ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಸಾಹಸ, ವೀರತೆಗೆ ಹೆಸರಾಗಿದ್ದ ಪಾಳೆಗಾರರಾದ ನಮ್ಮ ನಾಡಿನ ವೀರಮದಕರಿ ನಾಯಕರ ಬದುಕು ಆದರ್ಶಮಯವಾಗಿದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.ಸಮೀಪದ ಮುರುಡಿ ಗ್ರಾಮದಲ್ಲಿ ವೀರಮದಕರಿ ನಾಯಕರ ಮೂರ್ತಿ ಅನಾವರಣಗೊಳಿಸಿ ಮಾತನಾಡಿ, ಮದಕರಿ ನಾಯಕರ ಸಾಹಸ ಚರಿತೆಯನ್ನು ಇಂದಿನ ಮಕ್ಕಳು ಓದಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಯುವಕರು ನಾಯಕರ ಮಾತುಗಳನ್ನು ಕೇಳುವುದಷ್ಟೇ ಅಲ್ಲ. ಅವರ ಆದರ್ಶ ಅನುಕರಿಸಬೇಕು ಎಂದರು.
ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಶ್ರೀಗಳು ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರತಿಯೊಬ್ಬರು ರಾಮತಾರಕ ಮಂತ್ರ ಜಪಿಸಬೇಕು. ರಾಮಾಯಣ ಮಹಾಕಾವ್ಯ ಭಾರತೀಯ ಸಂಸ್ಕೃತಿಯಲ್ಲಿ ನಿತ್ಯವು ಜನಮಾನಸದಲ್ಲಿ ಹಾಸುಹೊಕ್ಕಾಗಿದೆ. ಮಹರ್ಷಿ ವಾಲ್ಮೀಕಿ ಅವರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಾಜ ವೀರ ಮದಕರಿ ನಾಯಕರ ಬದುಕು ಅದ್ಭುತವಾಗಿದೆ. ಅವರ ಪ್ರತಿಮೆ ಅನಾವರಣ ಮಾಡಿದ್ದು ಶ್ಲಾಘನೀಯವಾಗಿದೆ. ಯುವಕರು ಮದ್ಯಪಾನ ಸೇರಿದಂತೆ ದುಶ್ಚಟಗಳಿಂದ ದೂರವಿರಬೇಕು ಎಂದು ಹೇಳಿದರು.ಮುರುಘಾಮಠದ ಕಾಶಿನಾಥ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಇದೇ ವೇಳೆ ಹಲವು ಮಹನೀಯರನ್ನು ಸನ್ಮಾನಿಸಲಾಯಿತು.ವಾಲ್ಮೀಕಿ ಮಹರ್ಷಿಗಳ ಹಾಗೂ ವೀರಮದಕರಿ ನಾಯಕರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿದರು. ವೇದಿಕೆ ಮೇಲಿದ್ದ ಗಣ್ಯರು ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರ ರಾಜಶೇಖರ ಶೀಲವಂತ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾಧ್ಯಕ್ಷ ದ್ಯಾಮಣ್ಣ ಗಾಳಿ, ಮಾಜಿ ಜಿಲ್ಲಾಧ್ಯಕ್ಷ ರಾಜು ನಾಯ್ಕರ, ಪಿಎಸ್ಐ ಸಿದ್ದು ಯಡಹಳ್ಳಿ, ಈರಪ್ಪ ಸೂಳಿಕೇರಿ, ಫಕೀರಪ್ಪ ತಳವಾರ, ಬಸವರಾಜ ತಳವಾರ, ಭರಮಪ್ಪ ಕಾಟನ್ನವರ, ಶಂಕರಗೌಡ ಗೌಡರ, ಶಿವಪ್ಪ ವಾಲಿಕಾರ, ಭೀಮನಗೌಡ ಗೌಡರ, ಯಲ್ಲಪ್ಪ ಮನ್ನಿಕಟ್ಟಿ, ರಾಮಣ್ಣ ನೀರಲಕೇರಿ, ರಾಮಪ್ಪ ಗೌಡರ, ರಾಮಣ್ಣ ವಾಲಿಕಾರ, ಭೀಮಪ್ಪ ಡಂಗಿ, ಬಸವರಾಜ ದಳವಾಯಿ, ಮಂಗಳಪ್ಪ ಹೊಸೂರು, ಮಾರುತಿ ದ್ಯಾಮನಗೌಡ್ರ, ಪಾಂಡು ಗೌಡ್ರ ಸೇರಿದಂತೆ ಇತರರು ಇದ್ದರು.