ಬಿಜೆಪಿ ಕೈಗೊಂಬೆಯಾದ ಪ್ರಜಾಪ್ರಭುತ್ವದ ಕಾವಲುಗಾರ ಚುನಾವಣಾ ಆಯೋಗ !

Published : Aug 08, 2025, 11:43 AM ISTUpdated : Aug 08, 2025, 01:17 PM IST
Randeep Surjewala

ಸಾರಾಂಶ

ಚುನಾವಣಾ ಆಯೋಗವು ಈಗ ಪ್ರಜಾಪ್ರಭುತ್ವದ ಕಾವಲುಗಾರನಾಗಿ ಉಳಿದಿಲ್ಲ. ತನ್ನ ಜವಾಬ್ದಾರಿ ಮರೆತು ಕಾರ್ಯಾಂಗದ ಕೈಗೊಂಬೆಯಾಗಿದೆ.  ಇದರ ವಿರುದ್ಧದ ಹೋರಾಟವನ್ನು ಕಾಂಗ್ರೆಸ್ ಸಂಸತ್ತಿನಿಂದ ಜನರ ನ್ಯಾಯಾಲಯದ ಮುಂದೆ ಕೊಂಡೊಯ್ಯಲಿದೆ.

-ರಣದೀಪ್ ಸಿಂಗ್ ಸುರ್ಜೇವಾಲಾ. ರಾಜ್ಯಸಭೆ ಸದಸ್ಯರು, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ.

ಕಳೆದ ಒಂದು ದಶಕದಿಂದ ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಬಿಜೆಪಿ ಉದ್ದೇಶ ಕೇವಲ ಅಧಿಕಾರ ಹಿಡಿಯುವುದಷ್ಟೇ ಅಲ್ಲ. ಅದರ ಜೊತೆಗೆ ಸಾಂವಿಧಾನಿಕ ಸಂಸ್ಥೆಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಅಪಾಯಕಾರಿ ನಡೆಯನ್ನು ನಿರಂತರವಾಗಿ ಪ್ರದರ್ಶಿಸುತ್ತಿದೆ. ಈ ದಾಳಿಗೆ ಇತ್ತೀಚೆಗೆ ಬಲಿಯಾದ ಸಂಸ್ಥೆಯೇ ಭಾರತದ ಚುನಾವಣಾ ಆಯೋಗ. ಅದು ನಿಷ್ಪಕ್ಷಪಾತ ಸಾಂವಿಧಾನಿಕ ಸಂಸ್ಥೆಯಾಗಿ ಉಳಿದಿಲ್ಲ. ಚುನಾವಣೆಗಳನ್ನು ತಿರುಚುವ ಬಿಜೆಪಿಯ ಯಂತ್ರದಂತೆ ಕಾರ್ಯನಿರ್ವಹಿಸುತ್ತಿದೆ.

ಸಿಬಿಐ, ಇ.ಡಿ. ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ವಿರೋಧ ಪಕ್ಷಗಳನ್ನು ಹತ್ತಿಕ್ಕಲು ಈಗಾಗಲೇ ಬಳಸಲಾಗುತ್ತಿದೆ. ಈಗ ಬಿಜೆಪಿ ಚುನಾವಣಾ ಆಯೋಗವನ್ನೇ ತನ್ನ ಹೊಸ ಅಸ್ತ್ರವನ್ನಾಗಿಸಿಕೊಂಡಿದೆ. ಮತದಾರರ ಹೆಸರುಗಳನ್ನು ಅಳಿಸಿ ಹಾಕಲು, ವಿರೋಧಿ ಧ್ವನಿಗಳನ್ನು ದಮನ ಮಾಡಲು ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳ ಅಡಿಪಾಯವನ್ನೇ ಅಲುಗಾಡಿಸಲು ಸಾಧನವಾಗಿ ಬಳಸಿಕೊಳ್ಳುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ನಾವು ನೋಡಿದ್ದು ಕೇವಲ ಆರಂಭವಷ್ಟೇ. ಅದು ಕೇವಲ ದುರುಪಯೋಗವಲ್ಲ. ಇದು ಪೂರ್ವ ನಿಯೋಜಿತ ವಂಚನೆ.

ಬಿಹಾರದಲ್ಲಿ ಬಿಜೆಪಿಗೆ ನಿಷ್ಠೆ:

ಬಿಹಾರ ರಾಜ್ಯ ಒಂದರಲ್ಲೇ ಸುಮಾರು 65 ಲಕ್ಷ ಮತದಾರರ ಹೆಸರುಗಳನ್ನು ಮತ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದು ಕೇವಲ ತಾಂತ್ರಿಕ ದೋಷವಲ್ಲ, ಇದು ಪ್ರಜಾಪ್ರಭುತ್ವದ ಮೇಲಿನ ಕ್ರೂರ ಪ್ರಹಾರ. ಮತಪಟ್ಟಿಯಿಂದ ಕೈಬಿಡಲಾದ ಮತದಾರರಲ್ಲಿ ಹೆಚ್ಚಿನವರು ಬಡವರು, ದಲಿತರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರು. ಇವರೆಲ್ಲರೂ ವಿರೋಧ ಪಕ್ಷಗಳ ನಿಷ್ಠರು ಹಾಗೂ ಬೆಂಬಲಿಗರು.

ಇದೊಂದು ರಾಜಕೀಯ ಶುದ್ಧೀಕರಣದ ಸಂಚು. ಬಿಜೆಪಿಯು ಮತಗಳಿಂದ ಗೆಲ್ಲುವ ಬದಲು, ಮತದಾರರನ್ನೇ ಇಲ್ಲವಾಗಿಸಿ ಗೆಲ್ಲಲು ಹೊರಟಿದೆ.ಆಧಾರ್, ವೋಟರ್ ಐಡಿ ಅಥವಾ ಪಡಿತರ ಚೀಟಿ ಮೂಲಕ ಮತದಾರರ ಗುರುತನ್ನು ಪರಿಶೀಲಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದ್ದರೂ, ಚುನಾವಣಾ ಆಯೋಗವು ನ್ಯಾಯಾಲಯದ ಆದೇಶವನ್ನು ಕಡೆಗಣಿಸಿ ಬಿಜೆಪಿಗೆ ಸಂಪೂರ್ಣ ನಿಷ್ಠೆ ತೋರಿದೆ.

ಅದು ಹೇಳಿದಂತೆ ಮಾಡಿದೆ. ಬಡವರ ಮತ ಹಕ್ಕನ್ನು ತೆಗೆದು ಹಾಕಿದೆ. ಕಾಂಗ್ರೆಸ್ ಬಲಿಷ್ಠವಾಗಿರುವ ಮತ್ತು ಬಿಜೆಪಿಗೆ ಪರಾಭವದ ಆತಂಕವಿದ್ದ ಸ್ಥಳಗಳಲ್ಲಿ ಈ ಕೃತ್ಯಗಳು ಸತತವಾಗಿ ನಡೆದಿವೆ. ಹೀಗಾಗಿಯೇ, ಇಸಿಐ (ECI) ಎಂದರೆ ಈಗ ''Election Commission of India'' (ಕೇಂದ್ರ ಚುನಾವಣಾ ಆಯೋಗ) ಅಲ್ಲ, ಬದಲಿಗೆ ''Eraser Commission of India'' (ಭಾರತದ ಅಳಿಸುವ ಆಯೋಗ) ಆಗಿದೆ. ಮತದಾರರ ಪಟ್ಟಿ, ದೂರುಗಳು, ಮತ್ತು ನ್ಯಾಯಸಮ್ಮತ ಚುನಾವಣೆಯ ಕಲ್ಪನೆಯನ್ನೇ ಇದು ಅಳಿಸಿಹಾಕುತ್ತಿದೆ.

ಮಹಾರಾಷ್ಟ್ರದಲ್ಲಿ ಹ್ಯಾಕಿಂಗ್:

ಮಹಾರಾಷ್ಟ್ರದಲ್ಲಿ, ಕೇವಲ 30 ನಿಮಿಷಗಳಲ್ಲಿ 70 ಲಕ್ಷ ಮತಗಳು ಚಲಾವಣೆಯಾದವು. ಇದು ಮತದಾನವಲ್ಲ, ಇದು ಸ್ಪಷ್ಟವಾಗಿ ಹ್ಯಾಕಿಂಗ್. ಈ ವಿಷಯವನ್ನು ರಾಹುಲ್ ಗಾಂಧಿಯವರು ನೇರವಾಗಿ ಚುನಾವಣಾ ಆಯೋಗದ ಗಮನಕ್ಕೆ ತಂದರೂ, ಅಲ್ಲಿಂದ ಸಿಕ್ಕಿದ್ದು ಮೌನದ ಪ್ರತ್ಯುತ್ತರ. ತನಿಖೆಯೂ ಇಲ್ಲ, ಉತ್ತರವೂ ಇಲ್ಲ. ಹೊಣೆಗಾರಿಕೆಯೂ ಇಲ್ಲ. ಆಯೋಗವು ಸಾಂವಿಧಾನಿಕ ಸಂಸ್ಥೆಯಂತೆ ವರ್ತಿಸದೆ, ಬಿಜೆಪಿಯ ಆದೇಶಕ್ಕೆ ತಲೆಬಾಗುವ ಹೇಡಿಯಂತೆ ನಡೆದುಕೊಂಡಿದೆ.

ಕರ್ನಾಟಕದಲ್ಲೂ ಮತ ಕಳವು:

ಲೋಕಸಭಾ ಚುನಾವಣೆ ವೇಳೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಕೇವಲ 10 ನಿಮಿಷಗಳಲ್ಲಿ 65,000 ಮತಗಳು ಚಲಾವಣೆಯಾಗಿವೆ. ಚುನಾವಣೆಯೇ ಅಥವಾ ವಂಚನೆಯ ಸರ್ಕಸ್ಸೇ? ಇಲ್ಲಿನ ಯಕ್ಷ ಮಾಂತ್ರಿಕ ಬಿಜೆಪಿ. ಅಂತೆಯೇ ಕಾರ್ಯಕ್ರಮ ವ್ಯವಸ್ಥಾಒಕ ಚುನಾವಣಾ ಆಯೋಗ.

2019ರಿಂದ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ 27 ದೂರುಗಳನ್ನು ನೀಡಿದ್ದರೂ, ಆಯೋಗ ಒಂದರ ಮೇಲೂ ಕ್ರಮ ಕೈಗೊಂಡಿಲ್ಲ. ಕನಿಷ್ಠ ಎಚ್ಚರಿಕೆಯನ್ನೂ ನೀಡಿಲ್ಲ. ಆಯೋಗವು ನಿಷ್ಪಕ್ಷಪಾತವಾಗಿಲ್ಲ. ಅದು ಬಿಜೆಪಿಯ ಗುರಾಣಿ ಮತ್ತು ಖಡ್ಗ ಎರಡೂ ಆಗಿ ಬದಲಾಗಿದೆ. ನಮ್ಮ ಪ್ರತಿರೋಧಕ್ಕೆ ಕರ್ನಾಟಕವೇ ಮುನ್ನುಡಿಯಾಗಲಿದೆ. ಈ ವಂಚನೆಯನ್ನು ನಾವು ಬೀದಿ ಬೀದಿಯಲ್ಲಿ ಮತ್ತು ಬೂತ್ ಮಟ್ಟದಲ್ಲಿ ಬಯಲಿಗೆಳೆಯುತ್ತೇವೆ.

ದೇಶಾದ್ಯಂತ ಇದೇ ಕಥೆ:

ದೇಶದಾದ್ಯಂತ ಇದೇ ರೀತಿಯ ಮೋಸಗಳು ನಡೆಯುತ್ತಿವೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮತಗಳು ಇದ್ದಕ್ಕಿದ್ದಂತೆ ಸೃಷ್ಟಿಯಾಗುತ್ತವೆ. ವಿರೋಧ ಪಕ್ಷಗಳು ಪ್ರಬಲವಾಗಿರುವ ರಾಜ್ಯಗಳಲ್ಲಿ, ಇಡೀ ಸಮುದಾಯಗಳೇ ಮತದಾರರ ಪಟ್ಟಿಯಿಂದ ಕಣ್ಮರೆಯಾಗುತ್ತವೆ. ವಲಸೆ ಕಾರ್ಮಿಕರು, ದಲಿತರು ಮತ್ತು ಆದಿವಾಸಿಗಳನ್ನು ವ್ಯವಸ್ಥಿತವಾಗಿ ಮತದಾನದ ಹಕ್ಕಿನಿಂದ ದೂರವಿಡಲಾಗುತ್ತಿದೆ.

ಬಿಜೆಪಿ ಕೇವಲ ಚುನಾವಣೆಗಳನ್ನು ತಿರುಚುತ್ತಿಲ್ಲ. ಅದು ಒಬ್ಬೊಬ್ಬರ ಹೆಸರನ್ನು ಅಳಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಇದು ಚುನಾವಣಾ ಪ್ರಚಾರವಲ್ಲ, ಇದು ಫಲಿತಾಂಶಗಳನ್ನೇ ರೂಪಿಸುವ ಎಂಜಿನಿಯರಿಂಗ್. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ರಕ್ಷಕನಾಗಬೇಕಿದ್ದ ಚುನಾವಣಾ ಆಯೋಗ, ಇಂದು ಭಾರತೀಯ ಪ್ರಜಾಪ್ರಭುತ್ವದ ಸಮಾಧಿ ಮಾಡುವ ಪ್ರಕ್ರಿಯೆಯ ನಿರ್ದೇಶಕನಾಗಿ ಮಾರ್ಪಟ್ಟಿದೆ.

ಇದು ಕೇವಲ ಹೆಸರುಗಳು ಕಳೆದುಹೋಗುವ ವಿಷಯವಲ್ಲ. ಇದು ಭಾರತದ ಭವಿಷ್ಯ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರು ನಮಗೆ ನೀಡಿದ ಸಂವಿಧಾನದ ಅಸ್ತಿತ್ವದ ಪ್ರಶ್ನೆಯಾಗಿದೆ. ತಮ್ಮ ಮತಕ್ಕೆ ಬೆಲೆಯಿದೆ ಎಂದು ನಂಬಿ ಸರದಿಯಲ್ಲಿ ನಿಲ್ಲುವ ಪ್ರತಿಯೊಬ್ಬ ಭಾರತೀಯನಿಗೂ ಇದು ಬಗೆದ ದ್ರೋಹ. ಬಿಜೆಪಿ ಚುನಾವಣೆಗಳನ್ನು ಪ್ರಹಸನವನ್ನಾಗಿ ಮಾಡಿದೆ. ಶಾಸಕರನ್ನು ಖರೀದಿಸುತ್ತಾರೆ, ಯಂತ್ರಗಳನ್ನು ತಿರುಚುತ್ತಾರೆ ಮತ್ತು ಈಗ ಆಯೋಗವನ್ನು ಜೇಬಿನಲ್ಲಿಟ್ಟುಕೊಂಡು, ಜನರಿಂದಲೇ ಅವರ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ ಇದನ್ನು ಸಹಿಸುವುದಿಲ್ಲ. ನಾವು ನ್ಯಾಯಾಲಯಗಳಲ್ಲಿ, ಬೀದಿಗಳಲ್ಲಿ, ಸಂಸತ್ತಿನಲ್ಲಿ ಮತ್ತು ಈ ದೇಶದ ಪ್ರತಿಯೊಂದು ಹಳ್ಳಿಯಲ್ಲಿ ಹೋರಾಡುತ್ತೇವೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಜನರನ್ನು ಜಾಗೃತಗೊಳಿಸಿ, ಈ ವಂಚನೆಯನ್ನು ಬಯಲಿಗೆಳೆಯುತ್ತೇವೆ. ಇನ್ನು ಮೌನಕ್ಕೆ ಅವಕಾಶವಿಲ್ಲ. ಇದು ಪ್ರತಿರೋಧದ ಸಮಯ.

PREV
Read more Articles on

Recommended Stories

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ತಿದ್ದುಪಡಿ ವಿಧೇಯಕಕ್ಕೆ ಸಂಪುಟ ಅನುಮೋದನೆ
ಜನಾದೇಶ ಸಿಗದ್ದಕ್ಕೆ ರಾಹುಲ್‌ ಹತಾಶ: ಮತಗಳ್ಳತನ ಆರೋಪಕ್ಕೆ ಬಿಜೆಪಿ ಕಿಡಿ