ನೈಜ ಸಾಧಕರನ್ನು ನೇಪತ್ಯಕ್ಕೆ ತಳ್ಳುತ್ತಿರುವ ಯುವಕರು

KannadaprabhaNewsNetwork |  
Published : Sep 05, 2024, 12:35 AM IST
ಹೂವಿನಹಡಗಲಿಯ ಜಿಬಿಆರ್‌ ಕಾಲೇಜಿನಲ್ಲಿ ಆಯೋಜಿಸಿದ್ದ ಡಾ.ಎಸ್‌.ವಿದ್ಯಾ ಶಂಕರ ಜೀವನ ಮತ್ತು ಲಾಹಿತ್ಯ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿದ ಹಂಪಿ ವಿವಿಯ ಕುಲಪತಿ ಡಿ.ವಿ.ಪರಮಶಿವಮೂರ್ತಿ. | Kannada Prabha

ಸಾರಾಂಶ

ಇಂದಿನ ಯುವಕರಿಗೆ ಜನಪ್ರಿಯತೆ ಇರುವ ವ್ಯಕ್ತಿಗಳು ಮಾದರಿಯಾಗಿದ್ದಾರೆ, ಆದರೆ ನೈಜ ಸಾಧಕರನ್ನು ನೇಪತ್ಯಕ್ಕೆ ತಳ್ಳಿದ್ದಾರೆ.

ಹೂವಿನಹಡಗಲಿ: ಇಂದು ನಮಗೆ ಮಾದರಿ ವ್ಯಕ್ತಿಗಳೇ ಸಿಗುತ್ತಿಲ್ಲ. ಜನಪ್ರಿಯತೆ ಇರುವ ವ್ಯಕ್ತಿಗಳನ್ನು ಮಾದರಿಯನ್ನಾಗಿ ಮಾಡಿಕೊಂಡು, ಸಾಧಕರನ್ನು ನೇಪತ್ಯಕ್ಕೆ ಸರಿಸಿದ್ದೇವೆ ಎಂದು ಹಂಪಿ ಕನ್ನಡ ವಿವಿಯ ಕುಲಪತಿ ಡಿ.ವಿ. ಪರಮಶಿವಮೂರ್ತಿ ಹೇಳಿದರು.

ಇಲ್ಲಿನ ಜಿಬಿಆರ್‌ ಕಾಲೇಜಿನಲ್ಲಿ ಡಾ.ಎಸ್‌.ವಿದ್ಯಾಶಂಕರ ಸಾಂಸ್ಕೃತಿಕ ಪ್ರತಿಷ್ಠಾನ, ವಿಜಯನಗರ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕನ್ನಡ ವಿಶ್ವ ವಿದ್ಯಾಲಯದ ಮಾನ್ಯತಾ ಕೇಂದ್ರ ಉದ್ಘಾಟನೆ ಹಾಗೂ ಡಾ.ವಿದ್ಯಾಶಂಕರ ಜೀವನ ಮತ್ತು ಸಾಹಿತ್ಯ ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂದಿನ ಯುವಕರಿಗೆ ಜನಪ್ರಿಯತೆ ಇರುವ ವ್ಯಕ್ತಿಗಳು ಮಾದರಿಯಾಗಿದ್ದಾರೆ, ಆದರೆ ನೈಜ ಸಾಧಕರನ್ನು ನೇಪತ್ಯಕ್ಕೆ ತಳ್ಳಿದ್ದಾರೆ. ಇದು ನಿಮ್ಮ ಮನಸ್ಸಿಗೆ ತಕ್ಕ ಮಟ್ಟಿಗೆ ಖುಷಿ ನೀಡುತ್ತದೆ. ಆದರೆ ಜೀವನದ ಮೌಲ್ಯಗಳು ಕುಸಿಯುತ್ತವೆ ಎಂದರು.

ಕನ್ನಡ ಸಾಹಿತ್ಯ ಲೋಕದಲ್ಲಿ ವೀರಶೈವ ಕವಿಗಳ ಕೊಡುಗೆ ಅಪಾರವಾಗಿದೆ. ಈ ನಿಟ್ಟಿನಲ್ಲಿ ಡಾ.ಎಸ್‌.ವಿದ್ಯಾಶಂಕರ ಬಹು ದೊಡ್ಡ ಕೊಡುಗೆ ನೀಡಿದ್ದಾರೆ. ಇಡೀ ವಿಶ್ವವೇ ಬೆರಗಾಗುವಂತೆ ಅವರು ವೀರಶೈವ ಸಾಹಿತ್ಯ ಕುರಿತು ಸಂಶೋಧನೆ ಮಾಡಿದ್ದಾರೆ. ಇಂತವರು ನಮಗೆ ಮಾದರಿಯಾಗಬೇಕಿದೆ. 80 ಪುಸ್ತಕಗಳನ್ನು ಬರೆದು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.

ಶರಣರು ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿ, ತಮ್ಮ ವಚನಗಳ ಮೂಲಕ ಸಮಾಜವನ್ನು ಸರಿದಾರಿಗೆ ತರುವಂತಹ ಕೆಲಸ ಮಾಡಿದ್ದಾರೆ. ವೀರಶೈವ ಸಾಹಿತ್ಯ, ಪರಂಪರೆ, ವೈಭವವನ್ನು ಉಳಿಸಿ ಬೆಳೆಸಲು ಡಾ.ಎಸ್‌.ವಿದ್ಯಾಶಂಕರ ವೀರಶೈವ ಸಾಹಿತ್ಯ ಚರಿತ್ರೆಯನ್ನು ನಮಗೆ ಉಳಿಸಿ ಹೋಗಿದ್ದಾರೆ ಎಂದರು.

ಇಲ್ಲಿನ ಜಿಬಿಆರ್‌ ಕಾಲೇಜಿನಲ್ಲಿ ಹಂಪಿ ಕನ್ನಡ ವಿವಿಯಿಂದ, ಮಾನ್ಯತಾ ಕೇಂದ್ರ ಆರಂಭಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದರ ಅನುಕೂಲ ಪಡೆಯಬೇಕಿದೆ ಎಂದರು.

ವೀವಿ ಸಂಘದ ಕಾರ್ಯದರ್ಶಿ ಡಾ.ಅರವಿಂದ ಪಾಟೀಲ್‌, ರುದ್ರೇಶ ಅದರಂಗಿ, ಎನ್‌.ಎಂ.ರವಿಕುಮಾರ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ.ಮೋಹನರೆಡ್ಡಿ ಮಾತನಾಡಿದರು.

ವೀವಿ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಅಧ್ಯಕ್ಷತೆ ವಹಿಸಿದ್ದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಕೆ. ರವೀಂದ್ರನಾಥ ಪ್ರಾಸ್ತಾವಿಕ ಮಾತನಾಡಿದರು. ಜಿಬಿಆರ್‌ ಪದವಿ ಕಾಲೇಜು ಪ್ರಾಚಾರ್ಯ ಎಸ್‌.ಎಸ್‌. ಪಾಟೀಲ್, ಪಿಯು ಕಾಲೇಜು ಪ್ರಾಚಾರ್ಯ ಅಮರೇಗೌಡ ಪಾಟೀಲ್‌, ಡಾ.ವೈ.ಚಂದ್ರಬಾಬು ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!