ಕನ್ನಡಪ್ರಭ ವಾರ್ತೆ ಮದ್ದೂರು
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಲು ಯಾರೂ ಗಂಡಸರಿಲ್ಲವೇ ಎಂದು ಶಾಸಕ ಕದಲೂರು ಉದಯ್ ಪ್ರಶ್ನಿಸಿದರು.
ಮಂಡ್ಯ ಜೆಡಿಎಸ್ನೊಳಗೆ ಅಭ್ಯರ್ಥಿಯಾಗಲು ಗಂಡಸರೇ ಇಲ್ಲವೇ. ಬೇರೆ ಜಿಲ್ಲೆಯವರೇ ಬರಬೇಕಾ. ನಮ್ಮ ಜಿಲ್ಲೆಯವರೇ ನಿಲ್ಲಲಿ. ಜೆಡಿಎಸ್ ಪಕ್ಷದಲ್ಲಿ ಸ್ಪರ್ಧೆ ಮಾಡುವಂತಹ ಸಮರ್ಥ ನಾಯಕರು ಇಲ್ಲವೇ. ನಾಯಕರ ಮಕ್ಕಳು ಮತ್ತು ಅವರ ಕುಟುಂಬದವರೇ ಮಂಡ್ಯಕ್ಕೆ ಬರಬೇಕಾ ಎಂದು ಕಟುವಾಗಿ ನುಡಿದರು.
ಮಂಡ್ಯಕ್ಕೆ ಯಾರೇ ಬಂದರೂ ನಮಗೆ ಚಿಂತೆ ಇಲ್ಲ. ಜನರ ಅಭಿಪ್ರಾಯ ಕಾಂಗ್ರೆಸ್ ಪರವಾಗಿದೆ. ಐದು ವರ್ಷದಿಂದ ನಿಖಿಲ್ ಎಲ್ಲಿ ಹೋಗಿದ್ದರು. ಜನ ಸೇವೆ ಮಾಡೋರು ನಿರಂತರವಾಗಿ ಜನರ ಮಧ್ಯೆ ಇರಬೇಕು.
ಚುನಾವಣೆ ಬಂದಾಗಷ್ಟೇ ಬರುವವರನ್ನು ನಂಬಲು ಮಂಡ್ಯ ಜಿಲ್ಲೆ ಜನರು ಅಷ್ಟೊಂದು ದಡ್ಡರಲ್ಲ. ಕಳೆದ ಬಾರಿಯೇ ಮಂಡ್ಯ ಜನ ನಿಖಿಲ್ಗೆ ಸೂಕ್ತ ಉತ್ತರ ನೀಡಿದ್ದಾರೆ. ಮತ್ತೆ ಅಂತಹುದೇ ಪ್ರಯತ್ನಕ್ಕಿಳಿದರೆ ಪಶ್ಚಾತ್ತಾಪ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.
ಬೇರೆ ಧ್ವಜ ಹಾರಾಟಕ್ಕೆ ಅವಕಾಶ ನೀಡೋಲ್ಲ: ಚಲುವರಾಯಸ್ವಾಮಿ
ಮಂಡ್ಯ: ಗ್ರಾಪಂ ವ್ಯಾಪ್ತಿಯ ಪ್ರದೇಶದಲ್ಲಿ ರಾಷ್ಟ್ರಧ್ವಜ, ನಾಡಧ್ವಜ ಹಾರಾಟಕ್ಕೆ ಮಾತ್ರ ಅನುಮತಿ ಇದೆ. ಹಾಗಾಗಿ ಬೇರೆ ಧ್ವಜ ಹಾರಾಡುವುದಕ್ಕೆ ಅನುಮತಿ ನೀಡುವುದಿಲ್ಲ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ಕೆರಗೋಡು ಗ್ರಾಮದ ಗ್ರಾಪಂ ಜಾಗದಲ್ಲಿ ಹಾರಾಡುತ್ತಿರುವುದು ರಾಷ್ಟ್ರಧ್ವಜ.
ಅದನ್ನು ಇಳಿಸಬೇಕೋ ಅಥವಾ ಹಾರಾಡಿಸಬೇಕೋ ಎಂದು ನಾಳೆ ಜಿಲ್ಲಾಧಿಕಾರಿಗೆ ಕೊಡುವ ಮನವಿ ಪತ್ರವನ್ನು ನೋಡಿ ಹೇಳುತ್ತೇನೆ. ಅವರು ಚರ್ಚೆಗೆ ಬಂದರೆ ನಾನು ಮಾತನಾಡುತ್ತೇನೆ ಎಂದು ಗುರುವಾರ ಸುದ್ದಿಗಾರರ ಪ್ರಶ್ನೆಗೆ ನಗರದಲ್ಲಿ ಪ್ರತಿಕ್ರಿಯಿಸಿದರು.
ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು ಗ್ರಾಮಕ್ಕೆ ತೆರಳಿ ಶಾಂತಿಸಭೆ ನಡೆಸಿದ್ದಾರೆ. ಆ ಸಮಯದಲ್ಲಿ ಅವರು ಧ್ವಜ ಹಾರಿಸುವ ಕುರಿತು ಯಾವುದೇ ಪ್ರಸ್ತಾವನೆ ಇಟ್ಟಿಲ್ಲವೆಂದು ಹೇಳಿದರು.