ಅನುದಾನ ನೀಡದೇ ಸಿಎಂ ಅಸಹಕಾರ : ಆಕ್ರೋಶ - 2 ದಿನದಲ್ಲಿ ರಾಜೀನಾಮೆ ನೀಡುವ ಬೆದರಿಕೆ

Sujatha NRPublished : Jun 24, 2025 8:23 AM

ರಾಜ್ಯ ಕಾಂಗ್ರೆಸ್‌ನಲ್ಲಿ ಶಾಸಕರ ಅಸಮಾಧಾನ ಜೋರಾಗುತ್ತಿದ್ದು, ಹಿರಿಯ ಶಾಸಕ ಬಿ.ಆರ್‌.ಪಾಟೀಲ ಬಳಿಕ ಈಗ ಕಾಗವಾಡ ಶಾಸಕ ರಾಜು ಕಾಗೆ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಕಾಗವಾಡ :  ರಾಜ್ಯ ಕಾಂಗ್ರೆಸ್‌ನಲ್ಲಿ ಶಾಸಕರ ಅಸಮಾಧಾನ ಜೋರಾಗುತ್ತಿದ್ದು, ಹಿರಿಯ ಶಾಸಕ ಬಿ.ಆರ್‌.ಪಾಟೀಲ ಬಳಿಕ ಈಗ ಕಾಗವಾಡ ಶಾಸಕ ರಾಜು ಕಾಗೆ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಯವರು ಸಮುದಾಯ ಭವನ ಕಾಮಗಾರಿಗಳಿಗೆ ಸಂಬಂಧಿಸಿದಂತೆ ₹13 ಕೋಟಿಯ ವರ್ಕ್‌ ಆರ್ಡರ್ ಬಿಡುಗಡೆ ಮಾಡದೆ ಸತಾಯಿಸುತ್ತಿದ್ದಾರೆ. ಇನ್ನೆರಡು ದಿನದಲ್ಲಿ ಸಿಎಂ ಅವರನ್ನು ಭೇಟಿ ಮಾಡಿ, ರಾಜೀನಾಮೆ ಕೊಟ್ಟರೂ ಆಶ್ಚರ್ಯವಿಲ್ಲ ಎಂದು ಕಾಗವಾಡ ಕ್ಷೇತ್ರದ ಕಾಂಗ್ರೆಸ್‌ ಶಾಸಕ ರಾಜು ಕಾಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಜಿಲ್ಲೆ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಐನಾಪುರದಲ್ಲಿ ಸೋಮವಾರ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿಯವರು ಕ್ಷೇತ್ರದ ಅಭಿವೃದ್ಧಿಗಾಗಿ ₹25 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಆದರೆ, ಸಮುದಾಯ ಭವನ ಕಾಮಗಾರಿಗಳಿಗೆ ಸಂಬಂಧಿಸಿದಂತೆ ₹13 ಕೋಟಿಯ ವರ್ಕ್‌ ಆರ್ಡರ್ ಬಿಡುಗಡೆ ಮಾಡದೆ ಸತಾಯಿಸುತ್ತಿದ್ದಾರೆ. ನಾನು ರಾಜೀನಾಮೆ ನೀಡುವ ಪರಿಸ್ಥಿತಿಗೆ ಬಂದಿದ್ದೇನೆ. ಬೆಂಗಳೂರಿಗೆ ಹೊರಟಿದ್ದೇನೆ, ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ರಾಜೀನಾಮೆ ಕೊಟ್ಟರೂ ಆಶ್ವರ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ, ಸರ್ಕಾರದ ಲೋಪ, ದೋಷಗಳನ್ನು ಎತ್ತಿ ಹಿಡಿದು, ತೀವ್ರ ಆಕ್ರೋಶ ಹೊರಹಾಕಿದ ಶಾಸಕರು, ಕಳೆದೆರಡು ವರ್ಷಗಳಿಂದ ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗುತ್ತಿವೆ. ಸರ್ಕಾರ ಕೂಡ ಅನುದಾನ ಬಿಡುಗಡೆಯಲ್ಲಿ ವಿಳಂಬ ತೋರುತ್ತಿದೆ. ನಾನು ಈಗಾಗಲೇ ಕ್ಷೇತ್ರದಲ್ಲಿ ಎರಡು ವರ್ಷಗಳ ಹಿಂದೆ ಶಂಕುಸ್ಥಾಪನೆ ಮಾಡಿದ ಅಭಿವೃದ್ಧಿ ಕಾಮಗಾರಿಗಳಿಗೆ ಇನ್ನೂ ವರ್ಕ್ ಆರ್ಡರ್ ಬಂದಿಲ್ಲ. ನನಗೂ ಕೇಳಿ, ಕೇಳಿ ಸಾಕಾಗಿದೆ. ಬಿ.ಆರ್.ಪಾಟೀಲ ಅವರ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ. ಅವರಿಗಾದ ಸ್ಥಿತಿ ನನಗೂ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ಹೋಗಿದೆ. ಗುತ್ತಿಗೆದಾರರು ಗುತ್ತಿಗೆ ಪಡೆದುಕೊಂಡು ನನ್ನಿಂದಲೇ ಗುದ್ದಲಿ ಪೂಜೆ ನೆರವೇರಿಸಿಕೊಂಡಿದ್ದಾರೆ. ಆದರೆ, ಒಂದು ವರ್ಷ ಕಳೆದರೂ ಕಾಮಗಾರಿ ಪ್ರಾರಂಭಿಸುತ್ತಿಲ್ಲ. ಗುತ್ತಿಗೆದಾರರ ಈ ನಡುವಳಿಕೆ ಕೂಡ ನನಗೆ ಬೇಸರ ಮೂಡಿಸಿದೆ. ಪೂಜೆ ಮಾಡಿ ವರ್ಷವಾದರೂ ಕಾಮಗಾರಿ ಏಕೆ ಪ್ರಾರಂಭವಾಗಿಲ್ಲ ಎಂದು ಕ್ಷೇತ್ರದ ಜನ ನನ್ನನ್ನು ಕೇಳುತ್ತಿದ್ದಾರೆ, ಅವರಿಗೆ ಏನು ಉತ್ತರ ಕೊಡಲಿ, ನೀವೇ ಹೇಳಿ ಎಂದು ಪತ್ರಕರ್ತರನ್ನೇ ಮರುಪ್ರಶ್ನಿಸಿದರು.

ಅಧಿಕಾರಿಗಳು ಮಲಗಿದ್ದಾರೆ. ಗುತ್ತಿಗೆದಾರರ ಮೇಲೆ ಇಲಾಖೆಯ ಅಧಿಕಾರಿಗಳ ನಿಯಂತ್ರಣವಿಲ್ಲ. ಹೀಗಾಗಿ, ಗುತ್ತಿಗೆದಾರರು ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆ. ಮಳೆಗಾಲ ಪ್ರಾರಂಭವಾದ ಮೇಲೆ ಡಾಂಬರೀಕರಣ ಮಾಡಬಾರದು. ಆದರೆ, ಗುತ್ತಿಗೆದಾರರು ಉದ್ದೇಶಪೂರ್ವಕವಾಗಿ ಮಳೆಗಾಲದಲ್ಲಿಯೇ ಡಾಂಬರೀಕರಣಕ್ಕೆ ಮುಂದಾಗುತ್ತಾರೆ. ಇದರ ಪರಿಣಾಮ ಕೆಲವೇ ತಿಂಗಳಲ್ಲಿ ರಸ್ತೆಗಳು ಹದಗೆಡುತ್ತಿವೆ. ಕೆಲವೇ ತಿಂಗಳ ಹಿಂದೆ ಉಗಾರ-ಶಿರಗುಪ್ಪಿ ರಸ್ತೆಯ ಡಾಂಬರೀಕರಣ ಮಾಡಲಾಗಿದ್ದು, ರಸ್ತೆ ಈಗಲೇ ಸಂಪೂರ್ಣ ಕಿತ್ತು ಹೋಗಿರುವುದು ಇದಕ್ಕೊಂದು ಉದಾಹರಣೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Read more Articles on