ಯಾರಿಂದಲೂ ಮಹಾತ್ಮ ಗಾಂಧೀಜಿ ಮೌಲ್ಯ ಕೊಲ್ಲಲು ಸಾಧ್ಯವಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork |  
Published : Jan 31, 2025, 01:30 AM ISTUpdated : Jan 31, 2025, 04:30 AM IST
KPCC 5 | Kannada Prabha

ಸಾರಾಂಶ

ಮಹಾತ್ಮ ಗಾಂಧೀಜಿ ಅವರ ಮೌಲ್ಯಗಳನ್ನು ಮತಾಂಧ ನಾಥೂರಾಮ್‌ ಗೋಡ್ಸೆಯಾಗಲಿ ಅಥವಾ ಇನ್ಯಾರಿಂದಲೂ ಕೊಲ್ಲಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

  ಬೆಂಗಳೂರು  : ಮಹಾತ್ಮ ಗಾಂಧೀಜಿ ಅವರ ಮೌಲ್ಯಗಳನ್ನು ಮತಾಂಧ ನಾಥೂರಾಮ್‌ ಗೋಡ್ಸೆಯಾಗಲಿ ಅಥವಾ ಇನ್ಯಾರಿಂದಲೂ ಕೊಲ್ಲಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಗುರುವಾರ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿ, ಗಾಂಧೀಜಿ ತತ್ವಾದರ್ಶಗಳು ಇಂದಿಗೂ ಪ್ರಸ್ತುತ. ತನ್ನ ಜೀವನವೇ ಒಂದು ಸಂದೇಶ ಎಂದು ನುಡಿದಿದ್ದ ಗಾಂಧೀಜಿ ಅವರ ಹೋರಾಟದ ಬದುಕು ಪ್ರೇರಣಾದಾಯಕ. 1948 ಜ.30ರಂದು ಗಾಂಧೀಜಿ ಅವರನ್ನು ಗೋಡ್ಸೆ ಹತ್ಯೆ ಮಾಡಿದ ದಿನ. ಗಾಂಧೀಜಿ ಇಹಲೋಕ ತ್ಯಜಿಸಿದ್ದರೂ ಅವರ ಸತ್ಯ, ಅಹಿಂಸೆ ಹೋರಾಟದ ಮೌಲ್ಯಗಳನ್ನು ಕೊನೆಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಭಾರತ ಹಳ್ಳಿಗಳ ದೇಶ, ಹಳ್ಳಿಗಳ ಅಭಿವೃದ್ಧಿಗಳ ಮೂಲಕ ದೇಶ ಅಭಿವೃದ್ಧಿ ಸಾಧ್ಯವೆಂದು ಪ್ರತಿಪಾದಿಸಿದ ಗಾಂಧೀಜಿ ಅವರು ಗ್ರಾಮ ಸ್ವರಾಜ್ಯದ ಪರಿಕಲ್ಪನೆಗೆ ಜೀವ ತುಂಬಿದ್ದರು. ಗ್ರಾಮಗಳ ಸ್ವಾವಲಂಬನೆಯಿಂದ, ದೇಶ ಸ್ವಾವಲಂಬನೆಯಾಗುತ್ತದೆ. ಗುಡಿಕೈಗಾರಿಕೆಗಳು ಗ್ರಾಮಗಳ ಆರ್ಥಿಕತೆಯ ತಳಹದಿಯಾಗಿದ್ದು, ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ಈ ನಿಟ್ಟಿನಲ್ಲಿ ಗಾಂಧಿ ಭಾರತ ವನ್ನು ನಿರ್ಮಿಸಲು ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾತನಾಡಿ, ಬಿಜೆಪಿಯವರು ಗಾಂಧಿ ಅವರ ಹೆಜ್ಜೆ ಗುರುತುಗಳನ್ನು ಅಳಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಅದನ್ನು ಉಳಿಸುವ ಕೆಲಸ ಮಾಡಬೇಕು. ಗಾಂಧಿ ಅವರ ತತ್ವಗಳನ್ನು ಒಪ್ಪದ ಬಿಜೆಪಿಯವರು ಅವರ ಪ್ರತಿಮೆ ಕೆಳಗೆ ಕುಳಿತು ಪ್ರತಿಭಟನೆ ಮಾಡುತ್ತಾರೆ. ಸ್ವದೇಶಿ ಆಲೋಚನೆ ಹೇಳಿಕೊಟ್ಟವರು ಗಾಂಧೀಜಿ. ಪ್ರಧಾನಿ ಅವರು ಇದನ್ನೇ ಮೇಕ್ ಇನ್ ಇಂಡಿಯಾ ಎಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ವರ್ಷಪೂರ್ತಿ ಗಾಂಧಿ ಕಾರ್ಯಕ್ರಮ: ಗಾಂಧಿ ಅವರ ಸಂದೇಶಗಳನ್ನು ಪ್ರಚಾರ ಮಾಡಲು ರಾಜ್ಯದಾದ್ಯಂತ ವರ್ಷ ಪೂರ್ತಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮವನ್ನು ಮಾಡಬೇಕು ಎನ್ನುವ ಆಲೋಚನೆ ಸರ್ಕಾರದ ಮುಂದಿದ್ದು, ಗಾಂಧಿ ಭಾರತ ಕಾರ್ಯಕ್ರಮ ಆಚರಣಾ ಸಮಿತಿ ನೀಡಿರುವ ವರದಿ ಅನುಷ್ಠಾನದ ಬಗ್ಗೆ ಬಜೆಟ್ ವೇಳೆ ಸಿಎಂ ತಿಳಿಸಬಹುದು. ಇದರ ಬಗ್ಗೆ ಎಐಸಿಸಿ ಅಧ್ಯಕ್ಷರ ಬಳಿಯೂ ಮನವಿ ಮಾಡಿದ್ದೇನೆ ಎಂದು ಡಿಸಿಎಂ ಹೇಳಿದರು. 

ಕುಂಬಮೇಳದಲ್ಲಿರುವ ಕನ್ನಡಿಗರ ರಕ್ಷಣೆಗೆ ಕ್ರಮ: ಪ್ರಯಾಗ್ ರಾಜ್‌ ಕುಂಭಮೇಳದ ಕಾಲ್ತುಳಿತದ ದುರಂತದಲ್ಲಿ ಬೆಳಗಾವಿಯ ನಾಲ್ವರು ಮೃತಪಟ್ಟಿರುವ ಮಾಹಿತಿ ದೃಢಪಟ್ಟಿದೆ. ಘಟನೆಯಲ್ಲಿ ಗಾಯಗೊಂಡ ಕನ್ನಡಿಗರನ್ನು ಕರೆತರಲು ಏರ್ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದ್ದು, ಬೆಳಗಾವಿಯ ಹಿರಿಯ ಅಧಿಕಾರಿಗಳು ಅವರನ್ನು ಕರೆತರಲಿದ್ದಾರೆ. ಜಿಲ್ಲಾ ಸಚಿವರು ಈ ಪರಿಹಾರ ಕ್ರಮಗಳ ಬಗ್ಗೆ ಅಧಿಕಾರಗಳ ಜೊತೆ ಚರ್ಚಿಸಲಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಗೃಹಲಕ್ಷ್ಮಿ ಸ್ಕೀಂ ₹5000 ಕೋಟಿ ಹಗರಣ: ಬಿಜೆಪಿ
ಬೆಳಗಾವಿ ಸದನದಲ್ಲೂ ಸಿಎಂ ಕುರ್ಚಿಯ ಕದನ!