ಕನ್ನಡಪ್ರಭ ವಾರ್ತೆ ಹಾಸನ
ಅಲ್ಲಲ್ಲಿ ಅಶಾಂತಿ ಸೃಷ್ಟಿಯಾಗುತ್ತಿರುವ ಇಂದಿನ ದಿನಗಳಲ್ಲಿ ವಿಶ್ವದಲ್ಲಿ ಶಾಂತಿ ಕಾಪಾಡಲು ಯುವಜನತೆ ಸ್ವಯಂಪ್ರೇರಿತವಾಗಿ ಮುಂದಾಗಬೇಕು ಎಂದು ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಕರೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಯುವ ರೆಡ್ಕ್ರಾಸ್ ಘಟಕ, ಜೂನಿಯರ್ ರೆಡ್ಕ್ರಾಸ್ ಘಟಕ ಮತ್ತು ರೋಟರಿ ಕ್ಲಬ್ ಆಫ್ ಹಾಸನ ಮಿಡ್ ಟೌನ್ ಸಂಯುಕ್ತಾಶ್ರಯದಲ್ಲಿ ಶನಿವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಶಾಂತಿ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಶಾಂತಿಗಾಗಿ ಕಾಲ್ನಡಿಗೆ ಮೆರವಣಿಗೆಯಲ್ಲಿ ಪಾರಿವಾಳ ಹಾರಿ ಬಿಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಜಗತ್ತಿನಲ್ಲಿ ಇಂದು ವಿವಿಧ ವಿಚಾರಗಳಿಗೆ ಮನುಕುಲದ ನಡುವೆಯೇ ಗಲಭೆ ಸೃಷ್ಟಿಯಾಗಿ ಆಶಾಂತಿ ವಾತಾವರಣ ಸೃಷ್ಟಿಯಾಗಿದೆ, ಉಕ್ರೇನ್, ರಷ್ಯಾ, ಇಸ್ರೇಲ್ ಪ್ರತಿಯೊಂದು ದೇಶಗಳ ನಡುವೆ ಯುದ್ಧ ನಡೆಯುವ ಸಂದರ್ಭದಲ್ಲಿ ನಾವುಗಳು ಶಾಂತಿ ಕಾಪಾಡಬೇಕು. ಅಶಾಂತಿ ಸೃಷ್ಟಿಯಾಗಿರುವುದಕ್ಕೆ ಅಂತ್ಯ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕಿದೆ ಎಂದರು. ಕರ್ನಾಟಕ ರಾಜ್ಯದಲ್ಲಿ ಕೂಡ ಧರ್ಮ ಧರ್ಮಗಳ ನಡುವೆ ಗಲಭೆಗಳು ಸೃಷ್ಟಿಯಾಗುತ್ತಿವೆ, ಮಂಗಳೂರು, ನಾಗಮಂಗಲ ಸೇರಿದಂತೆ ವಿವಿಧೆಡೆ ನಡೆದ ಗಲಭೆಗಳ ಇದಕ್ಕೆ ಉತ್ತಮ ಉದಾಹರಣೆಯಾಗಿವೆ ಇಂತಹ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ ಮಾತನಾಡಿ, ವಿಶ್ವಶಾಂತಿ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು, ಪ್ರತಿದಿನವೂ ಶಾಂತಿ ಮಂತ್ರವನ್ನು ಜಪಿಸಬೇಕು. ಭಾರತ ದೇಶ ಹಾಗೂ ಕರ್ನಾಟಕ ರಾಜ್ಯ ಶಾಂತಿಗೆ ಹೆಸರುವಾಸಿಯಾಗಿದೆ. ಸೌಹಾರ್ದತೆ ಸಹಬಾಳ್ವೆಗೆ ಹೆಚ್ಚು ಮಹಾತ್ಮ ಕೊಡುತ್ತೇವೆ. ಭ್ರಾತೃತ್ವ ಭಾವನೆಯಿಂದ ಬದುಕಬೇಕು ಎನ್ನುವುದು ಎಲ್ಲರ ಆಶಯ ಎಂದರು. ಎಲ್ಲೋ ಒಂದು ಕಡೆ ಅಸಹನೆ ತೋರುತ್ತಾ ಇರುತ್ತದೆ. ಎಂತಹ ಸಂದರ್ಭದಲ್ಲಿಯೂ ಕೂಡ ಶಾಂತಿಯನ್ನು ಸ್ಥಾಪಿಸಿ ಮುಂದುವರಿಯುತ್ತಿದ್ದೇವೆ. ಪ್ರತಿಯೊಬ್ಬರೂ ಪ್ರತಿನಿತ್ಯ ಶಾಂತಿ ಮಂತ್ರವನ್ನು ಅಳವಡಿಸಿಕೊಳ್ಳಬೇಕು ಎಂದರು.
ನಗರಸಭೆ ಅಧ್ಯಕ್ಷರಾದ ಎಂ. ಚಂದ್ರೇಗೌಡ ಮಾತನಾಡಿ, ನಾವು ಬಹಳ ಕಷ್ಟದ ಕಡೆಗೆ ಹೋದಾಗ, ಪ್ರಕೃತಿ ವಿಕೋಪ ಆದಾಗ ತುಂಬಾ ತೊಂದರೆಯಲ್ಲಿ ಇದ್ದಾಗ ಭಗವಂತನೆ ಕಾಪಾಡಲು ಸಾಧ್ಯ ಎಂದಾಗ ಭಗವಂತನ ಇನ್ನೊಂದು ರೂಪವೇ ಭಾರತೀಯ ರೆಡ್ ಕ್ರಾಸ್ ಸಂಸ್ಥೆ. ನನ್ನದು ನನಗಾಗಿ ಅನ್ನೋಂದು ಏನ್ನೋ ಇಲ್ಲ. ಎಲ್ಲರೂ ಹೋಗುವವರೆ. ನೀವು ಪರರಿಗಾಗಿ ಬದುಕು ಪರರೇಲ್ಲರೂ ನಿನ್ನ ಜೊತೆ ಇರುತ್ತಾರೆ ಎಂದು ಸಂದೇಶ ನೀಡಿದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಎಚ್.ಪಿ. ಮೋಹನ್ ಮಾತನಾಡಿ, ೨೫ನೇ ವಾರ್ಷಿಕ ವಿಶ್ವ ಶಾಂತಿ ದಿನಾಚರಣೆ ನಡೆಯುತ್ತಿದೆ. ಇಡೀ ಪ್ರಪಂಚ ಯುದ್ಧದ ಕದನದಲ್ಲಿ ಮುಳುಗಿ ಹೋಗಿದೆ. ಶಾಂತಿ ಕದಲಿದೆ. ಶಾಂತಿಯ ವಾತಾವರಣವನ್ನು ಎಲ್ಲ ಕಡೆ ಸೃಷ್ಠಿ ಮಾಡಲು ಮೂದಲು ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಶಾಂತಿ ಮೂಡಿಸಿಕೊಂಡು ಇಡೀ ಪ್ರಪಂಚದಲ್ಲಿ ಶಾಂತಿ ಮೂಡಲಿ ಎನ್ನುವ ಅಭಿಪ್ರಾಯದಿಂದ ಶಾಂತಿ ದಿನಾಚರಣೆಯ ಸಂದೇಶವನ್ನು ಪ್ರತಿ ಜಿಲ್ಲೆಯಲ್ಲಿ ತಾಲೂಕಿನಲ್ಲಿ ವಿವಿಧ ದೇಶಗಳಲ್ಲಿಯೂ ಕೂಡ ಈ ದಿವಸ ಆಚರಣೆ ಮಾಡಲಾಗುತ್ತಿದೆ ಎಂದರು. ದ್ವೇಷ ಎಂಬುದು ಜನರುಗಳನ್ನು ವಿಭಜಿಸುತ್ತದೆ. ಶಾಂತಿ ಎಲ್ಲರನ್ನು ಒಟ್ಟುಗೂಡಿಸುತ್ತದೆ. ಯುದ್ಧ ಯಾವುದೂ ಕೂಡ ಅಂತ್ಯವಲ್ಲ. ಶಾಂತಿಯೇ ಜೀವನದ ನಿಜವಾದ ಮಂತ್ರ. ಒಂದು ಶಾಂತಿಯುತವಾದ ವಾತಾವರಣ ಸೃಷ್ಟಿ ಮಾಡುವುದಕ್ಕೆ ಮೂಲಭೂತವಾದಂತಹ ಒಂದು ಉತ್ತಮ ಭಾವನೆಯನ್ನು ಸೃಷ್ಟಿ ಮಾಡಬೇಕಾಗಿದೆ ಎಂದು ತಿಳಿಸಿದರು.ಇದೇ ವೇಳೆ ಡಿವೈಎಸ್ಪಿ ಮುರಳೀಧರ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಬಿ.ಆರ್. ಉದಯ ಕುಮಾರ್, ಎಸ್.ಎಸ್. ಪಾಷಾ, ಕೆ.ಟಿ. ಜಯಶ್ರೀ, ಶಬೀರ್ ಅಹಮ್ಮದ್, ಸಮಾಜ ಸೇವಕರಾದ ಅಮ್ಜದ್ ಖಾನ್, ಡಾ. ಸಾವಿತ್ರಿ, ಮಹಾವೀರ್ ಬನ್ಸಾಲಿ, ಸ್ಕೌಟ್ಸ್ ಅಂಡ್ ಗೈಡ್ಸ್ನ ಸುರೇಶ್ ಗೂರೂಜಿ, ಹಾಸನ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಐ.ಜಿ. ರಮೇಶ್, ಕಾರ್ಯದರ್ಶಿ ಬಲ್ಲೇನಹಳ್ಳಿ ರವಿಕುಮಾರ್ ಇತರರು ಉಪಸ್ಥಿತರಿದ್ದರು.