;Resize=(412,232))
ಚೆನ್ನೈ: ತಮಿಳುನಾಡು ಸಿಎಂ ವಿಜಯ್ ನೇತೃತ್ವದ ಸಚಿವ ಸಂಪುಟ ಗುರುವಾರ ವಿಸ್ತರಣೆ ಆಗಲಿದೆ. ಇಬ್ಬರು ಕಾಂಗ್ರೆಸ್ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ 59 ವರ್ಷ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ತಮಿಳುನಾಡಿನಲ್ಲಿ ಸಚಿವ ಸ್ಥಾನ ಸಿಗಲಿದೆ.ಶಾಸಕರಾದ ರಾಜೇಶ್ ಕುಮಾರ್ ಮತ್ತು ಪಿ. ವಿಶ್ವನಾಥನ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಘೋಷಿಸಿದರು.
ಈ ನಡುವೆ, ಎಡರಂಗ, ವಿಸಿಕೆ ಹಾಗೂ ಮುಸ್ಲಿಂ ಲೀಗ್ಗೂ ಸಚಿವ ಸ್ಥಾನಕ್ಕೆ ವಿಜಯ್ ಪಕ್ಷದಿಂದ ಆಹ್ವಾನ ಹೋಗಿದೆ.
ಏತನ್ಮಧ್ಯೆ ಮಿತ್ರಪಕ್ಷಗಳ ಒತ್ತಡಕ್ಕೆ ಮಣಿದು ಅಣ್ಣಾ ಡಿಎಂಕೆ ಬಂಡಾಯ ಬಣದ ಶಾಸಕರಿಗೆ ಸಚಿವ ಸ್ಥಾನ ನೀಡದೇ ಇರಲು ನಿರ್ಧರಿಸಲಾಗಿದೆ.
59 ವರ್ಷದ ಬರ ಅಂತ್ಯ:
ಕಾಂಗ್ರೆಸ್ ಪಕ್ಷ 5 ಶಾಸಕರನ್ನು ಹೊಂದಿದ್ದು, ಇವರ ಹಾಗೂ ಇತರ ಪಕ್ಷಗಳ 8 ಶಾಸಕರ ಬೆಂಬಲದಿಂದ ವಿಜಯ್ ಪಕ್ಷ ಅಧಿಕಾರಕ್ಕೆಬಂದಿತ್ತು. ಕಾಂಗ್ರೆಸ್ ಪಕ್ಷವು ಇತ್ತೀಚಿನ ಸರ್ಕಾರಗಳಿಗೆ ಬಾಹ್ಯ ಬೆಂಬಲ ನೀಡಿತ್ತು. ಸರ್ಕಾರದಲ್ಲಿ ಭಾಗಿ ಆಗಿರಲಲ್ಲ. ಹೀಗಾಗಿ 59 ವರ್ಷದಿಂದ ಆ ಪಕ್ಷಕ್ಕೆ ಅಧಿಕಾರ ಗಗನಕುಸುಮ ಆಗಿತ್ತು.
ತಿರುವನಂತಪುರಂ: ವಿ.ಡಿ. ಸತೀಶನ್ ನೇತೃತ್ವದ ಕೇರಳ ಸರ್ಕಾರದಲ್ಲಿ ಸಚಿವರಿಗೆ ಖಾತೆ ಹಂಚಿಕೆಯಾಗಿದೆ. ಮುಖ್ಯಮಂತ್ರಿ ಸತೀಶನ್ ತಮ್ಮ ಬಳಿಯೇ ಹಣಕಾಸು ಸೇರಿ 35 ಖಾತೆಗಳನ್ನು ಉಳಿಸಿಕೊಂಡಿದ್ದರೆ, ಹಿರಿಯ ಶಾಸಕ ರಮೇಶ್ ಚೆನ್ನಿತ್ತಲ ಅವರಿಗೆ ಗೃಹ ಖಾತೆ ನೀಡಲಾಗಿದೆ.ಸಂಪುಟದ 21 ಮಂದಿಗೆ ಸಚಿವ ಸ್ಥಾನ ಹಂಚಿಕೆ ಮಾಡಲಾಗಿದ್ದು, ಇದರಲ್ಲಿ ಸತೀಶನ್ ಹಣಕಾಸು, ಕಾನೂನು, ಸಾಮಾನ್ಯ ಆಡಳಿತ, ಬಂದರು ಸೇರಿದಂತೆ 35 ಖಾತೆಗಳನ್ನು ತಮ್ಮಲ್ಲಿ ಉಳಿಸಿಕೊಂಡಿದ್ದಾರೆ. ಇನ್ನು ಚೆನ್ನಿತ್ತಲ ಅವರಿಗೆ ಗೃಹ, ಜಾಗೃತ ಇಲಾಖೆ ಹಾಗೂ ಇತರ 3 ಇಲಾಖೆ ಜವಾಬ್ದಾರಿ ನೀಡಲಾಗಿದೆ.
ತಿರುವನಂತಪುರಂ: ಅಶುಭ ಎಂದೇ ಕೆಲವರು ಪರಿಗಣಿಸುವ ನಂ.13 ಸಮಸ್ಯೆ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕೇರಳದ ವಿ.ಡಿ. ಸತೀಶನ್ ಅವರ ಸರ್ಕಾರಕ್ಕೂ ಕಾಡಲಾರಂಭಿಸಿದೆ. ಸಚಿವರಿಗಾಗಿ 13 ಸಂಖ್ಯೆಯ ಕಾರು ಇದೆ. ಆದರೆ ಅಶುಭ ಸಂಖ್ಯೆ ಎಂಬ ಕಾರಣಕ್ಕೆ ಅವರ ಸಂಪುಟದ ಯಾವ ಸಚಿವರೂ ಈ ಕಾರನ್ನು ಆಯ್ಕೆ ಮಾಡಿಕೊಂಡಿಲ್ಲ.ಸತೀಶನ್ ಹಾಗೂ ಯುಡಿಎಫ್ ಸರ್ಕಾರದಲ್ಲಿ ಸಚಿವರಾಗಿರುವ ಎಲ್ಲಾ 20 ಸಚಿವರಿಗೆ ಸರ್ಕಾರಿ ಕಾರುಗಳ ಹಂಚಿಕೆ ನಡೆದಿದೆ. ಆದರೆ ಈ ವೇಳೆ ನಂ.13 ಕಾರಿಗೆ ಯಾರೂ ಬೇಡಿಕೆಯಿಟ್ಟಿಲ್ಲ. ಯುಡಿಎಫ್ 13 ಸಂಖ್ಯೆಯ ಕಾರನ್ನು ಬಳಸಲು ಹಿಂದೇಟು ಹಾಕುತ್ತಿರುವುದು ಇದೇ ಮೊದಲೇನಲ್ಲ. ಹಿಂದೆಯೂ ಮಾಡಿತ್ತು. ಆದರೆ ಎಲ್ಡಿಎಫ್ ಸರ್ಕಾರದಲ್ಲಿ ಸಚಿವರೊಬ್ಬರು ಈ ಕಾರನ್ನು ಪಡೆದಿದ್ದರು.