ಬೆಂಗಳೂರು : ಓಕಳಿಪುರ ಅಷ್ಟಪಥದ 2 ಪಥ ಫೆಬ್ರವರಿ ಅಂತ್ಯದ ವೇಳೆಗೆ ಸಾರ್ವಜನಿಕ ಬಳಕೆಗೆ

KannadaprabhaNewsNetwork | Updated : Dec 19 2024, 11:00 AM IST

ಸಾರಾಂಶ

ಸರಿ ಸುಮಾರು ಕಳೆದೊಂದು ದಶಕದಿಂದ ನಡೆಯುತ್ತಿರುವ ಓಕಳಿಪುರ ಜಂಕ್ಷನ್‌ನ ಅಷ್ಟಪಥ ಸಿಗ್ನಲ್‌ ಮುಕ್ತ ಕಾರಿಡಾರ್‌ ಕಾಮಗಾರಿಯ ಇನ್ನೂ 2 ಪಥ ಫೆಬ್ರವರಿ ಅಂತ್ಯದ ವೇಳೆಗೆ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ.

 ಬೆಂಗಳೂರು : ಸರಿ ಸುಮಾರು ಕಳೆದೊಂದು ದಶಕದಿಂದ ನಡೆಯುತ್ತಿರುವ ಓಕಳಿಪುರ ಜಂಕ್ಷನ್‌ನ ಅಷ್ಟಪಥ ಸಿಗ್ನಲ್‌ ಮುಕ್ತ ಕಾರಿಡಾರ್‌ ಕಾಮಗಾರಿಯ ಇನ್ನೂ 2 ಪಥ ಫೆಬ್ರವರಿ ಅಂತ್ಯದ ವೇಳೆಗೆ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ.

ಮೆಜೆಸ್ಟಿಕ್‌ ಸಮೀಪದ ಓಕಳಿಪುರ ಜಂಕ್ಷನ್‌ನಲ್ಲಿ ಕಳೆದ 2013-14ರಲ್ಲಿ ಎಂಟು ಲೈನ್‌ನ ಸಿಗ್ನಲ್‌ ಫ್ರೀ ಕಾರಿಡಾರ್‌ ನಿರ್ಮಾಣ ಕಾಮಗಾರಿಯನ್ನು ಬಿಬಿಎಂಪಿ ಆರಂಭಿಸಿತ್ತು. ಇದೀಗ ಆರು ಪಥ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಆದರೆ, ಚೆನ್ನೈ ರೈಲ್ವೆ ಮಾರ್ಗದಲ್ಲಿ ಎರಡು ಕೆಳ ಸೇತುವೆ ನಿರ್ಮಾಣ ಕಾರ್ಯ ಬಾಕಿ ಇತ್ತು. ಇದೀಗ ಬಹುತೇಕ ಪೂರ್ಣಗೊಂಡಿದೆ. ಫೆಬ್ರವರಿ ಅಂತ್ಯದ ವೇಳೆಗೆ ಸಂಚಾರಕ್ಕೆ ಮುಕ್ತಗೊಳ್ಳಿಸಲಾಗುವುದು.

ಇದರಿಂದ ಮಲ್ಲೇಶ್ವರ ಮತ್ತು ರಾಜಾಜಿನಗರ ಕಡೆಯಿಂದ ರೈಲ್ವೆ ನಿಲ್ದಾಣಕ್ಕೆ ಹಾಗೂ ಮೆಜೆಸ್ಟಿಕ್‌ನಿಂದ ರೈಲ್ವೆ ನಿಲ್ದಾಣದ ಫ್ಲಾಟ್‌ ಫಾರಂ 6,7 ಹಾಗೂ 8ಕ್ಕೆ ನೇರವಾಗಿ ಪ್ರವೇಶ ಪಡೆಯುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಲೋಕೇಶ್‌ ಮಾಹಿತಿ ನೀಡಿದ್ದಾರೆ.

ಚರಂಡಿ ಕೆಲಸ ಬಾಕಿ:

ರೈಲ್ವೆ ಹಳಿ ಕೆಳಭಾಗದಲ್ಲಿ ಪ್ರೀಕಾಸ್ಟ್‌ ಬಾಕ್ಸ್‌ ಅಳವಡಿಕೆ ಕಾಮಗಾರಿಯನ್ನು ರೈಲ್ವೆ ಇಲಾಖೆಗೆ ವಹಿಸಲಾಗಿತ್ತು. ಇದೀಗ ಬಾಕ್ಸ್‌ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿ ಸ್ಥಳದಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿ ಬಾಕಿ ಇದ್ದು, ರೈಲ್ವೆ ಇಲಾಖೆ ಬಿಬಿಎಂಪಿಗೆ ಕಾಮಗಾರಿ ಸ್ಥಳ ಹಸ್ತಾಂತರ ಮಾಡುತ್ತಿದಂತೆ ಚರಂಡಿ ಕೊಳವೆ ಅಳವಡಿಕೆ ಹಾಗೂ ರಸ್ತೆ ಸಂಪರ್ಕ ಕಾಮಗಾರಿ ಪೂರ್ಣಗೊಳಿಸಿ ಸಂಚಾರ ಮುಕ್ತಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಹೆಚ್ಚುವರಿ 7 ಕೋಟಿ ರು.ಗೆ ರೈಲ್ವೆ ಪ್ರಸ್ತಾವನೆ:

ತುಮಕೂರು ಹಾಗೂ ಚೆನ್ನೈ ರೈಲ್ವೆ ಹಳಿ ಕಳೆ ಭಾಗದಲ್ಲಿ ಒಟ್ಟು 8 ಪ್ರೀಕಾಸ್ಟ್‌ ಬಾಕ್ಸ್‌ ಅಳವಡಿಕೆ ಕಾಮಗಾರಿಗೆ ₹80 ಕೋಟಿಯನ್ನು ಬಿಬಿಎಂಪಿಯು ರೈಲ್ವೆ ಇಲಾಖೆಗೆ ನೀಡಿದೆ. ಕಾಮಗಾರಿ ತಡವಾಗಿರುವುದರಿಂದ ವೆಚ್ಚ ಹೆಚ್ಚಳವಾಗಿದೆ. ಹೆಚ್ಚುವರಿಯಾಗಿ 7 ಕೋಟಿ ರು. ನೀಡುವಂತೆ ರೈಲ್ವೆ ಇಲಾಖೆಯು ಬಿಬಿಎಂಪಿಗೆ ಕೇಳಿದೆ. ಈ ಬಗ್ಗೆ ಮುಖ್ಯ ಆಯುಕ್ತರಿಗೆ ಮತ್ತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗುವುದು. ಸರ್ಕಾರ ತೀರ್ಮಾನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಕಾಮಗಾರಿ ಯಾಕೆ ತಡ?:

ಚನ್ನೈ ರೈಲ್ವೆ ಮಾರ್ಗದಲ್ಲಿ ಹೆಚ್ಚಿನ ರೈಲುಗಳ ಸಂಚಾರ ಇರುವುದರಿಂದ ಹಗಲು ವೇಳೆಯಲ್ಲಿ ಕಾಮಗಾರಿ ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಪ್ರೀ ಕಾಸ್ಟ್‌ ಬಾಕ್ಸ್‌ ಅನ್ನು ರೈಲ್ವೆ ಹಳಿಯ ಕೆಳ ಭಾಗದಲ್ಲಿ ಅಳವಡಿಕೆ ಮಾಡಬೇಕಿದೆ. ರಾತ್ರಿ 12.30 ರಿಂದ ಬೆಳಗಿನ ಜಾವ 4.30ರ ಸಮಯದಲ್ಲಿ ಮಾತ್ರ ಕೆಲಸ ಮಾಡಬೇಕಿದೆ. ದಿನಕ್ಕೆ 2 ರಿಂದ 3 ಅಡಿ ಮಾತ್ರ ಬಾಕ್ಸ್‌ ಅನ್ನು ಹಳಿಯ ಕೆಳಭಾಗಕ್ಕೆ ತಳ್ಳುವುದಕ್ಕೆ ಮಾತ್ರ ಸಾಧ್ಯ. ಹಾಗಾಗಿ, ಕಾಮಗಾರಿ ವಿಳಂಬವಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Share this article