ಯುಗಾದಿ ಸಂಭ್ರಮಕ್ಕೆ ರಾಜಧಾನಿ ಸಜ್ಜು : ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಜೋರು

KannadaprabhaNewsNetwork | Updated : Mar 30 2025, 05:06 AM IST

ಸಾರಾಂಶ

ಹೊಸ ವರ್ಷ ಯುಗಾದಿಯನ್ನು ಸಂಭ್ರಮದಿಂದ ಸ್ವಾಗತಿಸಲು ಸಿಲಿಕಾನ್‌ ಸಿಟಿ ಸಜ್ಜಾಗಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯ, ಮನೆಗಳಲ್ಲಿ ಬೇವು ಬೆಲ್ಲ ವಿತರಣೆ ಆಗಲಿದೆ.   ಶನಿವಾರ ನಗರದ ಕೆ.ಆರ್‌.ಮಾರುಕಟ್ಟೆ ಸೇರಿ ಎಲ್ಲ ವ್ಯಾಪಾರಿ ಕೇಂದ್ರಗಳಲ್ಲಿ ಹಬ್ಬದ ಖರೀದಿ ಜೋರಾಗಿ ನಡೆಯಿತು.

 ಬೆಂಗಳೂರು :  ಹೊಸ ವರ್ಷ ಯುಗಾದಿಯನ್ನು ಸಂಭ್ರಮದಿಂದ ಸ್ವಾಗತಿಸಲು ಸಿಲಿಕಾನ್‌ ಸಿಟಿ ಸಜ್ಜಾಗಿದೆ. ಭಾನುವಾರ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯ, ಮನೆಗಳಲ್ಲಿ ಬೇವು ಬೆಲ್ಲ ವಿತರಣೆ ಆಗಲಿದೆ. ಬಿಸಿಲ ತೀವ್ರತೆ ನಡುವೆಯೂ ಶನಿವಾರ ನಗರದ ಕೆ.ಆರ್‌.ಮಾರುಕಟ್ಟೆ ಸೇರಿ ಎಲ್ಲ ವ್ಯಾಪಾರಿ ಕೇಂದ್ರಗಳಲ್ಲಿ ಹಬ್ಬದ ಖರೀದಿ ಜೋರಾಗಿ ನಡೆಯಿತು.

ಹೂವು, ಹಣ್ಣು ತರಕಾರಿಗಳ ಬೆಲೆ ಕೊಂಚ ಇಳಿಕೆಯಿದ್ದ ಕಾರಣ ಗ್ರಾಹಕರಿಗೆ ದುಬಾರಿ ದರದ ಚಿಂತೆ ಇರಲಿಲ್ಲ. ಶಾಲಾ ಕಾಲೇಜುಗಳಲ್ಲಿ ಈಗಾಗಲೇ ಪರೀಕ್ಷೆ ಮುಗಿದು ರಜೆ ಇರುವುದರಿಂದ ಬಹುತೇಕ ನಗರ ವಾಸಿಗಳು ತಮ್ಮ ಊರುಗಳಿಗೆ ಹಬ್ಬದ ಆಚರಣೆಗೆ ತೆರಳಿದ್ದಾರೆ. ಹಬ್ಬದ ಪ್ರಯುಕ್ತ ನಗರದ ಕೆ.ಆರ್‌.ಮಾರುಕಟ್ಟೆ, ಯಶವಂತಪುರ, ಗಾಂಧಿ ಬಝಾರ್‌, ಜಯನಗರ, ವಿಜಯನಗರ, ವೈಟ್‌ಫೀಲ್ಡ್‌ ಸೇರಿ ಎಲ್ಲೆಡೆ ಹಬ್ಬದ ಮಾರುಕಟ್ಟೆ ಕಳೆಗಟ್ಟಿತ್ತು.

ಹೂ, ಹಣ್ಣು, ತರಕಾರಿ ಬೆಳೆಯಲ್ಲಿ ಸಮಸ್ಯೆ ಇಲ್ಲದಿದ್ದರೂ, ಬಿಸಿಲಿನಿಂದಾಗಿ ಹೆಚ್ಚು ದಿನ ಉಳಿಯುತ್ತಿಲ್ಲ. ಉತ್ಪನ್ನ ಹಾಳಾದರೆ ಹಾಕಿದ ಬಂಡವಾಳವೂ ಬರುವುದಿಲ್ಲ ಎಂದು ವ್ಯಾಪಾರಸ್ಥರು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಮಾವು ಹಾಗೂ ಬೇವವಿನ ಎಲೆ ಎಂದಿನಂತೆ ₹ 20 - ₹ 30 ಇತ್ತು.

ಬಾಳೆ ಹಣ್ಣು, ಬಾಳೆ ಎಲೆಗೆ ಬೇಡಿಕೆ ಇದ್ದರೂ, ಬೆಲೆ ಇಲ್ಲದಂತಾಗಿದೆ. ಎರಡು ತಿಂಗಳ ಹಿಂದೆ ಸಗಟು ದರದಲ್ಲಿ ಕೇಜಿಗೆ ₹ 100 - ₹ 120 ಇದ್ದ ಏಲಕ್ಕಿ ಬಾಳೆ ಇದೀಗ ₹ 50- ₹ 70 ಇಳಿಕೆಯಾಗಿದೆ. ಪಚ್ಚಪಾಳೆ ಕೇಜಿಗೆ ₹20-30 ಮಾರಾಟವಾಗುತ್ತಿದೆ.

ಹೂವಿನ ದರವೂ ಇಳಿಕೆ : ಕೆ.ಆರ್.ಮಾರುಕಟ್ಟೆ ಸಗಟು ಹೂವು ಮಾರಾಟಗಾರರ ಸಂಘದ ಅಧ್ಯಕ್ಷ ದಿವಾಕರ್ ಮಾತನಾಡಿ, ಯುಗಾದಿ ಹಬ್ಬಕ್ಕೆ ಹೂವಿನ ಖರೀದಿ ಅಷ್ಟಾಗಿ ಇರಲ್ಲ. ಬೇಡಿಕೆ ಕಡಿಮೆ ಇರುವುದರಿಂದ ಸೇವಂತಿಗೆ, ಗುಲಾಬಿ, ಸುಗಂಧರಾಜ, ಚೆಂಡು ಹೂ, ರುದ್ರಾಕ್ಷಿ ಹೂ, ಕಣಗೆಲೆ ಹೂ ದರ ಕಡಿಮೆ ಇತ್ತು. ಆದರೆ, ಮಲ್ಲಿಗೆ ಹೂವಿನ ಋತು ಈಗಷ್ಟೇ ಆರಂಭವಾಗಿದ್ದು, ಮಲ್ಲಿಗೆ ಹೂ ಹಾಗೂ ಮೊಗ್ಗಿನ ದರ ಕೇಜಿಗೆ ₹ 1000 - ₹ 1400 ಮಾರಾಟ ಮಾಡಲಾಗುತ್ತಿದೆ. ಮಲ್ಲಿಗೆ ಹೂ ಹೊರತು ಪಡಿಸಿ ಉಳಿದ ಹೂಗಳ ದರ ಕಡಿಮೆ ಇದೆ ಎಂದರು.

ದಿನಸಿ ಖರೀದಿ:ಯುಗಾದಿಯ ವಿಶೇಷ ಹೋಳಿಗೆಗಾಗಿ ತೊಗರಿಬೇಳೆ, ಬೆಲ್ಲ, ಸಕ್ಕರೆ, ಎಣ್ಣೆ ಸೇರಿ ಇತರೆ ದಿನಸಿ ಖರೀದಿ ಜೋರಾಗಿತ್ತು. ಹಬ್ಬದ ಬಳಿಕ ಮಂಗಳವಾರ ವರ್ಷ ತೊಡಕು ಇರುವುದರಿಂದ ಗ್ರಾಹಕರು ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ನಿಂಬೆಹಣ್ಣು, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಸೌತೆಕಾಯಿ, ತೆಂಗಿನ ಕಾಯಿ ಖರೀದಿ ಮಾಡಿದರು.ಕೆ.ಆರ್.ಮಾರುಕಟ್ಟೆಸಗಟುದರ (ಕೇಜಿಗೆ ₹)ಮಲ್ಲಿಗೆ ಮಗ್ಗು₹1000-1400ಕನಕಾಂಬರ₹800ಕಾಕಡ₹600ಸೇವಂತಿಗೆ₹200ಗುಲಾಬಿ₹150

ಹಣ್ಣುಗಳುದರ (ಕೇಜಿಗೆ ₹ )ಸೇಬು130-250

ದಾಳಿಂಬೆ 150-160

ಕಿತ್ತಲೆ100-120 

ದ್ರಾಕ್ಷಿ80-90

ಮೂಸಂಬಿ40

ಕರ್ಬೂಜ 30

ಕಲ್ಲಂಗಡಿ 20 -30 

ಪಚ್ಚ ಬಾಳೆ ಹಣ್ಣು 20

ಏಲಕ್ಕಿ ಬಾಳೆಹಣ್ಣು50-70 

ತರಕಾರಿ(ಕೇಜಿ ₹)

ಈರುಳ್ಳಿ30-35

ಹಸಿ ಮೆಣಸಿನಕಾಯಿ70-80

ಹುರಳಿಕಾಯಿ 40

ಬದನೆ30

ಆಲೂಗಡ್ಡೆ30

ಮೂಲಂಗಿ30

ಕ್ಯಾರೆಟ್50

ಟೊಮೆಟೋ20-30

Share this article