ಕೋಲಾರ : ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹಂಚಿಕೆ ಇಬ್ಬರ ಜಗಳಲ್ಲಿ ಮೂರನೆಯವರಿಗೆ ಲಾಭ ಎನ್ನುವಂತಾಗಿದೆ. ಬಣ ರಾಜಕೀಯ ಬಿಸಿ ಶಮನಗೊಳಿಸಲು ಪಕ್ಷದ ಹೈಕಮಾಂಡ್ ಬೆಂಗಳೂರಿನ ಕೆ.ವಿ.ಗೌತಮ್ ಅವರಿಗೆ ಟಿಕೆಟ್ ನೀಡಿದೆ. ಇವರು ಬೆಂಗಳೂರಿನ ಮಾಜಿ ಮೇಯರ್ ವಿಜಯಕುಮಾರ್ ಅವರ ಪುತ್ರ.
ಕೋಲಾರ ಕ್ಷೇತ್ರದಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಗಳು ತಾವು ಬೆಂಬಲಿಸುವ ಅಭ್ಯರ್ಥಿಯ ಆಯ್ಕೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ ಹಿನ್ನೆಲೆಯಲ್ಲಿ ಎರಡು ಬಣದವರನ್ನು ಸಮಾಧಾನಪಡಿಸುವಲ್ಲಿ ಪಕ್ಷದ ವರಿಷ್ಠರು ಸುಸ್ತಾಗಿದ್ದರು. ಈ ಸಮಸ್ಯೆಯನ್ನು ಪರಿಹರಿಸಲು ಅಂತಿಮವಾಗಿ ಮೂರನೇ ವ್ಯಕ್ತಿಗೆ ಟಿಕೆಟ್ ಘೋಷಿಸುವ ಮೂಲಕ ಅಚ್ಚರಿಯುಂಟು ಮಾಡಿದ್ದಾರೆ. ಕೋಲಾರ ಲೋಕಸಭೆಗೆ ಕಾಂಗ್ರೆಸ್ ಕೆ.ಹೆಚ್.ಮುನಿಯಪ್ಪ, ಅವರ ಅಳಿಯ ಪೆದ್ದನ್ನ, ಸಿ.ಎಂ.ಮುನಿಯಪ್ಪ ಅಕಾಂಕ್ಷಿಗಳ ನಡುವೆ ನಡೆಯುತ್ತಿದ್ದ ಹಗ್ಗಜಗ್ಗಾಟದಲ್ಲಿ ಬೆಂಗಳೂರು ಮಾಜಿ ಮೇಯರ್ ವಿಜಯಕುಮಾರ್ ಪುತ್ರ ಕೆ.ವಿ.ಗೌತಮ್ ಅವರಿಗೆ ಅನಾಯಾಸವಾಗಿ ಟಿಕೆಟ್ ದೊರೆತಿದೆ.
ಇದಕ್ಕೂ ಮುನ್ನ ಕೋಲಾರ ಮೀಸಲು ಕ್ಷೇತ್ರದಲ್ಲಿ ಎಡಗೈ ಸಮುದಾಯದವರಿಗೆ ಹಾಗೂ ಬೋವಿ ಸಮುದಾಯದವರಿಗೆ ನೀಡಲಾಗಿತ್ತು. ಸ್ವಾತಂತ್ರ್ಯ ಬಂದಾಗಿನಿಂದ ಬಲಗೈ ಸಮುದಾಯದವರಿಗೆ ಕಾಂಗ್ರೇಸ್ ಪಕ್ಷದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ ಈ ಭಾರಿ ಬಲಗೈ ಸಮುದಾಯದವರಿಗೆ ಟಿಕೆಟ್ ಹಂಚಿಕೆ ಮಾಡುವ ಮೂಲಕ ಸಾಮಾಜಿಕ ನ್ಯಾಯ ನೀಡಬೇಕೆಂದು ಘಟ ಬಂಧನ್ ಬಣವು ಪಟ್ಟು ಹಿಡಿದು ಕುಳಿತಿತ್ತು, ಇದಕ್ಕಾಗಿ ದೆಹಲಿ ವಿಮಾನ ಏರಿ ಎ.ಐ.ಸಿ.ಸಿ.ಯಲ್ಲಿ ಜಂಡಾ ಹಾಕಿ ಕುಳಿತು ನಂತರ ಬೆಂಗಳೂರಿನ ಕೆ.ಪಿ.ಸಿ.ಸಿ. ಕಚೇರಿಯಲ್ಲಿ ಠೀಕಾಣಿ ಹೊಡಿದ್ದ ಎರಡು ಬಣಗಳು ಕೆಪಿಸಿಸಿ ಮತ್ತು ಎಐಸಿಸಿ ಮೇಲೆ ಒತ್ತಡ ಹೇರಿತ್ತು.
ಒಂದು ಹಂತದಲ್ಲಿ ದೆಹಲಿಯಿಂದ ಕೆ.ಹೆಚ್.ಮುನಿಯಪ್ಪ ಅವರ ಅಳಿಯ ಪೆದ್ದನ್ನ ಅವರಿಗೆ ಟಿಕೆಟ್ ನೀಡಲಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಮುಖ್ಯ ಮಂತ್ರಿಗಳ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್, ಎಂ.ಎಲ್.ಅನಿಲ್ ಕುಮಾರ್, ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕರಾದ ಕೂತ್ತೂರು ಮಂಜುನಾಥ್ ಹಾಗೂ ಮಾಲೂರು ಶಾಸಕ ಕೆ.ವೈ.ನಂಜೇಗೌಡರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವುದಾಗಿ ಘೋಷಿಸುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದರು. ಇದರಿಂದಾಗಿ ಟಿಕೆಟ್ ಹಂಚಿಕೆ ಕಗ್ಗಂಟಾಗಿ ಮುಂದುವರಿದಿತ್ತು. ಇದನ್ನು ಗಂಬೀರವಾಗಿ ಪರಿಗಣಿಸಿದ ಪಕ್ಷದ ವರಿಷ್ಟರು ಎರಡು ಬಣದ ಶಿಫಾರಸ್ಸಿನ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಮಾಡದೆ ಹೊಸದಾದ ಅಭ್ಯರ್ಥಿಗೆ ಟಿಕೆಟ್ ಹಂಚಿಕೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿಯೇ ಅಚ್ಚರಿಯುಂಟು ಮಾಡಿದರು, ಆದರೆ ಇವರಿಗೆ ಎರಡು ಬಣದವರು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವರೂ ಅಥವಾ ನಿರ್ಲಕ್ಷಿಸುವರೂ ಎಂಬುದನ್ನು ಕಾದು ನೋಡಬೇಕು.
ಗೌತಮ್ಗೆ ಕೋಲಾರ ನಂಟು
ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆದಿರುವ ಅಭ್ಯರ್ಥಿ ಕೆ.ವಿ,ಗೌತಮ್ ಬೆಂಗಳೂರಿನ ಮಾಜಿ ಮೇಯರ್ ವಿಜಯ ಕುಮಾರ್ ಅವರ ಪುತ್ರ. ವಿಜಯಕುಮಾರ್ ಕುಟುಂಬಕ್ಕೂ ಕೋಲಾರಕ್ಕೂ ನಂಟಿದೆ. ಕೋಲಾರ ನಗರದ ಬಂಗಾರಪೇಟೆ ರಸ್ತೆಯ ಮೋಚಿ ಪಾಳ್ಯದ ನಿವೃತ್ತ ಹೈಸ್ಕೂಲ್ ಶಿಕ್ಷಕರಾಗಿದ್ದ ದಿ. ಗಂಗರಾಮ್ ಅವರ ಪುತ್ರ ದಿ. ಜಿ.ನಾರಾಯಣರಾಜು ಅವರು ವಿಜಯಕುಮಾರ್ ಅವರ ಪುತ್ರಿ (ಗೌತಮ್ ಸಹೋದರಿ)ಯನ್ನು ವಿವಾಹವಾಗಿದ್ದರು. ನಾರಾಯಣರಾಜು ನಗರದ ಎಪಿಎಂಸಿಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದರು ಕಳೆದ ಮೂರು ವರ್ಷಗಳ ಹಿಂದೆ ನಿಧನರಾಗಿದ್ದಾರೆ.