ಕನ್ನಡಪ್ರಭ ವಾರ್ತೆ ಮೈಸೂರು
ವನ್ಯಜೀವಿ ಸಂರಕ್ಷಣೆ ಹಾಗೂ ಅರಣ್ಯದ ಮಹತ್ವ ತಿಳಿಸುವ ನಿಟ್ಟಿನಲ್ಲಿ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಆರಂಭಿಸಲಾದ ಯುವ ಮಿತ್ರ ಕಾರ್ಯಕ್ರಮವು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಗೌರವಕ್ಕೆ ಪಾತ್ರವಾಗಿದೆ.ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಸರ್ಕಾರಿ ಶಾಲೆಗಳ ಪ್ರೌಢಶಾಲಾ ಮಕ್ಕಳಿಗಾಗಿ ಪರಿಸರ ಶಿಕ್ಷಣ ನೀಡುವ ನಿಟ್ಟಿನಲ್ಲಿ 2023ರ ಮಾ.3 ರಂದು ಯುವ ಮಿತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಇದಕ್ಕಾಗಿ 2 ಹೊಸ ಬಸ್ ಗಳನ್ನು ಖರೀದಿಸಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಫಾರಿಗೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿತ್ತು.
ವಾರದಲ್ಲಿ 5 ದಿನ ವಿವಿಧ ಶಾಲೆಗಳ ಮಕ್ಕಳನ್ನು ಕರೆ ತಂದು ಬಂಡಿಪುರದ ಹಳೆ ಕ್ಯಾಂಪಸ್ ಸಭಾಂಗಣದಲ್ಲಿ ಪರಿಸರ ಶಿಕ್ಷಣ ನೀಡಿ ಬಳಿಕ, ಸಫಾರಿಗೆ ಕರೆದೊಯ್ದು ಪರಿಚಯ ಮಾಡಿಕೊಡಲಾಗುತ್ತಿತ್ತು. ಈ ಯೋಜನೆಯಲ್ಲಿ ಇದುವರೆಗೆ 162 ದಿನಗಳಲ್ಲಿ 7019 ವಿದ್ಯಾರ್ಥಿಗಳು, 655 ಶಿಕ್ಷಕರು, 197 ಗ್ರಾಪಂ ಸದಸ್ಯರು ಮತ್ತು ಸಿಬ್ಬಂದಿ, 395 ರೈತರು, 143 ಬುಡಕಟ್ಟು ಸಮುದಾಯದವರು ಸೇರಿದಂತೆ 8410 ಮಂದಿ ಪ್ರಯೋಜನ ಪಡೆದಿದ್ದಾರೆ.ದೇಶದಲ್ಲಿಯೇ ಯಾವುದೇ ಹುಲಿ ಸಂರಕ್ಷಿತ ಪ್ರದೇಶ ಅಥವಾ ವನ್ಯಧಾಮಗಳಲ್ಲಿ ನಡೆಸದೇ ಇರುವ ಜಾಗೃತಿ ಕಾರ್ಯಕ್ರಮವನ್ನು ಬಂಡಿಪುರದಲ್ಲಿ ನಡೆಸಲಾಗಿದ್ದು, ಇದು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ (ಐಬಿಆರ್) ದಾಖಲೆಗೆ ಪಾತ್ರವಾಗಿದೆ.
ಈ ಬೃಹತ್ ಔಟ್ ರಿಚ್ ಪ್ರೋಗ್ರಾಂ ಐಬಿಆರ್ ಸಂಸ್ಥೆ ಪ್ರಮಾಣ ಪತ್ರವನ್ನು ನೀಡಲಾಗಿದ್ದು, ಮೇ 2 ರಂದು ಬಂಡಿಪುರದ ಈ ಹಿಂದಿನ ನಿರ್ದೇಶಕ ಹಾಗೂ ಹುಲಿ ಯೋಜನೆಯ ಸಿಎಫ್ ಡಾ.ಪಿ. ರಮೇಶ್ ಕುಮಾರ್ ಅವರು ಯುವ ಮಿತ್ರ ಯೋಜನೆಗೆ ಲಭಿಸಿದ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗಳನ್ನು ಸ್ವೀಕರಿಸಿದ್ದಾರೆ.