;Resize=(412,232))
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜಕಾರಣಕ್ಕೆ ಪ್ರವೇಶಿಸಿ 50 ವಸಂತಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಬೃಹತ್ ಸಮಾವೇಶ ಬರುವ ಮೇ 9ರಂದು ನಡೆಯುವ ನಿರೀಕ್ಷೆಯಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ 4ರಂದು ಹೊರಬಿದ್ದ ಬಳಿಕ ಆಗಮಿಸುವುದಾಗಿ ತಿಳಿಸಿದ್ದಾರೆ. ಬಹುತೇಕ ಮೇ 9ರಂದು ಸಮಾವೇಶ ನಡೆಯಬಹುದು ಎಂದು ಮೂಲಗಳು ತಿಳಿಸಿವೆ.
ಇದು ಅಮಿತ್ ಶಾ ಅವರ ಭೇಟಿಯ ಮೇಲೆ ನಿರ್ಧರಿತವಾಗುವುದರಿಂದ ಇನ್ನೂ ಅಂತಿಮಗೊಂಡಿಲ್ಲ. ಮೇ ತಿಂಗಳಲ್ಲೇ ಸಮಾವೇಶ ನಡೆಸಬೇಕು ಎಂಬ ನಿರ್ಣಯವಾಗಿದೆ. ಇದಕ್ಕೆ ಪೂರಕವಾಗಿ ತೆರೆಮರೆಯಲ್ಲಿ ಸಿದ್ಧತೆಗಳೂ ಆರಂಭಗೊಂಡಿವೆ. ಶೀಘ್ರದಲ್ಲೇ ಅಧಿಕೃತ ದಿನಾಂಕ ಪ್ರಕಟಿಸಲಾಗುವುದು ಎಂದು ಪಕ್ಷದ ಹಿರಿಯ ನಾಯಕರು ಮಾಹಿತಿ ನೀಡಿದ್ದಾರೆ