ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆ ನಿರ್ಧಾರ

KannadaprabhaNewsNetwork |  
Published : Nov 29, 2024, 01:32 AM ISTUpdated : Nov 29, 2024, 04:01 AM IST
BSY

ಸಾರಾಂಶ

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸಲ್ಲಿಸಿದ್ದ ಭ್ರಷ್ಟಾಚಾರ ದೂರಿನ ಬಗ್ಗೆ ಯಡಿಯೂರಪ್ಪ ಅವರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದೆ.

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸಲ್ಲಿಸಿದ್ದ ಭ್ರಷ್ಟಾಚಾರ ದೂರಿನ ಬಗ್ಗೆ ಯಡಿಯೂರಪ್ಪ ಅವರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದೆ.

ಸದರಿ ಪ್ರಕರಣದಲ್ಲಿ ಈಗಾಗಲೇ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನಿರಾಕರಿಸಿರುವ ರಾಜ್ಯಪಾಲರ ಮೇಲೆ ಒತ್ತಡ ತಂತ್ರ ಹೇರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ತನ್ಮೂಲಕ ಬಿಜೆಪಿ ನಾಯಕರ ಭ್ರಷ್ಟಾಚಾರ ಆರೋಪಗಳಿಗೆ ಮತ್ತೆ ಜೀವ ನೀಡುವ ಮೂಲಕ ಪ್ರತಿಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರಗಾರಿಕೆಯನ್ನು ಕಾಂಗ್ರೆಸ್ ಸರ್ಕಾರ ಮುಂದುವರೆಸಿದೆ.

ಕೇಸು ಕೆದಕಿದ ಸರ್ಕಾರ:

ಯಡಿಯೂರಪ್ಪ ಬಿಡಿಎ ಅಪಾರ್ಟ್‌ಮೆಂಟ್‌ ನಿರ್ಮಾಣ ಟೆಂಡರ್‌ ಒಂದರಲ್ಲಿ ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿಯಿಂದ 12 ಕೋಟಿ ರು. ಲಂಚ ಪಡೆದಿದ್ದರು ಎಂದು ಆರೋಪಿಸಿ 2020ರಲ್ಲಿ ಟಿ.ಜೆ. ಅಬ್ರಹಾಂ ದೂರು ಸಲ್ಲಿಸಿದ್ದರು. ಈ ಬಗ್ಗೆ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಬೇಕು ಎಂದು ನ್ಯಾಯಾಲಯ ತಿಳಿಸಿತ್ತು.

ಈ ವೇಳೆ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಟಿ.ಜೆ. ಅಬ್ರಹಾಂ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಆದರೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಈ ಮನವಿ ತಿರಸ್ಕರಿಸಿದ್ದರು. ಇದೀಗ ಈ ಪ್ರಕರಣವನ್ನು ಕೆದಕಿರುವ ಸಚಿವ ಸಂಪುಟವು, ಪ್ರಾಸಿಕ್ಯೂಷನ್‌ ಮನವಿ ತಿರಸ್ಕರಿಸಿರುವ ನಿರ್ಣಯ ಹಿಂಪಡೆಯಬೇಕು. ಜತೆಗೆ ಭ್ರಷ್ಟಾಚಾರ ಪ್ರತಿಬಂಧಿಕತ ಸೆಕ್ಷನ್‌ 17-ಎ ಅಡಿ ತನಿಖೆಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲರಿಗೆ ಶಿಫಾರಸು ಮಾಡಲು ನಿರ್ಧಾರ ಮಾಡಿದೆ.

ತನ್ಮೂಲಕ ಯಡಿಯೂರಪ್ಪ ಮಾತ್ರವಲ್ಲದೆ ಪ್ರಕರಣದಲ್ಲಿ 2ನೇ ಆರೋಪಿ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೂ ಆತಂಕ ಶುರುವಾಗಿದೆ.

ಪ್ರಕರಣದ ಹಿನ್ನೆಲೆ:

ಟಿ.ಜೆ. ಅಬ್ರಹಾಂ 2020ರ ನ.19 ರಂದು ಎಸಿಬಿಗೆ ದೂರು ನೀಡಿ, ಭ್ರಷ್ಟಾಚಾರ ನಿಗ್ರಹ ಕಾಯ್ದೆ, ಅಕ್ರಮ ಹಣ ವರ್ಗಾವಣೆ ಕಾಯಿದೆ 2002ರ ಅಡಿ ಯಡಿಯೂರಪ್ಪ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದರು.

ಆದರೆ, ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಹಾಲಿ ಮುಖ್ಯಮಂತ್ರಿಗಳಾಗಿರುವ ಯಡಿಯೂರಪ್ಪ ವಿರುದ್ಧ ವಿಚಾರಣೆಗೆ ರಾಜ್ಯಪಾಲರ ಅನುಮತಿ ಅಗತ್ಯ ಎಂದು ಹೇಳಿತ್ತು.

ಈ ಹಿನ್ನೆಲೆಯಲ್ಲಿ ಟಿ.ಜೆ. ಅಬ್ರಹಾಂ ಅವರು ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದರು. ಆದರೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ತಿರಸ್ಕರಿಸಿದ್ದರು. ಪ್ರಸ್ತುತ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಉಳಿದ ಆರೋಪಿಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ.

ಏನಿದು ಭ್ರಷ್ಟಾಚಾರ?:

2017ರಲ್ಲಿ ಬಿಡಿಎ, ಬೆಂಗಳೂರಿನ ಬಿದರಹಳ್ಳಿಯ ಕೋನದಾಸಪುರದಲ್ಲಿ 1 ಮತ್ತು 3 ಬಿಎಚ್‌ಕೆ ಫ್ಲ್ಯಾಟ್‌ ನಿರ್ಮಾಣಕ್ಕೆ 567 ಕೋಟಿ ರು. ಅಂದಾಜು ವೆಚ್ಚದಲ್ಲಿ ಟೆಂಡರ್‌ ಆಹ್ವಾನಿಸಿತ್ತು.

ಈ ವೇಳೆ ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿ 666.22 ಕೋಟಿ ರು.ಗೆ (ಅಂದಾಜು ವೆಚ್ಚಕ್ಕಿಂತ 99.22 ಕೋಟಿ ರು. ಹೆಚ್ಚು) ಹಾಗೂ ನಾಗಾರ್ಜುನ ಕನ್‌ಸ್ಟ್ರಕ್ಷನ್‌ ಕಂಪನಿ 691.74 ಕೋಟಿ ರು.ಗೆ (ಅಂದಾಜು ವೆಚ್ಚಕ್ಕಿಂತ 124.74 ಕೋಟಿ ರು. ಹೆಚ್ಚು) ಬಿಡ್‌ ಮಾಡಿದ್ದವು.

ನಂತರ 2019ರ ಜು.6 ರಂದು ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಯಡಿಯೂರಪ್ಪ ಸೂಚನೆ ಮೇರೆಗೆ ಡಾ.ಜಿ.ಸಿ. ಪ್ರಕಾಶ್‌ ಬಿಡಿಎ ಆಯುಕ್ತರಾಗಿ ನೇಮಕಗೊಂಡರು.

‘ಈ ವೇಳೆ ಯಡಿಯೂರಪ್ಪ ಅವರ ಹೆಸರು ಹೇಳಿ ಆಯುಕ್ತರು ರಾಮಲಿಂಗಂ ಬಿಲ್ಡರ್‌ ಬಳಿ 12 ಕೋಟಿ ರು. ಲಂಚ ಪಡೆದಿದ್ದರು. ಕೆ. ರವಿ ಎಂಬಾತ 12 ಕೋಟಿ ರು. ಹಣವನ್ನು ಪ್ರಕಾಶ್‌ ಅವರಿಂದ ಪಡೆದು ಬಿ.ವೈ. ವಿಜಯೇಂದ್ರ ಅವರಿಗೆ ಮುಟ್ಟಿಸಿದ್ದ. ವಿಜಯೇಂದ್ರ ಅವರು ಲಂಚದ ಬಗ್ಗೆ ಮಾತನಾಡಿರುವ ಆಡಿಯೋ ಕೂಡ ಲಭ್ಯವಾಗಿತ್ತು’ ಎಂಬುದು ಟಿ.ಜೆ. ಅಬ್ರಹಾಂ ಆರೋಪ.

ಈ ಬಗ್ಗೆ ಅಬ್ರಹಾಂ ನ್ಯಾಯಾಲಯ ಮೊರೆ ಹೋಗಿದ್ದಾಗ 2021ರ ಜು.24 ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ದೂರನ್ನು ತಿರಸ್ಕರಿಸಿ ಮುಖ್ಯಮಂತ್ರಿಗಳ ವಿರುದ್ಧ ವಿಚಾರಣೆಗೆ ರಾಜ್ಯಪಾಲರ ಅನುಮತಿ ಬೇಕು ಎಂದು ಹೇಳಿತ್ತು.

2021ರ ಜು.8 ರಂದು ಅಬ್ರಹಾಂ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿದ್ದರು. ಈ ವೇಳೆ ಹೈಕೋರ್ಟ್‌ ದೂರಿನ ಅಡಿ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು.

2022ರ ಸೆ.14 ರಂದು ವಿಶೇಷ ನ್ಯಾಯಾಲಯವು ತನ್ನ ಅಧಿಕಾರ ಬಳಸಿ ಯಡಿಯೂರಪ್ಪ ವಿರುದ್ಧದ ಪ್ರಕರಣ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿತ್ತು. ಈ ಬಗ್ಗೆ ಯಡಿಯೂರಪ್ಪ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಹೀಗಾಗಿ ಯಡಿಯೂರಪ್ಪ ವಿರುದ್ಧ ವಿಚಾರಣೆಗೆ ರಾಜ್ಯಪಾಲರ ಅನುಮತಿ ಅಗತ್ಯವಾಗಿದೆ.

ದೂರಿನ ಗಂಭೀರತೆ ಆಧಾರದ ಮೇಲೆ ನಿರ್ಧಾರ: ಎಚ್.ಕೆ.ಪಾಟೀಲ್‌

‘ಟಿ.ಜೆ. ಅಬ್ರಹಾಂ ಒಬ್ಬ ವಂಚಕ ಎಂದು ಸಂಪುಟದಲ್ಲಿ ನಿರ್ಣಯ ಮಾಡಿದ್ದಿರಿ. ಇದೀಗ ಅವರ ದೂರಿನ ಮೇಲೆ ಕ್ರಮಕ್ಕೆ ಶಿಫಾರಸು ಯಾಕೆ?’ ಎಂಬ ಬಗ್ಗೆ ಉತ್ತರಿಸಿದ ಸಚಿವ ಎಚ್.ಕೆ. ಪಾಟೀಲ್‌, ‘ಅಬ್ರಹಾಂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನೀಡಿದ ದೂರಿನ ಬಗ್ಗೆ ಸಂಪುಟ ಬೇರೆ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿರಬಹುದು. ಆದರೆ, ಅದು ವ್ಯಕ್ತಿಗಳ ಕುರಿತ ಅಭಿಪ್ರಾಯವಲ್ಲ. ವ್ಯಕ್ತಿ ನೀಡಿರುವ ದೂರಿನಲ್ಲಿನ ವಿಷಯದ ಬಗೆಗಿನ ಅಭಿಪ್ರಾಯ’ ಎಂದರು.

- ಭ್ರಷ್ಟಾಚಾರ ಕೇಸಲ್ಲಿ ಬಿಎಸ್‌ವೈ ಪ್ರಾಸಿಕ್ಯೂಷನ್‌ಗೆ ಸಂಪುಟ ಅಸ್ತು- ಅನುಮತಿ ನಿರಾಕರಿಸಿದ್ದ ಗೌರ್ನರ್‌ ಮೇಲೆ ಒತ್ತಡ ಹೇರುವ ತಂತ್ರ- ಬಿಜೆಪಿ ನಾಯಕರ ವಿರುದ್ಧದ ಪ್ರಕರಣಗಳಿಗೆ ಮರುಜೀವ ನೀಡಲೆತ್ನ

ಏನಿದು ಪ್ರಕರಣ?- ಬೆಂಗಳೂರಿನ ಕೋನದಾಸಪುರದಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ಬಿಡಿಎ 2017ರಲ್ಲಿ ಟೆಂಡರ್ ಆಹ್ವಾನಿಸಿತ್ತು- ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿ, ನಾಗಾರ್ಜುನ ಕನ್‌ಸ್ಟ್ರಕ್ಷನ್‌ ಕಂಪನಿಗಳು ಟೆಂಡರ್‌ಗಾಗಿ ಬಿಡ್‌ ಮಾಡಿದ್ದವು- 2019ರಲ್ಲಿ ಬಿಎಸ್‌ವೈ ಹೆಸರೇಳಿ ರಾಮಲಿಂಗಂ ಕಂಪನಿಯಿಂದ ಬಿಡಿಎ ಆಯುಕ್ತರು 12 ಕೋಟಿ ಪಡೆದ ಆರೋಪ- ಈ ಸಂಬಂಧ 2020ರಲ್ಲಿ ಎಸಿಬಿಗೆ ಅಬ್ರಹಾಂ ದೂರು. ಯಡಿಯೂರಪ್ಪ ಕುಟುಂಬದ ವಿರುದ್ಧ ಕ್ರಮಕ್ಕೆ ಆಗ್ರಹ- ಯಡಿಯೂರಪ್ಪ ಹಾಲಿ ಸಿಎಂ ಆದ ಕಾರಣ ವಿಚಾರಣೆಗೆ ಅನುಮತಿ ಅಗತ್ಯ ಎಂದು ಹೇಳಿದ್ದ ನ್ಯಾಯಾಲಯ- ಹೀಗಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಅಬ್ರಹಾಂರಿಂದ ರಾಜ್ಯಪಾಲರಿಗೆ ಮನವಿ. ಅದು ತಿರಸ್ಕಾರ- ಸದ್ಯ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ. ಈ ಹಂತದಲ್ಲೇ ಯಡಿಯೂರಪ್ಪ ಪ್ರಾಸಿಕ್ಯೂಷನ್‌ಗೆ ಸರ್ಕಾರ ಅಸ್ತು

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ರಾಜ್ಯಪಾಲರನ್ನೇ ಶಾಸಕರು ಅಡ್ಡಗಟ್ಟಿದ್ದು ಸರಿಯೇ?
ಹಿಂಸಾಪೀಡಿತ ಮಣಿಪುರಕ್ಕೆ 1 ವರ್ಷದ ಬಳಿಕ ಸರ್ಕಾರ