ಹಲಗೂರು: ಕುಡಿದ ಮತ್ತಿನಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ನಿಟ್ಟೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಿವಣ್ಣ ಅವರ ಪುತ್ರ ಆನಂದ (33) ಸಾವನ್ನಪ್ಪಿದ ದುರ್ದೈವಿ. ಕೂಲಿ ಕೆಲಸ ಮಾಡುತ್ತಿದ್ದ ಆನಂದ ಕುಡಿತದ ದಾಸನಾಗಿದ್ದನು. ಕಳೆದ ಎರಡು ದಿನಗಳ ಹಿಂದೆ ಕುಡಿದ ಮತ್ತಿನಲ್ಲಿ ಮದ್ಯ ಪಾನ ಮಾಡಲು ಹಣ ಕೊಡುವಂತೆ ಮನೆಯವರನ್ನು ಪೀಡಿಸುತ್ತಿದ್ದನು. ಮನೆಯವರು ಹಣ ಕೊಡಲು ನಿರಾಕರಿಸಿದ್ದರಿಂದ ಸೀಮೆಎಣ್ಣೆ ಸುರಿದುಕೊಂಡು ಸಾಯುತ್ತೇನೆ ಎಂದು ಮನೆಯವರನ್ನು ಎದುರಿಸಲು ಹೋಗಿ ಬೆಂಕಿ ಹಚ್ಚಿ ಕೊಂಡಿದ್ದಾನೆ. ಇದರ ಪರಿಣಾಮ ಆನಂದನ ದೇಹ ಪರಿಣಾಮವಾಗಿ ಸುಟ್ಟು ಹೋಗಿದ್ದು ತಕ್ಷಣ ಈತನಿಗೆ ಹಲಗೂರು ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಮಂಡ್ಯ ಜಿಲ್ಲಾ ಆಸ್ಪತ್ರೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಎಸ್ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾನೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ---- ಇಂದು ಜನತಾ ದರ್ಶನ ಕಾರ್ಯಕ್ರಮ ಕೆ.ಆರ್.ಪೇಟೆ: ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ನ.4 ರಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜನತಾದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ತಾಲೂಕಿನ ರೈತರು, ಸಾರ್ವಜನಿಕರು ಕಂದಾಯ, ಸರ್ವೆ ಸೇರಿದಂತೆ ವಿವಿಧ ಇಲಾಖೆಗಳ ಸಮಸ್ಯೆಗಳನ್ನು ಲಿಖಿತ ದೂರುಗಳ ಮೂಲಕ ಮನವಿ ಸಲ್ಲಿಸಿ ಪರಿಹಾರಗಳನ್ನು ಪಡೆಯಬಹುದು. ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಬಹುದು ಎಂದು ತಹಸೀಲ್ದಾರ್ ನಿಸರ್ಗಪ್ರಿಯ ತಿಳಿಸಿದ್ದಾರೆ. ಶಾಸಕ ಹೆಚ್.ಟಿ.ಮಂಜು ಜನತಾದರ್ಶನದಲ್ಲಿ ಭಾಗವಹಿಸಲಿದ್ದು ರೈತರು, ಸಾರ್ವಜನಿಕರು ತಮ್ಮ ಜಮೀನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.