ಬೆಳ್ತಂಗಡಿ: ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಚಾಂದ್ರಮಾನ ಯುಗಾದಿಯಂದು ವಿಶೇಷ ಪೂಜೆ, ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಬೇವು ಬೆಲ್ಲ ವಿತರಣೆ ಕಾರ್ಯಕ್ರಮ ಜರುಗಿದವು.ಗೀತಾ ಗ್ರಾಮ ಅನುಷ್ಠಾನದ ಭಾಗವಾಗಿ ಕಳೆದ ಹತ್ತು ವರ್ಷಗಳಿಂದ ವಿದ್ಯಾರ್ಥಿಗಳಿಗೆ ನಡೆಸುತ್ತಿರುವ ಭಗವದ್ಗೀತಾ ತರಗತಿ ಹಾಗೂ ವಿಷ್ಣು ಸಹಸ್ರನಾಮ ತರಗತಿಗಳಿಗೆ ಪೂರಕವಾಗಿ ಗುರುವಾರ ರಾಮಾಯಣ ತರಗತಿಗೆ ಮಾಜಿ ಸಚಿವ, ಪ್ರಸನ್ನ ಎಜ್ಯುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಕೆ. ಗಂಗಾಧರ ಗೌಡ ಚಾಲನೆ ನೀಡಿದರು. ನಾವೂರು ದೇವಸ್ಥಾನದ ಮೂಲಕ ನಡೆಯಿತ್ತಿರುವ ಧಾರ್ಮಿಕ ಹಾಗೂ ಸೇವಾ ಚಟುವಟಿಕೆಗಳನ್ನು ಈ ಸಂದರ್ಭದಲ್ಲಿ ಶ್ಲಾಘಿಸಿದ ಅವರು, ವಿದ್ಯಾರ್ಥಿಗಳಿಗೆ ರಾಮಾಯಣ ತರಗತಿಯನ್ನು ಉದ್ಘಾಟಿಸುತ್ತಾ ಭಾರತ ಪ್ರಪಂಚಕ್ಕೆ ಕೊಟ್ಟಿರುವ ಶ್ರೇಷ್ಠ ಕೊಡುಗೆಗಳಲ್ಲಿ ರಾಮಾಯಣ ಹಾಗೂ ಮಹಾಭಾರತಕ್ಕೆ ಮೇಲ್ಮಟ್ಟದ ಸ್ಥಾನವಿದೆ. ಇಂದಿನ ಕಾಲಮಾನಕ್ಕೆ ಈ ಗ್ರಂಥಗಳು ಕೊಟ್ಟಿರುವ ಮೌಲ್ಯಗಳು ಬಹಳಷ್ಟು ಪ್ರಸ್ತುತವಾಗಿವೆ. ಮುಂದಿನ ಪೀಳಿಗೆಗೆ ಇಂತಹ ಮೌಲ್ಯಗಳು ಅನಿವಾರ್ಯವಾಗಿವೆ. ಇಲ್ಲಿ ನಡೆಯುತ್ತಿರುವ ಕೆಲಸ ಕಾರ್ಯಗಳು ಇಡೀ ಸಮಾಜಕ್ಕೆ ಮಾದರಿಯಾಗಲಿ ಎಂದರು.
ಪ್ರಾಸ್ತಾವಿಕವಾಗಿ ಡಾ. ಪ್ರದೀಪ್ ಆಟಿಕುಕ್ಕೆ ಮಾತನಾಡಿದರು. ಟ್ರಸ್ಟಿ ಹರೀಶ್ ಕಾರಿಂಜ ನಿರೂಪಿಸಿದ ಕಾರ್ಯಕ್ರಮದಲ್ಲಿ ಜಾತ್ರಾ ಮಹೋತ್ಸವದ ಸಂಚಾಲಕರಾದ ಮೋಹನ್ ಬಂಗೇರ ಧನ್ಯವಾದವನ್ನಿತ್ತರು. ಸಂಚಾಲಕ ಡಾ| ಪ್ರದೀಪ್ ನಾವೂರು, ಟ್ರಸ್ಟ್ ನ ಸ್ಥಾಪಕಾಧ್ಯಕ್ಷರಾದ ಎ ಬಿ ಉಮೇಶ್ ಅತ್ಯಡ್ಕ, ಉಪಾಧ್ಯಕ್ಷರಾಗಿರುವ ತನುಜಾ ಶೇಖರ್, ಪ್ರಧಾನ ಕಾರ್ಯದರ್ಶಿಗಳಾಗಿರುವ ಧರ್ಣಪ್ಪ ಮೂಲ್ಯ, ಕಾರ್ಯದರ್ಶಿಗಳಾದ ತಿಮ್ಮಪ್ಪ ಜಿ ,ಕೋಶಾಧಿಕಾರಿಗಳಾದ ಉಮೇಶ್ ಪ್ರಭು, ಟ್ರಸ್ಟಿಗಳಾದ ಗಣೇಶ್ ಕಣಾಲು, ತನಿಯಪ್ಪ, ಗಣೇಶ್ ಗೌಡ, ಜಾತ್ರಾ ಸಮಿತಿಯ ಉಪಾಧ್ಯಕ್ಷರಾದ ಪೂವಪ್ಪ ಗೌಡ ಹಾಗೂ ಡಾ. ಕವಿತಾ ಪ್ರದೀಪ್ ಉಪಸ್ಥಿತರಿದ್ದರು. ಊರ ಪರವೂರ ಗಣ್ಯರು ಭಾಗವಹಿಸಿದರು. ಪ್ರಧಾನ ಅರ್ಚಕರಾದ ದಿನೇಶ್ ಭಟ್ ಇವರು ಪೂಜಾ ವಿಧಿಗಳನ್ನು ಹಾಗೂ ಪಂಚಾಂಗ ಶ್ರವಣವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ನಾವೂರಿನ ನಂದಲಾಲಾ…ಗೋಪಾಲಕೃಷ್ಣ ಆಡಿಯೋ ಆಲ್ಬಮ್ ಬಿಡುಗಡೆ ಮಾಡಲಾಯಿತು. ನಾವೂರಿನ ಅಶೋಕ್, ಪ್ರವೀಣ್, ವಿನ್ಯಾಸ್ ನೇತೃತ್ವದ ಯುವಕರ ಹೊಸ ತಂಡ - “ಅಶ್ವ ಗ್ರೂಪ್ಸ್” ಇದಕ್ಕೂ ಚಾಲನೆ ನೀಡಲಾಯಿತು.