ಸ್ವ ಕ್ಷೇತ್ರದಲ್ಲೇ ಎಸಿ ಕೋರ್ಟ್ ಕೇಸ್‌ ಬಾಕಿಗೆ ಕೃಷ್ಣ ಬೈರೇಗೌಡ ಗರಂ

KannadaprabhaNewsNetwork |  
Published : May 16, 2026, 03:15 AM IST
ಕೃಷ್ಣ ಬೈರೇಗೌಡ | Kannada Prabha

ಸಾರಾಂಶ

ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಉಳಿದೆಲ್ಲಾ ಉಪ ಉಪವಿಭಾಗಾಧಿಕಾರಿಗಳ (ಎಸಿ) ನ್ಯಾಯಾಲಯಗಳಲ್ಲಿನ ಬಾಕಿ ತಕರಾರು ಪ್ರಕರಣಗಳು ಶೇ.90ಕ್ಕೂ ಹೆಚ್ಚು ಇತ್ಯರ್ಥವಾಗಿವೆ. ಆದರೆ, ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ಸಾಕಷ್ಟು ಪ್ರಕರಣಗಳು ಬಾಕಿ ಇರುವುದರಿಂದ ತಮ್ಮ ಕ್ಷೇತ್ರದಲ್ಲೇ ತಲೆ ತಗ್ಗಿಸುವಂತಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಉಳಿದೆಲ್ಲಾ ಉಪ ಉಪವಿಭಾಗಾಧಿಕಾರಿಗಳ (ಎಸಿ) ನ್ಯಾಯಾಲಯಗಳಲ್ಲಿನ ಬಾಕಿ ತಕರಾರು ಪ್ರಕರಣಗಳು ಶೇ.90ಕ್ಕೂ ಹೆಚ್ಚು ಇತ್ಯರ್ಥವಾಗಿವೆ. ಆದರೆ, ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ಸಾಕಷ್ಟು ಪ್ರಕರಣಗಳು ಬಾಕಿ ಇರುವುದರಿಂದ ತಮ್ಮ ಕ್ಷೇತ್ರದಲ್ಲೇ ತಲೆ ತಗ್ಗಿಸುವಂತಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲ ಉಪ ವಿಭಾಗಾಧಿಕಾರಿಗಳ ಜೊತೆ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ, ಕಂದಾಯ ಇಲಾಖೆ ಸಚಿವರಾದ ನಂತರ ರಾಜ್ಯಾದ್ಯಂತ ಸುಮಾರು 73,624 ಅವಧಿ ಮೀರಿದ ತಕರಾರು ಪ್ರಕರಣಗಳು ಎಸಿ ಕೋರ್ಟ್‌ಗಳಲ್ಲಿ ಬಾಕಿ ಇದ್ದವು. ಇದರಿಂದ ಜನ ಸಾಮಾನ್ಯರು ಅನಗತ್ಯವಾಗಿ ಸರ್ಕಾರಿ ಕಚೇರಿ ಅಲೆಯುತ್ತಿದ್ದರು. ಆದರೆ, ಕಳೆದ 3 ವರ್ಷಗಳಿಂದ 66 ಸಾವಿರಕ್ಕೂ ಹೆಚ್ಚು ಪ್ರಕರಣ ಇತ್ಯರ್ಥಪಡಿಸಿ ಆ ಸಂಖ್ಯೆಯನ್ನು ಕೇವಲ 7,490ಕ್ಕೆ ಇಳಿಸಲಾಗಿದೆ. ಆ ಮೂಲಕ ಶೇ.90ಕ್ಕೂ ಹೆಚ್ಚು ಪ್ರಕರಣಗಳಿಗೆ ಮುಕ್ತಿ ನೀಡಿದಂತಾಗಿದೆ. ಅಧಿಕಾರಿಗಳ ಸಹಕಾರ ಇಲ್ಲದಿದ್ದರೆ ಈ ಕೆಲಸ ಸಾಧ್ಯವಾಗುತ್ತಿರಲಿಲ್ಲ. ಮುಂದಿನ ದಿನಗಳಲ್ಲಿ ಉಳಿದ ಪ್ರಕರಣಗಳನ್ನೂ ಶೀಘ್ರ ಇತ್ಯರ್ಥಪಡಿಸಬೇಕು ಎಂದು ಸೂಚಿಸಿದರು.

ಒಬ್ಬ ಅಧಿಕಾರಿಯಿಂದ ಇತರರಿಗೂ ಕೆಟ್ಟ ಹೆಸರು:

ಈ ಹಿಂದಿನ ಸಭೆಯಲ್ಲಿ ಎಚ್ಚರಿಕೆ ನೀಡಿದ್ದ ತುಮಕೂರು, ದೊಡ್ಡಬಳ್ಳಾಪುರ, ತರೀಕೆರೆ, ಕೋಲಾರ ಸೇರಿ ಹಲವು ಎಸಿ ವಲಯಗಳು ಪ್ರಸ್ತುತ ಸುಧಾರಣೆ ಕಂಡಿವೆ. ಆದರೆ, ಸ್ವತಃ ತಾವು ಪ್ರತಿನಿಧಿಸುವ ಬೆಂ.ಉತ್ತರ ಜಿಲ್ಲೆಯಲ್ಲಿ ಸಾಕಷ್ಟು ಪ್ರಕರಣಗಳು ಬಾಕಿ ಇವೆ. ಉತ್ತರ ಜಿಲ್ಲೆಯ ವಿಶೇಷ ಉಪ ವಿಭಾಗಾಧಿಕಾರಿ ತಮಗೆ ನೀಡಿದ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಆದರೆ, ರೆಗ್ಯುಲರ್ ಉಪ ವಿಭಾಗಾಧಿಕಾರಿ ಕಿರಣ್ ಅವರು ಆದೇಶಕ್ಕಾಗಿ ಕಾಯ್ದಿರಿಸಿದ ಪ್ರಕರಣಗಳನ್ನೂ ವಿಲೇ ಮಾಡುತ್ತಿಲ್ಲ. ಪರಿಣಾಮ ಜನ ಸಾಮಾನ್ಯರು ಪ್ರತಿನಿತ್ಯ ತಮ್ಮ ಗೃಹ ಕಚೇರಿಗೆ ಆಗಮಿಸಿ ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಯಾರೋ ಒಬ್ಬ ಅಧಿಕಾರಿ ಮಾಡುವ ತಪ್ಪಿಗೆ ಜನರ ಎದುರು ತಲೆ ತಗ್ಗಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಇಂಥ ಅಧಿಕಾರಿಗಳಿಂದ ಒಳ್ಳೆಯ ಕೆಲಸ ಮಾಡುವ ಇತರೆ ಅಧಿಕಾರಿಗಳಿಗೂ ಕೆಟ್ಟ ಹೆಸರು ಎಂದು ವಿಷಾದಿಸಿದರು.

ಸಭೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿ (ಕಂದಾಯ ಇಲಾಖೆ) ರಾಜೇಂದ್ರ ಕುಮಾರ್ ಕಟಾರಿಯಾ, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್, ಕಂದಾಯ ಆಯುಕ್ತ (ಪ್ರಬಾರ) ಮುಲ್ಲೈ ಮುಗಿಲನ್ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

19ಕ್ಕೆ 1.14 ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ:

ಮೇ 19 ರಂದು ತುಮಕೂರಿನಲ್ಲಿ ನಡೆಯಲಿರುವ ‘ಮೂರನೇ ವರ್ಷದ ಸಾಧನೆಯ ಸಂಭ್ರಮ’ ಕಾರ್ಯಕ್ರಮದಲ್ಲಿ 1,41,908 ಫಲಾನುಭವಿಗಳಿಗೆ ಏಕಕಾಲದಲ್ಲಿ ಹಕ್ಕುಪತ್ರ ನೀಡಲಾಗುವುದು, ಸಾಧ್ಯವಾದರೆ ಎಲ್ಲ ಉಪ ವಿಭಾಗಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಇದೇ ವೇಳೆ ಸಚಿವರು ಆಹ್ವಾನಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ವಿಶ್ವವಿದ್ಯಾಲಯಗಳು ಉದ್ಯೋಗಾವಕಾಶದ ಎಂಜಿನ್‌ಗಳಾಗಲಿ: ಸಿದ್ದರಾಮಯ್ಯ
‘ಬಿಜೆಪಿಗರು ತಮ್ಮವರಿಗೇಕೆ ಕೇಸರಿ ಶಾಲು ಹಾಕ್ಸಲ್ಲ?’