ಯುವ ಕವಿಗೋಷ್ಠಿ: ಹಿರಿಯರ ಮಾನ ಉಳಿಸಿದ ಯುವ ಕವಿಗಳು

KannadaprabhaNewsNetwork |  
Published : Feb 16, 2026, 02:30 AM IST
ಹಂಪಿ ಉತ್ಸವದಲ್ಲಿ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿದ ಯುವ ಕವಿಗೋಷ್ಠಿಗೆ ಚಾಲನೆ ನೀಡಿದ ಸಾಹಿತಿ ಎ.ಎಂ.ಮದರಿ. | Kannada Prabha

ಸಾರಾಂಶ

ವಿಜಯನಗರ ವೈಭವ, ಬಲಿಷ್ಠ ರಾಷ್ಟ್ರಗಳ ಯುದ್ಧೋತ್ಸಾಹ ಸೇರಿದಂತೆ ಹತ್ತಾರು ಬಗೆಯ ನವ್ಯ ಕಾವ್ಯಗಳ ವಾಚನ ಮಾಡಿ ಹಿರಿಯ ಕವಿಗಳ ಮಾನವನ್ನು ಯುವ ಕವಿಗಳು ಉಳಿಸಿದ್ದಾರೆ.

ಚಂದ್ರು ಕೊಂಚಿಗೇರಿ

ಹಂಪಿ: ಸಾಮಾಜಿಕ ತಲ್ಲಣಗಳು, ಮಹಿಳೆಯರ ಶೋಷಣೆ, ಕೊಳಕು ರಾಜಕೀಯ, ವಿನಾಶದಂಚಿಗೆ ಬಂತು ಪರಿಸರ, ಮಾನವ ಮತ್ತು ಪ್ರಾಣಿಗಳ ಸಂಘರ್ಷ, ಪ್ರಾಣಿ ಸಂಕುಲ ವಿನಾಶಕ್ಕೆ ಕಾರ್ಖಾನೆಗಳ ಕೇಕೆ, ಅಕ್ಷರಕ್ಕೆ ಆದ್ಯತೆ, ವಿಜಯನಗರ ವೈಭವ, ಬಲಿಷ್ಠ ರಾಷ್ಟ್ರಗಳ ಯುದ್ಧೋತ್ಸಾಹ ಸೇರಿದಂತೆ ಹತ್ತಾರು ಬಗೆಯ ನವ್ಯ ಕಾವ್ಯಗಳ ವಾಚನ ಮಾಡಿ ಹಿರಿಯ ಕವಿಗಳ ಮಾನವನ್ನು ಯುವ ಕವಿಗಳು ಉಳಿಸಿದ್ದಾರೆ.

ಉತ್ಸವದ ಅಂಗವಾಗಿ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಯುವ ಕವಿಗೋಷ್ಠಿಯಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಯುವ ಕವಿಗಳು ತಮ್ಮ ಭಾವನೆಗಳಿಗೆ ಬಂಡಾಯ ರೂಪ ಕೊಟ್ಟು, ಅಕ್ಷರದ ಆಕಾರ ನೀಡಿ, ಕವಿತೆಗಳನ್ನು ವಾಚಿಸಿದರು. ನೆರೆದಿದ್ದ ಸಭಿಕರು, ಕವಿ ಸಹೃದಯರು, ಸಾಹಿತ್ಯಾಸಕ್ತರ ಮನಸ್ಸಿಗೆ ಮುದ ನೀಡಿದವು.

ಯುವ ಕವಿಗಳ ಕವಿತೆಗಳಲ್ಲಿ ಮೌಢ್ಯತೆಗಳನ್ನು ಕಿತ್ತು ಹಾಕಿ, ಸಮಸಮಾಜ ನಿರ್ಮಾಣ, ದೇಶ ಭಕ್ತಿಯ ಅಭಿಮಾನ, ಸಾಮಾಜಿಕ ಮೌಲ್ಯಗಳಿಗಳಿಗೆ ಶಕ್ತಿ ತುಂಬುವಂತಿದ್ದವು. ಕವಿತೆಗಳಿಗೆ, ಹೋರಾಟದ ಶಕ್ತಿಯೂ ಇದೆ ಎಂಬುದರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತಹ ಸಾಹಿತ್ಯಿಕ ಕವಿತೆಗಳು ಕವಿಗೋಷ್ಠಿಯಲ್ಲಿ ಕೇಳಿ ಬಂದವು.

ವೈ.ಟಿ. ಅನಸೂಯಾ ಅವರ ಸೂಳೆ ಕವಿತೆಯಲ್ಲಿ ವಯೋಧರಗಳನುಬ್ಬಿಸಿ ಲಜ್ಜೆಗೆಟ್ಟ ಗಂಡಸರಿಂದ ನರಳುವಳು ಹೊಟ್ಟೆಪಾಡಿಗಾಗಿ, ಕಿಬ್ಬೊಟ್ಟೆಯಡಿಯಲಿ, ನೆರಿಗೆ ಗರಿ ಪಡೆದು ಅಲೆಯುವಳು ಕೆಂಪು ದೀಪದ ಬೆಳಕಲಿ, ಕಣ್ಣಿಗೆ ಕಾಪಿಟ್ಟ ಕಾಡಿಗೆ ಚಿಗರಿ ಕಂಗಳ ಚಲುವೆ, ಹೀಗೆ ಸೂಳೆಯನ್ನು ಸಾಲು ಸಾಲಾಗಿ ಹೊಗಳಿಕೆಯ ನಂತರದಲ್ಲಿ, ಜಗವು ಕರೆಯುವುದು ಅವಳನ್ನು ಸೂಳೆಯೆಂದು, ಸೂಳೆ ಸಂಕವ್ವ ಶರಣೆಯಾಗಿಸಿ ಗಣಿಕೆಯರನ್ನು ಕಂಡ ಬಸವನ್ನಿತೆಂದು ತಲುವಪ್ಪಿ ಸುಖ ಸುಖ ಕೊಡುವಳಲ್ಲದೇ ಮನವನಪ್ಪಿ ಸುಖ ಕೊಡುವಳೇ? ಹೀಗೆ ಇವರ ಕವಿತೆ ಸಭಿಕರನ್ನು ಮೆಚ್ಚಿಸಿತು.

ಅಭಿಷೇಕ ಬಳೆ ಮಸರಕಲ್‌ ಇವರ ಕೋವಿ ಕೊಳಲಾಗಲಿ ಎಂಬ ಕವಿತೆಯ ಮೂಲಕ ವಿಶ್ವ ಬಲಾಢ್ಯ ರಾಷ್ಟ್ರಗಳ ಯುದ್ಧೋತ್ಸಾಹ, ಮದ್ದು-ಗುಂಡುಗಳಿಂದ ರಕ್ತಸಿಕ್ತ ನೆಲ, ಆಡುವ ಕಂದನ ಕಾಲಿಗೆ ಮಣ್ಣು ಅಂಟುತ್ತಿಲ್ಲ. ದೊರೆಗಳು ಕೋಟೆ-ಕೊತ್ತಲುಗಳನ್ನು ಜನಸಾಮಾನ್ಯರ ಗೋರಿಯ ಮೇಲೆ ಕಟ್ಟಲಾಗುತ್ತಿದೆ. ಉಸಿರಾಡುವ ಗಾಳಿಯಲ್ಲಿ ಬರೀ ಬಂದೂಕುಗಳ ಸದ್ದು, ಬೆಂಕಿ ಕಾರುವ ಗುಂಡು, ನೆಲದಿಂದ ನಭಕ್ಕೆ ಜಿಗಿಯುವ ನೆತ್ತರು, ಮುರಿದು ಬಿದ್ದ ಮನೆ ಮನಸ್ಸು ಕನಸುಗಳು ಹೆಣಗಳ ರಾಶಿ ಕುಕ್ಕಿ ತಿನ್ನುವ ರಣಹದ್ದುಗಳು, ಹೀಗೆ ತಮ್ಮ ಕವಿತೆಯಲ್ಲಿ ಧರ್ಮ ಎಂಬ ಅಫೀಮು ನೆತ್ತಿಗೇರಿದವರ ಎದೆಯಲ್ಲಿ ಬುದ್ಧ ಉಸಿರಾಡುವುದಿಲ್ಲ. ಈ ರೀತಿ ಕೋವಿ ಕೊಳಲಾಗಲಿ ಕವಿತೆಯ ಮೂಲಕ ಜನರಲ್ಲಿ ಶಾಂತಿ ಸಂದೇಶ ಸಾರಿದರು.

ರೇಷ್ಮ ಕಂದಕೂರ ಅವರ ಕಾಯುತ್ತಿದ್ದೇನೆ, ಆರತಿ ನರಸಿಂಹರಾವ್‌ ಇವರ ಕನ್ನಡ, ಆರ್‌.ಪಿ. ಮಂಜು ಅವರ ಅವಳೆಂದರೆ ಅವಳು, ಎಂ. ಕಾರ್ತಿಕ ಮರಿಸ್ವಾಮಿಮಠ ಅವರ ಅವಳು ಹೆಣ್ಣು, ಲಕ್ಷ್ಮಣ ವಿಟ್ರವಟ್ಟಿ ಅವರ ಬದುಕು ಮತ್ತು ಕಣ್ಣೀರು, ರೇಣುಕಾ ಹೆಳವರ್‌ ಅವರ ಲಿವಿಂಗ್‌ ಟುಗೆದರ್‌, ಅನಿಲ್‌ಕುಮಾರ ಅವರ ಬುದ್ಧ, ಡಾ. ಶರೀಫ ಅಸ್ಮಕಲ್‌ ಅವರ ಮತ್ತೆ ಮತ್ತೆ ಸಾರಬೇಕಿದೆ, ಕೀರ್ತಿ ಅಕ್ಕಿ ಅವರ ವಿಜಯೋತ್ಸವ, ತುಳಸಿ ಕೂಡ್ಲಗಿ ಅವರ ಇತಿಹಾಸ, ಶೇಖ್‌ ಮಹ್ಮದ್‌ ಖಾಜಿ ಅವರ ನಾನು ಹೆಣ್ಣಲ್ಲ ಸುಮ್ಮನಿರಿ, ಹೀಗೆ ಹತ್ತಾರು ಬಗೆಯ ಕವಿತೆಗಳನ್ನು ಯುವ ಕವಿಗಳು ವಾಚನ ಮಾಡಿದರು.

ಕವಿಗೋಷ್ಠಿಗೆ ಸಾಹಿತಿ ಎ.ಎಂ. ಮದರಿ ಚಾಲನೆ ನೀಡಿ ಮಾತನಾಡಿ, ಯುವ ಕವಿಗಳಿಗೆ ಅಧ್ಯಯನ ಬೇಕಿದೆ. ಸಮಾಜಕ್ಕೆ ಉಪಯೋಗ ಮತ್ತು ಒಳ್ಳೆಯದಾಗುವ ಕುರಿತು ಕಾವ್ಯ ರಚಿಸಿ, ಮಹಲು ವರ್ಣಿಸುವ ಬದಲು ಗುಡಿಸಲ್ಲಿ ವಾಸವಿರುವ ಕುರಿತು ಕವಿತೆ ರಚಿಸಲಿ, ಕವಿಗಳಲ್ಲಿ ದಾರ್ಷ್ಟ್ಯತನವಿರಬೇಕು, ಅದು ಬಿಟ್ಟು ಬಟ್ಟಂಗಿಗಳಾಗಬಾರದು ಎಂದರು.

ಸಾಹಿತಿ ಡಾ. ಚನ್ನಬಸಪ್ಪ ಚಿಲಕರಾಗಿ ಮಾತನಾಡಿ, ಈ ನಾಡಿನಲ್ಲಿ ಕಾರ್ಖಾನೆಗಳ ಕೇಕೆ ಹಾಕುತ್ತಿರುವುದರಿಂದ ನೆಲ, ಜಲ, ಗಾಳಿ ಕಲುಷಿತಗೊಂಡಿವೆ. ಜನ ಆಸ್ಪತ್ರೆಯ ಪಾಲಾಗುತ್ತಿದ್ದಾರೆ. ಇದು ಯುವ ಕವಿತೆಗಳು ಜನರ ಮನಸ್ಸನ್ನು ಗೆದ್ದು ಹೋರಾಟಕ್ಕೆ ಸಜ್ಜುಗೊಳಿಸುವ ಕೆಲಸ ನಿಮ್ಮ ಮೇಲಿದೆ ಎಂದರು.

ಅಧ್ಯಕ್ಷತೆಯನ್ನು ಕನ್ನಡ ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಕೆ. ರವೀಂದ್ರನಾಥ ವಹಿಸಿದ್ದರು. ಸಿಡಿಪಿಒ ಬೋರೇಗೌಡ, ಎಂ.ಆರ್‌. ವಾಗೀಶ, ಡಿ.ಆರ್‌. ರಾಘವೇಂದ್ರ, ಮುದುಕಪ್ಪ, ದಯಾನಂದ ಕಿನ್ನಾಳ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಕಲಿಕೆ ಪ್ರದರ್ಶನಕ್ಕೆ ಕಲಿಕಾ ಹಬ್ಬ ವೇದಿಕೆ: ಬಿಇಒ ನಾಣಿಕಿ ನಾಯ್ಕ
ಹಂಪಿ ಉತ್ಸವದಲ್ಲಿ ರಕ್ತರಾತ್ರಿ ನಾಟಕ ಪ್ರದರ್ಶನ