ಕ್ರಿಕೆಟ್ ಅಲ್ಲದ ಕ್ರಿಕೆಟ್ : ಬಾರ್ಲಿ ಹೊಲಗಳಲ್ಲಿ ರೈತಾಪಿ ಮಂದಿ ಆಡುತ್ತಿದ್ದ ಸೋಮಾರಿ ಆಟ

Sujatha NR | Published : Jun 8, 2025 11:56 AM

ಇಂಗ್ಲೆಂಡಿನ ಬಾರ್ಲಿ ಹೊಲಗಳಲ್ಲಿ ಸುಗ್ಗಿಯ ನಂತರ ರೈತಾಪಿ ಮಂದಿ ಆಡುತ್ತಿದ್ದ ಸೋಮಾರಿ ಆಟ ಕ್ರಿಕೆಟ್ ಕ್ರಮೇಣ ಜಗತ್ತನ್ನೇ ಆವರಿಸಿಕೊಂಡಿತು

 - ಕೆ. ಸತ್ಯನಾರಾಯಣ

ಇಂಗ್ಲೆಂಡಿನ ಬಾರ್ಲಿ ಹೊಲಗಳಲ್ಲಿ ಸುಗ್ಗಿಯ ನಂತರ ರೈತಾಪಿ ಮಂದಿ ಆಡುತ್ತಿದ್ದ ಸೋಮಾರಿ ಆಟ ಕ್ರಿಕೆಟ್ ಕ್ರಮೇಣ ಜಗತ್ತನ್ನೇ ಆವರಿಸಿಕೊಂಡಿತು. ಕ್ರಿಕೆಟ್ ರೂಪ ಬದಲಿಸಿಕೊಂಡಿತು. ನಿಯಮ ಬದಲಾಯಿತು. ಸೌಜನ್ಯ ಕಳಕೊಂಡಿತು. ಈಗ ಅದು ಕಾರ್ಪೊರೆಟ್ ಜಗತ್ತಿನ ಕೈಯಲ್ಲಿದೆ. ಫುಟ್‌ಬಾಲ್ ಹದಿಹರೆಯದ ಜೀವಂತಿಕೆ ಮತ್ತು ಹುಮ್ಮಸ್ಸಿನ ಸಂಕೇತವಾದರೆ, ಕ್ರಿಕೆಟ್ ಐಷಾರಾಮ, ದೇಶಪ್ರೇಮ, ವ್ಯಕ್ತಿಪೂಜೆ, ಸಂಪಾದನೆ ಎಲ್ಲವನ್ನೂ ಮೈಗೂಡಿಸಿಕೊಂಡು ಈಗಿರುವ ಸ್ವರೂಪ ಪಡಕೊಂಡಿದೆ.  ಹಣದ ಹಿಂದೆ ಬಿದ್ದ ಎಲ್ಲದರಲ್ಲೂ ಇರುವ ಕ್ರೌರ್ಯ ಈಗ ಕ್ರಿಕೆಟ್‌ನಕನಲ್ಲೂ ಇದೆ

80ರ ದಶಕದ ತನಕ ಕ್ರಿಕೆಟ್ ಪಟ್ಟಣವಾಸಿಗಳ, ಇಂಗ್ಲಿಷ್ ಬಲ್ಲವರ, ಹೆಚ್ಚು ಕಡಮೆ ಮೇಲು ಮಧ್ಯಮ ವರ್ಗದವರ ಆಸಕ್ತಿಯ ಸಂಗತಿಯಾಗಿತ್ತು. ದೂರದರ್ಶನಕ್ಕೆ ಮತ್ತು ಇತರ ಚಾನಲ್‌ಗಳಿಗೆ ತಮ್ಮ ಜನಪ್ರಿಯತೆ ಮತ್ತು ವಿಸ್ತಾರವನ್ನು ಬೆಳೆಸಿಕೊಳ್ಳಲು ಸಿನಿಮಾದಷ್ಟೆ ನೆರವಿಗೆ ಬಂದದ್ದು ಕ್ರಿಕೆಟ್. ಟೆಲಿವಿಷನ್ ಕ್ರಿಕೆಟನ್ನು ಜನಪ್ರಿಯಗೊಳಿಸಿತು ಮಾತ್ರವಲ್ಲ, ಹೊಸದಾದ, ಬಹು ವಿಸ್ತಾರವಾದ ಪ್ರೇಕ್ಷಕವರ್ಗ ಮತ್ತು ಅಭಿಮಾನಿ ವೃಂದವನ್ನು ಸೃಷ್ಟಿಸಿತು.

 ಪ್ರಜಾತಂತ್ರ ಮತ್ತು ಸಮಾನತೆಯಲ್ಲಿ ಆಸಕ್ತಿಯಿರುವವರೆಲ್ಲ ಈ ವಿದ್ಯಮಾನವನ್ನು ಕ್ರಿಕೆಟ್‌ನ ಪ್ರಜಾತಂತ್ರೀಕರಣ ಮತ್ತು ಅಪವರ್ಗೀಕರಣ ಎಂದು ಸ್ವಾಗತಿಸಿದರು. ಕ್ರಿಕೆಟ್‌ ಅನ್ನು ಎಂದೂ ಆಡದ, ಅದರ ಬಗ್ಗೆ ಹೆಚ್ಚು ತಿಳುವಳಿಕೆಯಿಲ್ಲದವರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿದ್ದ ಹೊಸ ಪ್ರೇಕ್ಷಕ ವರ್ಗ ಕ್ರಿಕೆಟ್ ಬಗ್ಗೆ ಇಟ್ಟುಕೊಂಡ ನಿರೀಕ್ಷೆಗಳು, ಸಹಜವಾಗಿಯೇ ಬೇರೆಯಾಗಿದ್ದವು. ದಿಢೀರ್ ಫಲಿತಾಂಶ, ಜನರಂಜಕತೆ, ಪ್ರದರ್ಶನಪ್ರಿಯತೆ, ಶಕ್ತಿ ಪ್ರದರ್ಶನ, ಕ್ಷಿಪ್ರಗತಿಯ ಆಟ- ಈ ಅಂಶಗಳನ್ನು ಆಧರಿಸಿದ ಒಂದು ದಿನದ ಕ್ರಿಕೆಟ್ ಪಂದ್ಯಗಳು, ಸಾಂಪ್ರದಾಯಿಕ ಕ್ರಿಕೆಟನ್ನು ವಿಶೇಷವಾಗಿ ಟೆಸ್ಟ್ ಪಂದ್ಯಗಳನ್ನು ಹಿಂಬದಿಗೆ ತಳ್ಳಿದ್ದಾಯಿತು. ಎಷ್ಟರ ಮಟ್ಟಿಗೆಂದರೆ ಟೆಸ್ಟ್ ಆಟಗಾರರಿಗೆ ಬೇಕಾದ ಸಾವಧಾನ, ತಾಳ್ಮೆ, ಮನೋಸ್ಥೆಯ, ತಾಂತ್ರಿಕ ಪರಿಣಿತಿ ಹೊಂದಿದ ರಾಹುಲ್ ದ್ರಾವಿಡ್‌ರಂತಹ ಆಟಗಾರರ ಶೈಲಿಯನ್ನು ಜನ ಇಂದು ಒಪ್ಪುವುದೇ ಕಷ್ಟವಾಗಿದೆ. ಕ್ರಿಕೆಟ್ ಜನಪ್ರಿಯತೆ ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ, ಜನ ಜಾತ್ರೆಗಳಿಗೆ, ಇಡೀ ರಾತ್ರಿಯ ಬಯಲು ನಾಟಕಗಳಿಗೆ, ಯಕ್ಷಗಾನಗಳಿಗೆ ಹೋಗುವಷ್ಟೇ ಸಂಭ್ರಮದಿಂದ, ಗುಂಪು ಗುಂಪಾಗಿ ಊಟ ತಿಂಡಿ ಕಟ್ಟಿಕೊಂಡು ಆಕರ್ಷಕ ದಿರಿಸಿನಲ್ಲಿ ಗಂಟೆ ಜಾಗಟೆಗಳ ಸಮೇತ ಮೈದಾನಗಳಿಗೆ ಬರಲಾರಂಭಿಸಿದರು. 

ಮೈದಾನಗಳಿಗೆ ಬರಲು ಸಾಧ್ಯವಿಲ್ಲದವರು ಮನೆಯಲ್ಲೇ ಸಂಭ್ರಮದ ಭಾವೋದ್ವೇಗದ ವಾತಾವರಣವನ್ನು ನಿರ್ಮಾಣ ಮಾಡಿಕೊಳ್ಳಲು ಪ್ರಯತ್ನಿಸಿದರು. ತಮ್ಮ ಮೆಚ್ಚಿನ ಆಟಗಾರರು, ತಾವು ಬೆಂಬಲಿಸುವ ತಂಡ ತಮ್ಮ ದೇಶದ ತಂಡ ಮಾತ್ರ ಸದಾ ಗೆಲ್ಲಬೇಕು, ತಾವು ಬಯಸುವಂತೆಯೇ ಆಡಬೇಕು, ತಮ್ಮ ಅಂತರಂಗದ ಬಯಕೆಗಳನ್ನೆಲ್ಲ ಚೂರೂ ತಪ್ಪದೆ ಪೂರೈಸಬೇಕು ಎಂಬ ಭಾವನೆ ತೀವ್ರವಾಗತೊಡಗಿತು. ಸೋಲೆಂದರೆ ಆಟದ, ಸ್ಪರ್ಧೆಯ ಒಂದು ಸಹಜ ಸಾಧ್ಯತೆ ಅನ್ನುವುದಕ್ಕಿಂತ ಹೆಚ್ಚಾಗಿ ವೈಯಕ್ತಿಕ, ರಾಷ್ಟ್ರೀಯ ಅಪಮಾನ, ಅವಹೇಳನ ಎಂದು ಸೋಲನ್ನು ಭಾವಿಸುವ ಹೊಸ ಪ್ರೇಕ್ಷಕವರ್ಗ ಸೃಷ್ಟಿಯಾಯಿತು.

 ತಮ್ಮ ಸ್ವರತಿ ಪ್ರದರ್ಶನಕ್ಕೆ ಅಂದು ಗವಾಸ್ಕರ್, ಚಂದ್ರಶೇಖರ್‌ರನ್ನು, ತೆಂಡೂಲ್ಕರ್‌ರನ್ನು ಇಂದು ಕೋಹ್ಲಿ, ಧೋನಿ ಮುಂತಾದವರನ್ನು ಉಪಯೋಗಿಸುವ ಇಂತಹ ಪ್ರೇಕ್ಷಕ ವರ್ಗವನ್ನು ಕವಿ ಗೋಪಾಲಕೃಷ್ಣ ಅಡಿಗರು ಬಹು ಹಿಂದೆಯೇ ‘ಮೂಲಕ ಮಹಾಶಯರು’ ಎಂದು ಕರೆದು ಕವನ ಬರೆದಿದ್ದರು. ಕ್ರಿಕೆಟ್‌ನ ಈ ರೀತಿಯ ಜನಪ್ರಿಯತೆ ಹೊಸ ಆಟಗಾರರನ್ನು ಸತತವಾಗಿ ಸೃಷ್ಟಿಸಿತೇ, ಇರುವ ಆಟಗಾರರು ಪಕ್ವವಾಗುತ್ತಾ ಮಾಗಿದರೇ ಎಂದರೆ ಇಲ್ಲವೆಂದೇ ಉತ್ತರಿಸಬೇಕು. ಕ್ರಿಕೆಟ್ ಬಗ್ಗೆ ಈಗ ಇರುವ ಆಸಕ್ತಿಯೆಲ್ಲ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಮತ್ತು ಒಂದು ದಿನದ ಆಟಕ್ಕೆ ಹಾಗೂ ಸೀಮಿತ ಓವರ್‌ಗಳ ಟಿ-20ಯಂತಹ ಪಂದ್ಯಗಳಿಗೆ ಮಾತ್ರ ಮೀಸಲಾಗಿದೆ. 

ರಾಜ್ಯ-ರಾಜ್ಯ, ವಲಯ-ವಲಯಗಳ ನಡುವೆ ನಡೆಯುವ ಎಷ್ಟೋ ಪಂದ್ಯಗಳು ಕೂಡ ಅಂತಾರಾಷ್ಟ್ರೀಯ ಪಂದ್ಯಗಳಷ್ಟೇ ತೀವ್ರವಾಗಿದ್ದರೂ ಪ್ರೇಕ್ಷಕರಾಗಲೀ, ಟೆಲಿವಿಷನ್‌ನವರಾಗಲೀ ಪ್ರೋತ್ಸಾಹಿಸುವುದಿಲ್ಲ. ಜಾಹೀರಾತುದಾರರು ಇಂತಹ ಪಂದ್ಯಗಳ ಬಗ್ಗೆ ಆಕರ್ಷಣೆಯನ್ನು ಹುಟ್ಟು ಹಾಕುವುದಿಲ್ಲ. ಕ್ರಿಕೆಟ್ ಆಡಳಿತಗಾರರ ದೃಷ್ಟಿಯಲ್ಲೂ ಈ ಸ್ತರದ ಪಂದ್ಯಗಳಿಗೆ ಆದ್ಯತೆಯಿಲ್ಲ. ಸ್ಕೂಲುಗಳು, ಕ್ಲಬ್‌ಗಳು, ವಿಶ್ವವಿದ್ಯಾಲಯಗಳು, ಲೀಗ್‌ಗಳ ನಡುವೆ ನಡೆಯುವ ಪಂದ್ಯಗಳೇ ಹೊಸ ಆಟಗಾರರಿಗೆ ತರಬೇತಿ ಕೇಂದ್ರಗಳು. 

ಈ ಸ್ತರದ ಪಂದ್ಯಗಳ ಬಗ್ಗೆ ಆಸಕ್ತಿ ತೋರುವ ತನಕ ಸತತವಾಗಿ ಹೊಸ ಆಟಗಾರರು ಮೂಡಿ ಬರುವುದು ಕಷ್ಟ. ಮೂಡಿ ಬಂದರೂ ಈಗ ಆಗುತ್ತಿರುವ ಹಾಗೆ ದೇಶದ ತಂಡದಲ್ಲಿ ಬಹುದಿನ ಉಳಿಯಲಾರರು. ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಸಾರ್ವಭೌಮತ್ವದ ಗುಟ್ಟೆಂದರೆ ಆ ದೇಶದಲ್ಲಿ ಸ್ಥಳೀಯ ಕ್ರಿಕೆಟ್‌ಗೆ, ಷೆಫೀಲ್ಡ್ ಕಪ್ ಪಂದ್ಯಗಳಿಗೆ ಇರುವ ನಿರಂತರವಾದ ಪ್ರೋತ್ಸಾಹ ಮತ್ತು ಆಡಳಿತವರ್ಗ ನೀಡುವ ಆದ್ಯತೆ. ಹೀಗಾಗಿ ಉನ್ನತ ಗುಣಮಟ್ಟದ ಹೊಸ ಹೊಸ ಆಟಗಾರರು ಮೂಡಿಬರುವ ಜೊತೆಗೆ, ದೇಶದ ತಂಡದಲ್ಲಿ ಉಳಿಯಲು ಕೂಡ ತೀವ್ರವಾದ ಸ್ಪರ್ಧೆಯಿದೆ.

 ಆಸ್ಟ್ರೇಲಿಯಾದಲ್ಲಿ ತಂಡ ಮುಖ್ಯವೇ ಹೊರತು ಯಾವುದೇ ಒಬ್ಬ ಆಟಗಾರನಲ್ಲ. 

ನಮ್ಮ ರಾಜಕೀಯ ಕ್ಷೇತ್ರದಲ್ಲಿ ಸಾರ್ವಜನಿಕ ಬದುಕಿನಲ್ಲಿ ಆಗಿರುವಂತೆ ನಾವು ಯಾವಾಗಲೂ ಕ್ರಿಕೆಟ್‌ನಲ್ಲೂ ಕೂಡ ಒಬ್ಬನೇ ಒಬ್ಬ ಆಟಗಾರ ಅಥವಾ ಕೆಲವೇ ಕೆಲವು ಆಟಗಾರರಿಂದ ಸಕಲವನ್ನೂ ನಿರೀಕ್ಷಿಸುತ್ತೇವೆ. ಇಂತಹ ಅವತಾರ ಪುರುಷ ಆಪದ್ಭಾಂಧವ, ಜಗತ್ ರಕ್ಷಕನಾಗಬೇಕೆಂದು ಬಯಸುತ್ತೇವೆ. ಹನ್ನೊಂದು ಜನರಿರುವ ತಂಡದಲ್ಲಿ ಒಬ್ಬನೇ ಒಬ್ಬ ಬ್ಯಾಟ್ಸ್‌ಮನ್ ಅಥವಾ ಬೌಲರ್ ಮಾಂತ್ರಿಕನಂತೆ, ಜಾದೂಗಾರನಂತೆ ಎಂದೂ ಸೋಲದೆ, ಎಡವದೆ, ವೀರಾಧಿವೀರನಂತೆ ಆಡುತ್ತಾ ಹೋಗಬೇಕೆಂದು ಬಯಸುತ್ತೇವೆ. ಇಂತಹ ಭಾವನಾತ್ಮಕ ಬಯಕೆ ಎಲ್ಲ ಆಟಗಾರರ ಆಟದಲ್ಲೂ ಸಹಜವಾಗಿಯೇ ಇರುವ ಏರಿಳಿತಗಳನ್ನು ಏಳುಬೀಳುಗಳ ಸರಾಸರಿ ವರ್ತನೆಯನ್ನು ಗಾಳಿಗೆ ತೂರುತ್ತದೆ. ಆಟಗಾರರ ಮೇಲೆ ಇನ್ನಿಲ್ಲದ ನಿರೀಕ್ಷೆಯ ಭಾರ ಹಾಕಿ ಅವರ ಸಹಜಶಕ್ತಿ ಶೈಲಿಯನ್ನು ಮಸುಕುಗೊಳಿಸುತ್ತದೆ, ತಂಡದ ಬೆಳವಣಿಗೆಗೆ ಭವಿಷ್ಯಕ್ಕೆ ಮಾರಕವಾಗುತ್ತದೆ. 

ಕ್ರಿಕೆಟ್ ಪಡೆದ ಹೊಸ ರೀತಿಯ ಜನಪ್ರಿಯತೆ ಕ್ರಿಕೆಟನ್ನು ದೊಡ್ಡ ಹಣದ ದಂಧೆಯನ್ನಾಗಿ ಪರಿವರ್ತಿಸಿತು. ಜಾಹೀರಾತುದಾರರು, ದೊಡ್ಡ ದೊಡ್ಡ ಉದ್ದಿಮೆದಾರರು, ಬಹುರಾಷ್ಟ್ರೀಯ ಕಂಪನಿಗಳ ಮಾಲೀಕರು ಪ್ರಾಯೋಜಕರಾಗಿ ಮುಂದೆ ಬಂದರು. ಇವರಿಗೆ ಕ್ರಿಕೆಟ್‌ನ ಜನಪ್ರಿಯತೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯ ಜೊತೆಗೆ ಜನಪ್ರಿಯತೆ ಉಳಿಯಬೇಕಾದರೆ ಅಗತ್ಯವಾದ ನಿರ್ದಿಷ್ಟ ಶೈಲಿಯ ಆಟವನ್ನು ಮಾತ್ರ ಪ್ರೋತ್ಸಾಹಿಸುವುದು ಅನಿವಾರ್ಯವಾಯಿತು. ಈ ಶೈಲಿಯಲ್ಲಿ ಜನರಂಜಕತೆ, ಪ್ರದರ್ಶನ ಪ್ರಿಯತೆಗೇ ಅಗ್ರಸ್ಥಾನ. ಈ ಹೊಸ ಶೈಲಿಯ ಇನ್ನೊಂದು ಲಕ್ಷಣವೆಂದರೆ ಆಟಗಾರರು ವೇತನದಾರರಂತೆ, ಆಟವನ್ನು ವಿರಾಮವಿಲ್ಲದೆ ಸತತವಾಗಿ ಆಡುತ್ತಾ ಹೋಗಬೇಕಾಯಿತು. 

ವರ್ಷದುದ್ದಕ್ಕೂ ಪಂದ್ಯ, ಪ್ರವಾಸಗಳು. ಕ್ರೀಡಾಪಟುಗಳಿಗೆ ಬೇಕಾದ, ಕಲಾವಿದರಿಗೆ ಅಗತ್ಯವಾದ ವಿಶ್ರಾಂತಿ, ಆತ್ಮಾವಲೋಕನಕ್ಕೆ ಸಮಯವೇ ಇಲ್ಲದಾಯಿತು. ಹಣವು ಬೃಹತ್‌ ಪ್ರಮಾಣದಲ್ಲಿ ಕ್ರಿಕೆಟನ್ನು ನಿಯಂತ್ರಿಸತೊಡಗಿದ್ದರಿಂದ ಕ್ರಿಕೆಟ್ ಸಂಸ್ಥೆಗಳ ಆಡಳಿತಗಾರರ ಸ್ವರೂಪ ಕೂಡ ಬದಲಾಯಿತು. ಹಣ ಮತ್ತು ಜನಪ್ರಿಯತೆಯಿಂದ ದತ್ತವಾದ ಪ್ರಭಾವದಿಂದಾಗಿ ಕ್ರಿಕೆಟ್ ಮಂಡಳಿಗಳು ಅಧಿಕಾರ-ಶಕ್ತಿ ರಾಜಕಾರಣದ ಕೇಂದ್ರಗಳಾಗಿ ಪರಿವರ್ತನೆಗೊಂಡವು. ಆಟಗಾರರು ಹಾಗೂ ಆಟದ ಬಗ್ಗೆ ಒಲವಿರುವವರಿಗಿಂತ ಹೆಚ್ಚಾಗಿ ಉದ್ದಿಮೆದಾರರು, ರಾಜಕಾರಣಿಗಳು, ನೌಕರಶಾಹಿಯ ಮಂದಿ ಮಂಡಳಿಗಳನ್ನು ಅಲಂಕರಿಸಿದರು.

 ಇದು ಸಮಸ್ಯೆಯ ಒಂದು ಮುಖವಾದರೆ ಹಿಂದೆ ರಾಜ ಮಹಾರಾಜರು ತಮ್ಮ ಖುಷಿಗೆ, ಸಂಪತ್ತಿನ ಅಧಿಕಾರದ ಪ್ರದರ್ಶನಕ್ಕೆ ಕತ್ತಿವರಸೆ, ಕುಸ್ತಿ ಪಂದ್ಯ, ನೃತ್ಯಗಳನ್ನು ಏರ್ಪಡಿಸುತ್ತಿದ್ದಂತೆ ಅರಬ್ ದೇಶಗಳಲ್ಲಿ ಕ್ರಿಕೆಟ್ ಆಟ ಬಳಕೆಯಿಲ್ಲದೇಯಿದ್ದರೂ ಆ ದೇಶದ ತೈಲ ದೊರೆಗಳು ಪಂದ್ಯಾವಳಿಗಳನ್ನು ಏರ್ಪಡಿಸಿ, ಹಿಂದಿನ ಕಾಲದ ರಾಜನರ್ತಕಿಯರು, ನಾಯಕಸಾನಿಯರಿಗೆ ಬದಲಾಗಿ ಸಿನಿಮಾ ತಾರೆಯರನ್ನು ಮಾಡೆಲ್‌ಗಳನ್ನು ಖುಷಿ ಕನ್ಯೆಯರನ್ನಾಗಿ ಕರೆಸಲು ಪ್ರಾರಂಭಿಸಿದರು. ದೊಡ್ಡ ಹಣದ ಪ್ರವೇಶದಿಂದಾದ ಒಂದೇ ಒಂದು ಲಾಭವೆಂದರೆ ಇದರಲ್ಲಿ ಸ್ವಲ್ಪ ಪಾಲು ಆಟಗಾರರಿಗೂ ದೊರಕಿದ್ದು, ಈ ಸ್ವಲ್ಪ ಪಾಲು ಕೂಡ ತುಂಬಾ ದೊಡ್ಡ ಮೊತ್ತವೇ. ಈಗಿನ ಪರಿಸ್ಥಿತಿಗೆ ಹೋಲಿಸಿದರೆ ಬಾಡಿಗೆ ಸೈಕಲ್‌ನಲ್ಲಿ ಬಂದು ರಣಜಿ ಪಂದ್ಯಗಳನ್ನಾಡುತ್ತಿದ್ದ ಚಂದ್ರಶೇಖರ್ ಅಂತಹವರು ಯಾವುದೋ ಕಾಲದ ಪುರಾಣದ ಪಾತ್ರಗಳಂತೆ ಕಾಣುತ್ತಾರೆ.

 ಇರಲಿ, ಕ್ರಿಕೆಟ್‌ನ ಹೊಸ ಹಣ- ಜನಪ್ರಿಯತೆಗನುಗುಣವಾಗಿ ಆಟಗಾರರೆಲ್ಲ ಜಾಹಿರಾತು ಲೋಕಕ್ಕೆ ಬೇಕಾದ ಹೊಸ ತಾರೆಗಳಾಗಬೇಕಾಯಿತು. ಬಿಸ್ಕಟ್, ಬ್ಲಡ್, ಸೈಕಲ್, ತಂಪುಪಾನೀಯ, ಕಾರಿನ ಟೈರ್- ಹೀಗೆ ಯಾವುದೇ ಕ್ರೀಡೆಗೆ, ಯಾವುದೇ ರೀತಿಯ ಸಂಬಂಧವಿಲ್ಲದ ವಸ್ತುಗಳಿಗೆಲ್ಲ ಕ್ರಿಕೆಟಿಗರ ಜನಪ್ರಿಯತೆಯನ್ನು ಬಳಸಿಕೊಳ್ಳಲಾಗುತ್ತಿದೆ. ಈ ಹೊಸ ಕ್ರಿಕೆಟ್ ಶೈಲಿ ಹೊಸ ರೀತಿಯ ವ್ಯಾಖ್ಯಾನಕಾರರನ್ನು ಕೂಡ ಸೃಷ್ಟಿಸಿತು. 

ಕ್ರಿಕೆಟ್ ಬಗ್ಗೆ ಮನಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು, ಪತ್ರಕರ್ತರು ಬರೆಯತೊಡಗಿ ಆಟದ ವಿವರ-ವಿಶೇಷಗಳಿಗಿಂತ ಹೆಚ್ಚಾಗಿ ಆಟದ ಸುತ್ತಮುತ್ತ ಇರುವ ಇರಬಹುದಾದ ರಂಜಕ ಸಂಗತಿಗಳ ಬಗ್ಗೆ ವ್ಯಾಖ್ಯಾನಿಸಿದರು. ಆಟಗಾರನ ಆಟಕ್ಕಿಂತ ಅವರ ಸಾಮಾಜಿಕ ಹಿನ್ನೆಲೆ, ಜಾತಿ ಇತ್ಯಾದಿ ಮುಖ್ಯವಾಯಿತು. ಕ್ರಿಕೆಟ್ ಈಗಿರುವ ಶೈಲಿಯಲ್ಲೇ ಹೇಗೆ ರಾಷ್ಟ್ರ ಜೀವನದ ಅಂಗವಾಗಿ ಹಾಸುಹೊಕ್ಕಾಗಿದೆ ಎಂದು ಬರೆದರು. ಕ್ರಿಕೆಟ್ ಪಡೆದಿರುವ ಅಗಾಧ ಜನಪ್ರಿಯತೆ, ಸಮೂಹಸನ್ನಿಯೆಲ್ಲ ನಮ್ಮ ಕ್ರಿಕೆಟ್‌ನ ವೈಶಿಷ್ಟ್ಯ ವೆಂದೇ ವರ್ಣಿಸಿ ಕ್ರಿಕೆಟ್ ಆಟವನ್ನು ಒಂದು ದಂತಕತೆ, ಜನಪ್ರಿಯ ಆಚರಣೆಯ ಮಟ್ಟಕ್ಕೆ ಏರಿಸಿದರು/ಇಳಿಸಿದರು. 

ಇಂತಹ ವ್ಯಾಖ್ಯಾನಗಳ ಮೂಲಕ ಈ ದೇಶದಲ್ಲಿ ಏಕಮಾತ್ರ ಕ್ರೀಡೆ ಅಂದರೆ ಕ್ರಿಕೆಟ್ ಮಾತ್ರವೇ ಎಂಬಂತಹ ಮನೋಧರ್ಮವನ್ನು ಬೆಳೆಸಲು ಕಾರಣರಾದರು. ಆದರೆ ಕ್ರಮೇಣ ಕಂಡುಬಂದ ಒಂದು ಆತಂಕಕಾರಿ ವಿದ್ಯಮಾನವೆಂದರೆ ಕ್ರಿಕೆಟ್ ರಾಷ್ಟ್ರೀಯತೆಯ, ದೇಶಪ್ರೇಮದ ಉನ್ನತವಾಹಕವಾಗಿ, ಅಭಿವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿರುವುದು. ಕ್ರಿಕೆಟನ್ನು ಪ್ರೀತಿಸುವುದು, ಎಲ್ಲ ಪಂದ್ಯಗಳಲ್ಲೂ ನಮ್ಮ ದೇಶವೇ ಯಾವಾಗಲೂ ಗೆಲ್ಲಬೇಕೆಂದು ಬಯಸುವುದು, ಎದುರಾಳಿಗಳ ಉತ್ತಮ ಆಟವನ್ನು ಒಪ್ಪಲು, ಗೌರವಿಸಲು ನಿರಾಕರಿಸುವುದು, ಪಾಕಿಸ್ತಾನದ ವಿರುದ್ಧ ನಡೆಯುವ ಎಲ್ಲ ಪಂದ್ಯಗಳ ಸಂದರ್ಭದಲ್ಲೂ ಮಾಧ್ಯಮದವರು ಸೃಷ್ಟಿಸುವ ಉದ್ರಿಕ್ತ- ಉನ್ಮತ್ತ ವಾತಾವರಣದಲ್ಲಿ ಭಾಗವಹಿಸುವುದು ಪ್ರತಿಯೊಬ್ಬ ದೇಶಪ್ರೇಮಿಗೂ ಅನಿವಾರ್ಯವೆನ್ನುವಂತಹ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. 

ಕ್ರಿಕೆಟ್ ಬಗ್ಗೆ ಕುಟುಂಬದ ಒಳಗಡೆ, ಸ್ನೇಹಿತರ ನಡುವೆ, ಮಾಧ್ಯಮದಲ್ಲಿ ಚರ್ಚಿಸಲು ಬಳಸುವ ಪರಿಭಾಷೆಯಲ್ಲಿ ಹಿಂಸೆ, ಆತಂಕ ತುಂಬಿಕೊಂಡಿದೆ. ಈ ಭಾಷೆ, ನುಡಿಕಟ್ಟು, ನಮ್ಮ ರಾಜಕೀಯ-ಸಾಂಸ್ಕೃತಿಕ ಕ್ಷೇತ್ರದಲ್ಲಿ ಬಳಕೆಯಾಗುತ್ತಿರುವ ಹಿಂಸಾರತಿಯ, ಶಕ್ತಿಪ್ರದರ್ಶನದ ಭಾಷೆ, ನುಡಿಕಟ್ಟಿಗಿಂತ ಬೇರಲ್ಲ, ಅದೇ ಹಿಂಸೆ, ಅದೇ ತಿರಸ್ಕಾರ, ಅದೇ ಅಸಹನೆ. ಅದೇ ಅಹಂಕಾರದ, ಅದೇ ಉಗ್ರ ರಾಷ್ಟ್ರೀಯತೆಯ ಪ್ರದರ್ಶನ. ನಮ್ಮ ದೇಶ, ನಮ್ಮ ಆಟಗಾರರು ಗೆಲ್ಲಬೇಕು, ಚೆನ್ನಾಗಿ ಆಡಬೇಕೆಂದು ನಿರೀಕ್ಷಿಸುವುದು ಸಹಜ, ಸಕಾರಣವಾದದ್ದು.

 ಆದರೆ ಈಗಿರುವ ರೀತಿಯ ಕ್ರಿಕೆಟ್ ಪ್ರೀತಿಯೇ ಕ್ರೀಡಾಪ್ರೇಮದ, ದೇಶಪ್ರೇಮದ ಅಳತೆಗೋಲಾಗಬಾರದು. ಹಾಗಾಗುವುದರಿಂದ ದೇಶಪ್ರೇಮಕ್ಕೂ ಅಪಾಯ. ಕ್ರಿಕೆಟ್‌ಗೂ ಆತಂಕ. ಕೊನೆಗೂ ಆಟ, ಆಟವೇ. ಅದಕ್ಕೆ ನಾವು ನಮ್ಮೆಲ್ಲ ಸಾಂಸ್ಕೃತಿಕ- ರಾಜಕೀಯ ಅಭೀಪ್ಸೆಗಳನ್ನು ಹೇರಬಾರದು. ಕ್ರೀಡಾ ವಿಶ್ಲೇಷಣೆಗೆಂದೇ ಭಿನ್ನವಾದ ಭಾಷೆ- ನುಡಿಗಟ್ಟು ಇದೆ ಎಂಬುದನ್ನು ನೆನಪಿಸಿಕೊಳ್ಳುವುದು ಒಳ್ಳೆಯದು. ಹಿಂದೆ ರೇಡಿಯೋದಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದ ಜಾನ್ ಆಪ್ಲಾಟ್, ಫಿಂಗಲ್‌ಟನ್, ಪಿಯರ್‌ಸನ್ ಸುರಿತಾ, ಮದ್ರಾಸ್ ಅನಂದರಾವ್, ಚಕ್ರಪಾಣಿ- ಇಂತಹವರೆಲ್ಲ ಕ್ರಿಕೆಟ್‌ಗೆ ವಿಶೇಷವಾದ ಭಾಷೆ- ನುಡಿಕಟ್ಟು -ವರ್ಣನಾಶೈಲಿಯನ್ನು ರೂಢಿಸಿಕೊಂಡಿದ್ದವರೇ ತಾನೇ. 

ಇಷ್ಟೆಲ್ಲಾ ಹೇಳಿದ ಮೇಲೂ ನಮ್ಮ ದೇಶದ ರಾಜಕೀಯ- ಧರ್ಮಗಳಿಗೆ ಹೋಲಿಸಿದರೆ, ಜನರನ್ನು ಒಂದಾಗಿ ಬೆಸೆಯಬಲ್ಲ ಶಕ್ತಿ- ತಾತ್ಕಾಲಿಕವಾಗಿಯಾದರೂ ಸರಿಯೇ- ಕ್ರಿಕೆಟ್‌ಗೆ ಮಾತ್ರ ಇದೆ ಎಂಬುದನ್ನು ಮರೆಯುವ ಹಾಗಿಲ್ಲ. ಸಾಂಸ್ಕೃತಿಕ-ರಾಜಕೀಯ ಕ್ಷೇತ್ರದಲ್ಲಿ ಜನರನ್ನು ಒಂದಾಗಿ ಬೆಸೆಯಬಲ್ಲ. ಹುರುಪುಗೊಳಿಸಬಲ್ಲ ನಾಯಕರುಗಳು ಇಲ್ಲದಿರುವುದರಿಂದಲೇ ಆ ಕ್ಷೇತ್ರದ ಬಗ್ಗೆ ನಮಗಿರುವ ಅಗತ್ಯ-ಅಭೀಪ್ಸೆಗಳನ್ನು ಕೂಡ ಕ್ರಿಕೆಟ್ ಮೂಲಕವೇ ಪೂರೈಸಿಕೊಳ್ಳಬೇಕಾದ ಸಾಂಸ್ಕೃತಿಕ ನಿರ್ವಾತದ ಸ್ಥಿತಿಯಲ್ಲಿ ನಾವಿಂದು ಬದುಕುತ್ತಿದ್ದೇವೆ.

Read more Articles on