ಸಿ.ಟಿ.ರವಿ ಅವಾಚ್ಯ ಶಬ್ಧ ಕೇಸ್‌ ಮುಗಿದ ಅಧ್ಯಾಯ - ಆರೋಪದ ಬಗ್ಗೆ ಸಾಕ್ಷ್ಯ ಸಿಕ್ಕಿಲ್ಲ : ಹೊರಟ್ಟಿ

Published : Dec 24, 2024, 04:21 AM IST
Basavaraj Horatti

ಸಾರಾಂಶ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕುರಿತು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಕೆ ಪ್ರಕರಣ ಮುಗಿದ ಅಧ್ಯಾಯ. ಈ ಪ್ರಕರಣವನ್ನು ನೈತಿಕತೆ ಸಮಿತಿಗೆ ನೀಡುವ ಅಗತ್ಯ ಇಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಪಾದಿಸಿದ್ದಾರೆ.

ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕುರಿತು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಕೆ ಪ್ರಕರಣ ಮುಗಿದ ಅಧ್ಯಾಯ. ಈ ಪ್ರಕರಣವನ್ನು ನೈತಿಕತೆ ಸಮಿತಿಗೆ ನೀಡುವ ಅಗತ್ಯ ಇಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಪಾದಿಸಿದ್ದಾರೆ.

ಅಲ್ಲದೆ, ಸದನದೊಳಗೆ ನಡೆದ ಘಟನೆಗಳಿಗೆ ಸಂಬಂಧಿಸಿ ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ. ಹೀಗಿದ್ದರೂ ಮಹಜರು ಮಾಡುವುದಾಗಿ ಪೊಲೀಸರು ಕೇಳಿದ್ದರು. ಆದರೆ, ನಾನು ಅನುಮತಿ ನೀಡಿಲ್ಲ. ಒಂದು ವೇಳೆ ಸದನದೊಳಗಿನ ಪ್ರಕ್ರಿಯೆಗೆ ಪೊಲೀಸರು ಹಸ್ತಕ್ಷೇಪ ಮಾಡಲು ಮುಂದಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದರು.

ಸೋಮವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸದನದೊಳಗೆ ನಡೆದ ಘಟನೆ ಬಗ್ಗೆ ಹಸ್ತಕ್ಷೇಪ ಮಾಡಲು ಪೊಲೀಸರಿಗೆ ಅಧಿಕಾರ ಮತ್ತು ಹಕ್ಕು ಎರಡೂ ಇಲ್ಲ. ಈ ಘಟನೆ ಬಗ್ಗೆ ಸದನದಲ್ಲಿ ನಾನು ರೂಲಿಂಗ್ ನೀಡಿ, ಕಲಾಪವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದ್ದೇನೆ. ಹೀಗಾಗಿ ಇದು ಮುಗಿದ ಅಧ್ಯಾಯ ಎಂದರು.

ವಿಧಾನಸಭೆಯಲ್ಲಿ ನಡೆದ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ. ಹಕ್ಕುಚ್ಯುತಿ ಬಗ್ಗೆ ದೂರು ಬಂದರೆ ಅದರ ಬಗ್ಗೆ ಯಾವ ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತೇವೆ. ಮಹಿಳಾ ಆಯೋಗದಿಂದ ಮಾಹಿತಿ ಕೇಳಿದರೆ ಉತ್ತರ ನೀಡಲಾಗುವುದು. ಆದರೆ, ಅವರು ನನ್ನ ಪ್ರಶ್ನೆ ಮಾಡಲು ಬರುವುದಿಲ್ಲ ಎಂದರು.

ಸಿ.ಟಿ.ರವಿ ಬಂಧನ-ಮಾಹಿತಿ ನೀಡಿದ್ದರು:

ಸಿ.ಟಿ.ರ ವಿ ಅವರನ್ನು ಬಂಧಿಸುವ ಕುರಿತು ಪೊಲೀಸರು ರಾತ್ರಿ 9 ಗಂಟೆಗೆ ಮಾಹಿತಿ ಕೊಟ್ಟಿದ್ದಾರೆ. ಬಂಧನ ಮಾಡುವಾಗ ನನಗೆ ಮಾಹಿತಿ ಬಂದಿದೆ. ವಿಧಾನಪರಿಷತ್ ಸದಸ್ಯರ ಮೇಲೆ ಹಲ್ಲೆಗೆ ಮುಂದಾದವರನ್ನು ಬಂಧಿಸಲು ಸೂಚಿಸಲಾಗಿದೆ. ಮೊಗಸಾಲೆಯಲ್ಲಿ ದಾಳಿ ಮಾಡುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲು ನಿರ್ದೇಶಿಸಲಾಗಿದೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು, ಸಿ.ಟಿ.ರವಿಯನ್ನು ನಕಲಿ ಎನ್‌ಕೌಂಟರ್‌ ಮಾಡುವ ದುರುದ್ದೇಶದಿಂದ ಇಡೀ ರಾತ್ರಿ ಸುತ್ತಿಸಿದರು ಎಂಬ ಆರೋಪದ ವಿಚಾರವಾಗಿ ನನಗೆ ಗೊತ್ತಿಲ್ಲ, ನನ್ನ ಮುಂದೆ ಯಾರೂ ಹೇಳಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಇನ್ನು, ಘಟನೆ ನಡೆದ ರಾತ್ರಿ 1 ಗಂಟೆಯವರೆಗೂ ಸಿ.ಟಿ. ರವಿ ಜೊತೆಗೆ ಮಾತುಕತೆ ಮಾಡಿದ್ದೇನೆ. ಮೂರು ಬಾರಿ ಫೋನ್‌ನಲ್ಲಿ ಸಂಪರ್ಕ ಮಾಡಿದ್ದೇನೆ. ಅಲ್ಲದೇ, ಆಯುಕ್ತರು ಮತ್ತು ಎಸ್‌ಪಿ ಜೊತೆಗೆ ಮಾತುಕತೆ ಮಾಡಿದ್ದೇನೆ. ಸಿ.ಟಿ.ರವಿ ಅವರಿಗೆ ಏನೇ ಆದರೂ ನೀವೇ ಕಾರಣ ಎಂದು ತಿಳಿಸಿದ್ದೆ. ಯಾವ ಪಕ್ಷದವರೇ ಆದರೂ ಸರಿ, ಅವರ ಜವಾಬ್ದಾರಿ ನನ್ನದು. ಹೀಗಾಗಿ, ಪೊಲೀಸರಿಗೆ ಸೂಚನೆ ನೀಡಿದ್ದೆ ಎಂದು ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು
ಮತಚೋರಿ ಬಗ್ಗೆ ದಿಲ್ಲೀಲಿ ಕೈ ನಾಯಕರ ರಣಕಹಳೆ