ರಾಜ್ಯ ರಾಜಕೀಯ ವಿಚಾರ : ಹೊಸ ಬಾಂಬ್ ಸಿಡಿಸಿದ ಎಚ್.ಡಿ.ಕುಮಾರಸ್ವಾಮಿ

Published : Mar 03, 2026, 06:44 AM IST
hd kumaraswamy

ಸಾರಾಂಶ

ರಾಜ್ಯದಲ್ಲಿ ಫೋನ್ ಕದ್ದಾಲಿಕೆ ಮೊದಲಿನಿಂದಲೂ ಇತ್ತು. ಆದರೆ, ಈಗ ಸ್ವಪಕ್ಷದ ಶಾಸಕರ ಫೋನ್‌ಗಳನ್ನು ಸಚಿವರು ಟ್ಯಾಪಿಂಗ್‌ ಮಾಡುತ್ತಿದ್ದು, ಇಂಥದ್ದು ಇದೇ ಮೊದಲು. ಮುಖ್ಯಮಂತ್ರಿ ಆಗಬೇಕು ಅಂದುಕೊಂಡವರು ಈ ಗುಪ್ತಚಾರಿಕೆ ಕೃತ್ಯ ಮಾಡುತ್ತಿರುವುದು ದುರಂತ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಮೈಸೂರು : ರಾಜ್ಯದಲ್ಲಿ ಫೋನ್ ಕದ್ದಾಲಿಕೆ ಮೊದಲಿನಿಂದಲೂ ಇತ್ತು. ಆದರೆ, ಈಗ ಸ್ವಪಕ್ಷದ ಶಾಸಕರ ಫೋನ್‌ಗಳನ್ನು ಸಚಿವರು ಟ್ಯಾಪಿಂಗ್‌ ಮಾಡುತ್ತಿದ್ದು, ಇಂಥದ್ದು ಇದೇ ಮೊದಲು. ಮುಖ್ಯಮಂತ್ರಿ ಆಗಬೇಕು ಅಂದುಕೊಂಡವರು ಈ ಗುಪ್ತಚಾರಿಕೆ ಕೃತ್ಯ ಮಾಡುತ್ತಿರುವುದು ದುರಂತ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಸ್ತಾಂತರ ಗದ್ದಲದ ಕುರಿತು ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಸತ್ಯ ಹೇಳುತ್ತೇನೆ ಕೇಳಿ, ಫೋನ್ ಟ್ಯಾಪಿಂಗ್ ಎನ್ನುವುದು ಈ ಹಿಂದಿನಿಂದ ಎಲ್ಲಾ ಸರ್ಕಾರದಲ್ಲೂ ಇತ್ತು, ಈಗಲೂ ಇದೆ. ಕೆಲವರು ಫೋನ್ ಟ್ಯಾಪಿಂಗ್ ಮಾಡಿಯೂ ಸಹ ಪತಿವ್ರತೆ ರೀತಿ ವರ್ತಿಸುತ್ತಾರೆ. ಈಗಿರುವ ರಾಜ್ಯ ಸರ್ಕಾರದಲ್ಲಿ ಫೋನ್ ಕದ್ದಾಲಿಕೆ ಎಷ್ಟು ಹೆಚ್ಚಾಗಿದೆ ಎನ್ನುವುದನ್ನು ಅವರನ್ನೇ ಕೇಳಬೇಕು ಎಂದು ಟೀಕಿಸಿದರು.

ಆಡಳಿತ ಪಕ್ಷದ ಶಾಸಕರ ಮೇಲೆ ಅದೇ ಪಕ್ಷದ ಸಚಿವರು ಗುಪ್ತಚಾರಿಕೆ ಮಾಡುತ್ತಿರುವುದು ಇದೇ ಮೊದಲು. ಸಿಎಂ ಆಗಬೇಕು ಎಂದುಕೊಂಡವರು ಅವರ ಸರ್ಕಾರದ ಮೇಲೆ ಗುಪ್ತಚಾರಿಕೆ ಆರಂಭಿಸಿರುವುದು ದುರಂತ ಎಂದಿದ್ದಾರೆ.

ಡಿಕೆ ಬೆಂಬಲಿಗರ ಮೇಲೆ ನಿಗಾ ಇಡಲು ಕದ್ದಾಲಿಕೆ: ಅಶೋಕ್‌

ಬೆಂಗಳೂರು : ಸಿದ್ದರಾಮಯ್ಯ ಸರ್ಕಾರವು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕಡೆಯ ಶಾಸಕರ ಫೋನ್‌ಗಳನ್ನು ಟ್ಯಾಪ್‌ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಆಶೋಕ್‌ ಗಂಭೀರ ಆರೋಪ ಮಾಡಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ.ಶಿವಕುಮಾರ್‌ ಅವರ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಸಿದ್ದರಾಮಯ್ಯ ಅವರು ಎಸ್‌ಪಿ ನೇತೃತ್ವದಲ್ಲಿ ಅನಧಿಕೃತ ತಂಡ ರಚಿಸಿದ್ದಾರೆ. ಡಿ.ಕೆ.ಶಿವಕುಮಾರ್‌ ಕಡೆಯ ಶಾಸಕರ ಚಲನವಲನದ ಮೇಲೆ ನಿಗಾ ವಹಿಸಲು ಫೋನ್‌ ಟ್ಯಾಪಿಂಗ್‌ ಮಾಡಿಸುತ್ತಿದ್ದಾರೆ ಎಂದು ಹೇಳಿದರು.

ಯಾರ ವಿರೋಧಿಯೂ ಅಲ್ಲ:

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಭಾರತ ಹಾಗೂ ಇಸ್ರೇಲ್‌ ನಡುವಿನ ಸಂಬಂಧ ಉತ್ತಮವಾಗಿದೆ. ಭಾರತ ಯಾವುದೇ ದೇಶಗಳ ವಿರೋಧಿ ಅಲ್ಲ. ಯುದ್ಧ ಆಗಬಾರದು ಎಂಬುದೇ ನನ್ನ ಅಭಿಪ್ರಾಯ. ಕೇಂದ್ರ ಸರ್ಕಾರ ಎಂದೂ ಯುದ್ಧಕ್ಕೆ ಬೆಂಬಲ ಕೊಟ್ಟಿಲ್ಲ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಕೇಂದ್ರದ ಸಚಿವರನ್ನು ಭೇಟಿ ಮಾಡಿ, ಕನ್ನಡಿಗರ ರಕ್ಷಣೆಗಾಗಿ ಕೆಲಸ ಮಾಡಬೇಕು. ವಿವಿಧ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಮರಳಿ ಕರೆತರಲು ಪ್ರಧಾನಿ ಮೋದಿ ಸರ್ಕಾರ ಕಾರ್ಯೋನ್ಮುಖವಾಗಿದೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇರಾನ್‌ ಅಧ್ಯಕ್ಷನಾಗಿದ್ದ ಖಮೇನಿ ಸರ್ವಾಧಿಕಾರಿಯಾಗಿದ್ದು, ಆತನ ವಿರುದ್ಧ ಆಂತರಿಕ ದಂಗೆಯಾಗಿತ್ತು. ಅಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿತ್ತು. ಸಾವಿರಾರು ಜನರನ್ನು ಗುಂಡಿಟ್ಟು ಸಾಯಿಸಲಾಗಿತ್ತು. ಆದರೆ ಬೆಂಗಳೂರು ಸೇರಿ ಭಾರತದ ಅನೇಕ ಕಡೆ ಖಮೇನಿ ಪರವಾಗಿ ಮುಸ್ಲಿಮರು ಪ್ರತಿಭಟನೆ ಮಾಡಿದ್ದಾರೆ. ಕಾನೂನು ಕೈಗೆ ತೆಗೆದುಕೊಂಡು ಪ್ರತಿಭಟನೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಇದೇ ವೇಳೆ ಅಶೋಕ್‌ ಆಗ್ರಹಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಶ್ರೀಮಂತರು ಗ್ಯಾರಂಟಿ ಸೌಲಭ್ಯ ಕೈಬಿಡಿ: ಎಂಬಿಪಾ - ಮಾತು ತಪ್ಪಿದ ಸರ್ಕಾರ: ಅಶೋಕ್‌ ಕಿಡಿ
ಬೆಂಗಳೂರು ನಗರದ ಬಿಜೆಪಿಯ ಮೂರು ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ನೇಮಕ