸ್ಥೆಯಲ್ಲಿ ಆಯಾ ರಾಜ್ಯಗಳಿಗೆ ಸ್ವಾತಂತ್ರ್ಯ ನೀಡಬೇಕು. ಅದು ಬಿಟ್ಟು ಕೇಂದ್ರೀಕರಿಸುವ ಕೆಲಸ ಮಾಡಬಾರದು. ಇನ್ನುಮುಂದೆ ಕೇಂದ್ರಸರ್ಕಾರ ನೀಟ್ ಪರೀಕ್ಷೆಗಳನ್ನು ನಡೆಸದೆ, ಈ ಜವಾಬ್ದಾರಿಯನ್ನು ಆಯಾ ರಾಜ್ಯಗಳಿಗೆ ಪರೀಕ್ಷೆ ನಡೆಸುವ ಅಧಿಕಾರ ಕೊಡಬೇಕು ಎಂದು ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧಾರವಾಡ ಮಹಾನಗರ ಪಾಲಿಕೆ ನಾಮಫಲಕ ಅಳವಡಿಕೆ!
ಉಪ್ಪಾರ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗಲಿ: ಪುರುಷೋತ್ತಮಾನಂದಪುರಿ ಶ್ರೀ