ಬೆಂಗಳೂರು : ತಮಿಳುನಾಡಿನಲ್ಲಿ ಪ್ರಸ್ತುತ ಮಹಿಳೆಯರಿಗೆ ಪ್ರಸ್ತುತ ಮಾಸಿಕ 1 ಸಾವಿರ ರು. ಸಹಾಯಧನ ನೀಡಲಾಗುತ್ತಿದೆ. ಈ ಚುನಾವಣೆ ನಂತರ ಕರ್ನಾಟಕ ಮಾದರಿ 2 ಸಾವಿರ ರು. ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ತಮಿಳುನಾಡಿನ ಥಳಿ ಮತ್ತು ಉತ್ತಂಗರೈ ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ಚುನಾವಣಾ ಪ್ರಚಾರ ಕೈಗೊಂಡ ಡಿ.ಕೆ. ಶಿವಕುಮಾರ್ ತಮಿಳುನಾಡಿನ ಅಭಿವೃದ್ಧಿಗೆ ಕಾಂಗ್ರೆಸ್ ರೂಪಿಸಿರುವ ಯೋಜನೆಗಳ ಕುರಿತು ಮತದಾರರನ್ನುದ್ದೇಶಿಸಿ ಮಾತನಾಡಿದರು. ತಮ್ಮ ಪ್ರಚಾರ ಭಾಷಣವನ್ನು ಕನ್ನಡದಲ್ಲಿಯೇ ಮಾಡಿದರು.
ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟದ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, 2 ಸಾವಿರ ರು. ನೀಡುವ ಭರವಸೆ ನೀಡಿದೆ. ಅದೇ ಪ್ರಧಾನಿ ನರೇಂದ್ರ ಮೋದಿ ಅವರು ಗ್ಯಾಸ್ ಬದಲು ಸೌದೆ ಒಲೆಯನ್ನು ವಾಪಸು ತಂದಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದರು.
ಕರ್ನಾಟಕ-ತಮಿನಾಡಿನವರು ಪರಸ್ಪರ ಅಣ್ಣತಮ್ಮಂದಿರಿದ್ದಂತೆ. ಡಿಎಂಕೆ ನೇತೃತ್ವದ ಸರ್ಕಾರ ಪೆರಿಯಾರ್ ಅವರ ಮಾರ್ಗದರ್ಶನದಲ್ಲಿ ಆಡಳಿತ ನಡೆಸುತ್ತಿದೆ. ಪೆರಿಯಾರ್ ಅವರ ಮಾತೃಭಾಷೆ ಕನ್ನಡವಾಗಿತ್ತು. ಅವರು ತಮಿಳು ಭಾಷೆಗಾಗಿ ಹೋರಾಟ ಮಾಡಿದರು. ಅದೇ ಕನ್ನಡದ ಪ್ರಸಿದ್ಧ ಸಾಹಿತಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಮಾತೃಭಾಷೆ ತಮಿಳಾಗಿತ್ತು. ಅದರಂತೆ ಕನ್ನಡಿಗರು ಮತ್ತು ತಮಿಳಿಗರು ಅಣ್ಣ-ತಮ್ಮಂದಿರ ಹಾಗೆ. ಈಗ ನಾವೆಲ್ಲರೂ ದಕ್ಷಿಣ ಭಾರತಕ್ಕಾಗಿ ಒಟ್ಟಾಗಿ ಹೋರಾಟ ಮಾಡಬೇಕಿದೆ ಎಂದರು.
ತಮಿಳುನಾಡಿನ ಥಳಿ ಮತ್ತು ಉತ್ತಂಗರೈ ವಿಧಾನಸಭಾ ಕ್ಷೇತ್ರಗಳಲ್ಲಿ ಡಿ.ಕೆ. ಶಿವಕುಮಾರ್ ಚುನಾವಣಾ ಪ್ರಚಾರ ಕೈಗೊಂಡಿದ್ದರು.