ನಿಗಮ ಹಂಚಿಕೆಗೆ ರಾಜಣ್ಣ ಕಿಡಿ: ನಾವೇನು ಗುಲಾಮರಾ?

KannadaprabhaNewsNetwork |  
Published : Jan 26, 2024, 01:47 AM IST

ಸಾರಾಂಶ

ಗೃಹ ಸಚಿವ ಪರಮೇಶ್ವರ್‌ ಬಳಿಕ ಈಗ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ನಿಗಮ-ಮಂಡಳಿಗಳ ಅಧ್ಯಕ್ಷರ ಆಯ್ಕೆ ಕುರಿತು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಸಚಿವರ ಅಭಿಪ್ರಾಯ ಆಲಿಸದೆ ಹೈಕಮಾಂಡ್‌ ನಾಯಕರೇ ದೆಹಲಿಯಲ್ಲಿ ಕುಳಿತು ಪಟ್ಟಿ ಕಳಿಸಿದರೆ ಅದನ್ನು ಸಹಿಸಿಕೊಂಡು ಕುಳಿತುಕೊಳ್ಳುವುದಕ್ಕೆ ನಾವೇನು ಗುಲಾಮರೇ ಎಂದು ಸ್ವಪಕ್ಷೀಯ ನಾಯಕರ ವಿರುದ್ಧವೇ ಕಿಡಿಕಾರಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಗೃಹ ಸಚಿವ ಪರಮೇಶ್ವರ್‌ ಬಳಿಕ ಈಗ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ನಿಗಮ-ಮಂಡಳಿಗಳ ಅಧ್ಯಕ್ಷರ ಆಯ್ಕೆ ಕುರಿತು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಸಚಿವರ ಅಭಿಪ್ರಾಯ ಆಲಿಸದೆ ಹೈಕಮಾಂಡ್‌ ನಾಯಕರೇ ದೆಹಲಿಯಲ್ಲಿ ಕುಳಿತು ಪಟ್ಟಿ ಕಳಿಸಿದರೆ ಅದನ್ನು ಸಹಿಸಿಕೊಂಡು ಕುಳಿತುಕೊಳ್ಳುವುದಕ್ಕೆ ನಾವೇನು ಗುಲಾಮರೇ ಎಂದು ಸ್ವಪಕ್ಷೀಯ ನಾಯಕರ ವಿರುದ್ಧವೇ ಕಿಡಿಕಾರಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲೂಕು ಕಂದಿಕೆರೆಯಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು. ಯಾವುದೇ ಜಿಲ್ಲೆ ಇರಲಿ, ನಿಗಮ-ಮಂಡಳಿಗಳಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡುವ ಹೊತ್ತಿನಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುವವರನ್ನು ಒಂದು ಮಾತು ಕೇಳಬೇಕಲ್ಲ. ದೆಹಲಿಯಲ್ಲಿ ಕುಳಿತುಕೊಂಡು ಲಾಟರಿ ಟಿಕೆಟ್ ಹಂಚಿದಂತೆ ಹಂಚಿದರೆ ಯಾರು ಕೇಳುತ್ತಾರೆ? ದೆಹಲಿಯಲ್ಲಿ ಕುಳಿತುಕೊಂಡು ಅವರವರೇ ಪಟ್ಟಿ ಮಾಡಬಾರದು. ಹೀಗೆ ಪಟ್ಟಿ ತಯಾರಿಸಿ ಕಳುಹಿಸಿದರೆ ಅವರ ಅವರ ಮಾತನ್ನು ಕೇಳಿಸಿಕೊಂಡು ಸುಮ್ಮನಿರಬೇಕಾ? ನಾವೇನು ಗುಲಾಮರೇ ಎನ್ನುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.

ನಾವು ಇದನ್ನು ಸಹಿಸುವುದಿಲ್ಲ. ಹೈ ಕಮಾಂಡ್ ಮೊದಲೆಲ್ಲಾ ಸಿಎಂ ಹಾಗೂ ರಾಜ್ಯಾಧ್ಯಕ್ಷರಿಗೆ ಜವಾಬ್ದಾರಿ ಕೊಡುತ್ತಿತ್ತು. ಸಿಎಂ, ಅಧ್ಯಕ್ಷರು ನಾಮಿನೇಷನ್ ಮಾಡೋರು. ಈಗ ಅವರೇ ಪಟ್ಟಿ ಮಾಡಿ ಕಳುಹಿಸುತ್ತಾರೆ. ಇದು ಒಂದು ತರಹ ಹೊಸ ಹೈಕಮಾಂಡ್. ನಮ್ಮ ಮೇಲೆ ಸವಾರಿ ಮಾಡುವುದನ್ನು ನಾವು ಸಹಿಸುವುದಿಲ್ಲ. ಇಡೀ ರಾಜ್ಯಾದ್ಯಂತ ಈ ರೀತಿ ನಡೆದಿದೆ.‌ ಪರಮೇಶ್ವರ್‌ಗೂ ಇದೇ ಅಭಿಪ್ರಾಯ ಇದೆ. ಸ್ಥಳೀಯ ನಾಯಕರನ್ನು ಕೇಳದೆ, ದೆಹಲಿಯಲ್ಲಿ ಸಲಾಂ ಹೊಡೆಯುವವರಿಗೆ ಮಣೆ ಹಾಕಲಾಗಿದೆ ಎಂದು ಕಿಡಿ ಕಾರಿದರು.

ಆಯ್ಕೆ ಕಷ್ಟಕರ:ನಿಗಮ ಮಂಡಳಿ ಅಧ್ಯಕ್ಷ ಹುದ್ದೆಗೆ ಒಬ್ಬೊಬ್ಬ ಸಚಿವರು ಒಂದೊಂದು ಹೆಸರು ಹೇಳುತ್ತಾರೆ. ಆಯ್ಕೆ ಮಾಡುವುದು ಕಷ್ಟದ ವಿಚಾರ. ಕೆಪಿಸಿಸಿ ಅಧ್ಯಕ್ಷರು, ಸಿಎಂ ಹಾಗೂ ಹೈಕಮಾಂಡ್‌ ಸೇರಿ ತೀರ್ಮಾನ ಮಾಡುತ್ತಾರೆ. - ಸಿದ್ದರಾಮಯ್ಯ, ಮುಖ್ಯಮಂತ್ರಿ

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ