ರಾಜ್ಯಕ್ಕೆ ‘ಬರ’ಸಿಡಿಲು: ಬೇಕಿದೆ ಶಾಶ್ವತ ಪರಿಹಾರ

Published : Sep 13, 2026, 01:55 PM IST
Drought

ಸಾರಾಂಶ

ಆಗಸ್ಟ್ ಅಂತ್ಯದ ವೇಳೆಗೆ ಕರ್ನಾಟಕದಲ್ಲಿ ವಾಡಿಕೆಗಿಂತ ಶೇ.30ರಷ್ಟು ಕಡಿಮೆ ಮಳೆಯಾಗಿದೆ. ಇದರ ಪರಿಣಾಮವಾಗಿ ಬಿತ್ತನೆ ಪ್ರಮಾಣದಲ್ಲಿ ಗಣನೀಯ ಕುಸಿತ ಕಂಡುಬಂದಿದ್ದು, ಪ್ರಸಕ್ತ ಹಂಗಾಮಿನಲ್ಲಿ ಇದುವರೆಗೆ ಕೇವಲ 49.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.

-ಡಾ. ಎಸ್. ಆರ್. ಕೇಶವ

ಅರ್ಥಶಾಸ್ತ್ರ ಪ್ರಾಧ್ಯಾಪಕ,

ಬೆಂಗಳೂರು ವಿಶ್ವವಿದ್ಯಾಲಯ

ಗ್ರಾಮೀಣ ಕರ್ನಾಟಕಕ್ಕೆ ಬಿಕ್ಕಟ್ಟು । 126 ತಾಲ್ಲೂಕುಗಳು ತತ್ತರ, ಕುಸಿದ ಬಿತ್ತನೆ ಪ್ರಮಾಣ

ಆಗಸ್ಟ್ ಅಂತ್ಯದ ವೇಳೆಗೆ ಕರ್ನಾಟಕದಲ್ಲಿ ವಾಡಿಕೆಗಿಂತ ಶೇ.30ರಷ್ಟು ಕಡಿಮೆ ಮಳೆಯಾಗಿದೆ. ಇದರ ಪರಿಣಾಮವಾಗಿ ಬಿತ್ತನೆ ಪ್ರಮಾಣದಲ್ಲಿ ಗಣನೀಯ ಕುಸಿತ ಕಂಡುಬಂದಿದ್ದು, ಪ್ರಸಕ್ತ ಹಂಗಾಮಿನಲ್ಲಿ ಇದುವರೆಗೆ ಕೇವಲ 49.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಸಂಭಾವ್ಯ ಬೆಳೆ ನಷ್ಟವೂ ಆತಂಕಕಾರಿಯಾಗಿದೆ. ಗ್ರಾಮೀಣ ಆರ್ಥಿಕತೆಯ ಮೇಲೆ ಇದರ ಪರಿಣಾಮ ಗಂಭೀರವಾಗಿರಲಿದೆ.

ಮುಂಗಾರು ವಿಫಲವಾದಾಗ ಅದು ಕೇವಲ ಮಳೆಯ ಕೊರತೆಯಾಗಿ ಉಳಿಯುವುದಿಲ್ಲ. ಅದು ರೈತರ ಆದಾಯ, ಗ್ರಾಮೀಣ ಉದ್ಯೋಗ, ಕುಡಿಯುವ ನೀರಿನ ಭದ್ರತೆ ಮತ್ತು ಕುಟುಂಬಗಳ ಬಳಕೆಯ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಕರ್ನಾಟಕದ ಬರ ಪರಿಸ್ಥಿತಿ ಕೇವಲ ಕೃಷಿಗೆ ಸೀಮಿತವಾದ ಸಮಸ್ಯೆಯಲ್ಲ. ಪರಿಹಾರಧನ ನೀಡುವುದನ್ನೂ ಮೀರಿದ ಸಮಗ್ರ ಕ್ರಮಗಳ ಅಗತ್ಯವಿರುವ ವಿಶಾಲ ಸಾಮಾಜಿಕ-ಆರ್ಥಿಕ ಸವಾಲಾಗಿ ಇದು ರೂಪುಗೊಳ್ಳುತ್ತಿದೆ.

ಕರ್ನಾಟಕ ಸರ್ಕಾರ ಆಗಸ್ಟ್ 2026ರ ಆ.27ರಂದು 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. ಇದರಲ್ಲಿ 89 ತಾಲ್ಲೂಕುಗಳನ್ನು ತೀವ್ರ ಬರಪೀಡಿತ ಹಾಗೂ 12 ತಾಲ್ಲೂಕುಗಳನ್ನು ಮಧ್ಯಮ ಬರಪೀಡಿತ ಎಂದು ವರ್ಗೀಕರಿಸಲಾಗಿತ್ತು. ಇತ್ತೀಚೆಗೆ ಮತ್ತೆ 25 ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದ್ದು, ಒಟ್ಟು ಸಂಖ್ಯೆ 126ಕ್ಕೆ ಏರಿಕೆಯಾಗಿದೆ. ಇದೇ ವೇಳೆ, ಅಧಿಕಾರಿಗಳು 228 ತಾಲ್ಲೂಕುಗಳಲ್ಲಿ ಬರದಂತಹ ಪರಿಸ್ಥಿತಿ ಇದೆ ಎಂದು ಗುರುತಿಸಿದ್ದಾರೆ. ಬರ ಪರಿಸ್ಥಿತಿಯ ಮೌಲ್ಯಮಾಪನ ಮುಂದುವರಿಯುತ್ತಿರುವುದರಿಂದ, ಅಧಿಕೃತವಾಗಿ ಬರಪೀಡಿತ ಎಂದು ಘೋಷಿಸಲ್ಪಡುವ ತಾಲ್ಲೂಕುಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಆಗಸ್ಟ್ ಅಂತ್ಯದ ವೇಳೆಗೆ ಕರ್ನಾಟಕದಲ್ಲಿ ವಾಡಿಕೆಗಿಂತ ಸುಮಾರು ಶೇ.30ರಷ್ಟು ಕಡಿಮೆ ಮಳೆಯಾಗಿತ್ತು. ಸೆಪ್ಟೆಂಬರ್‌ನಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ರಾಜ್ಯದ 31 ಜಿಲ್ಲೆಗಳ ಪೈಕಿ 30 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ವಿಶೇಷವಾಗಿ, ಚಾಮರಾಜನಗರ ಜಿಲ್ಲೆಯಲ್ಲಿ ಸುಮಾರು ಶೇ.59, ಚಿಕ್ಕಬಳ್ಳಾಪುರದಲ್ಲಿ ಶೇ.57ರಷ್ಟು, ಕೋಲಾರದಲ್ಲಿ ಶೇ.56ರಷ್ಟು ಹಾಗೂ ಬಳ್ಳಾರಿಯಲ್ಲಿ ಶೇ.52ರಷ್ಟು ಮಳೆ ಕೊರತೆ ಕಂಡುಬಂದಿದೆ.

ಆತಂಕಕಾರಿ ಪರಿಸ್ಥಿತಿ:

ಮಳೆ ಕೊರತೆಯ ಪ್ರಮಾಣವೊಂದೇ ಸಂಪೂರ್ಣ ಚಿತ್ರಣವನ್ನು ನೀಡುವುದಿಲ್ಲ. ಬೆಳೆ ಬೆಳೆಯಬೇಕಾದ ಸಂದರ್ಭದಲ್ಲಿ ಮಳೆ ಬಂದಿದೆಯೇ ಎಂಬುದು ಮುಖ್ಯವಾಗುತ್ತದೆ. ಬೆಳೆಯ ನಿರ್ಣಾಯಕ ಹಂತದಲ್ಲಿ ಸತತ 3 ವಾರಗಳ ಕಾಲ ಸಾಕಷ್ಟು ಮಳೆಯಾಗದಿರುವುದು ಹಿಂದಿನ ಮಳೆಯಿಂದ ದೊರೆತ ತೇವಾಂಶದ ಪ್ರಯೋಜನವನ್ನೂ ಕಳೆದುಹೋಗುವಂತೆ ಮಾಡಬಹುದು. ಹೀಗಾಗಿ ಒಟ್ಟು ಮಳೆಯ ಕೊರತೆಗಿಂತಲೂ ದೀರ್ಘಕಾಲದ ಒಣಹವೆ ಹೆಚ್ಚು ಆತಂಕಕಾರಿ. ಇದರ ಪರಿಣಾಮವಾಗಿ ಬಿತ್ತನೆ ಪ್ರಮಾಣದಲ್ಲಿ ಗಣನೀಯ ಕುಸಿತ ಕಂಡುಬಂದಿದ್ದು, ಕಳೆದ ಹಂಗಾಮಿನಲ್ಲಿ 82.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದರೆ, ಪ್ರಸಕ್ತ ಹಂಗಾಮಿನಲ್ಲಿ ಇದುವರೆಗೆ ಕೇವಲ 49.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.

ಸಂಭಾವ್ಯ ಬೆಳೆ ನಷ್ಟವೂ ಆತಂಕಕಾರಿಯಾಗಿದೆ. ಪ್ರಸಕ್ತ ಒಣಹವೆ ಮುಂದುವರಿದರೆ ಕೃಷಿ ಮತ್ತು ತೋಟಗಾರಿಕೆ ಉತ್ಪಾದನೆಯಲ್ಲಿ ಸುಮಾರು 50ರಷ್ಟು ಕುಸಿತವಾಗಬಹುದು ಎಂದು ಪ್ರಾಥಮಿಕ ಅಂದಾಜುಗಳು ಸೂಚಿಸುತ್ತವೆ. ಇದು ಅಂತಿಮ ನಷ್ಟದ ಅಂಕಿ-ಅಂಶವಲ್ಲ. ಕ್ಷೇತ್ರಮಟ್ಟದ ಸಮೀಕ್ಷೆಗಳು ಪೂರ್ಣಗೊಂಡ ನಂತರವೇ ನಿಜವಾದ ಹಾನಿಯ ಪ್ರಮಾಣ ಸ್ಪಷ್ಟವಾಗಲಿದೆ. ಆದರೆ ಈ ಅಂದಾಜಿನ ಒಂದು ಭಾಗವೇ ನಿಜವಾದರೂ ಗ್ರಾಮೀಣ ಆರ್ಥಿಕತೆಯ ಮೇಲೆ ಅದರ ಪರಿಣಾಮ ಗಂಭೀರವಾಗಿರಲಿದೆ.

ಹಲವು ಸಮಸ್ಯೆಗಳು:

ಇದರ ಕಾರಣ ಸರಳ. ರೈತ ಬೆಳೆ ಕಳೆದುಕೊಂಡಾಗ ನಷ್ಟವು ಹೊಲದಲ್ಲೇ ನಿಲ್ಲುವುದಿಲ್ಲ. ಕೃಷಿ ಆದಾಯ ಕಡಿಮೆಯಾದಾಗ ಕುಟುಂಬಗಳು ದಿನನಿತ್ಯದ ಬಳಕೆ, ಶಿಕ್ಷಣ, ಕೃಷಿ ಪರಿಕರಗಳು ಮತ್ತು ಇತರ ಸೇವೆಗಳ ಮೇಲಿನ ವೆಚ್ಚವನ್ನು ಕಡಿಮೆ ಮಾಡುತ್ತವೆ. ಕೃಷಿ ಕಾರ್ಮಿಕರಿಗೆ ಕೆಲಸದ ದಿನಗಳು ಮತ್ತು ಕೂಲಿ ಆದಾಯ ಕಡಿಮೆಯಾಗುತ್ತದೆ. ಗ್ರಾಮೀಣ ವ್ಯಾಪಾರಿಗಳು, ಸಾರಿಗೆದಾರರು, ಸಣ್ಣ ಅಂಗಡಿಗಳು ಮತ್ತು ಸೇವಾ ವಲಯದವರಿಗೂ ಗ್ರಾಹಕರ ಕೊರತೆ ಎದುರಾಗುತ್ತದೆ. ಸಾಲ ಮರುಪಾವತಿ ಕಷ್ಟವಾಗುತ್ತದೆ. ಹೀಗೆ ಬೆಳೆ ನಷ್ಟವು ಕ್ರಮೇಣ ಗ್ರಾಮೀಣ ಬೇಡಿಕೆಯ ಬಿಕ್ಕಟ್ಟಾಗಿ ರೂಪುಗೊಳ್ಳಬಹುದು.

ಇದರ ಸಾಮಾಜಿಕ ಬೆಲೆಯೂ ದೊಡ್ಡದಾಗಿದೆ. ಗ್ರಾಮೀಣ ಕುಟುಂಬಗಳು ಹೆಚ್ಚುವರಿ ಸಾಲ ಪಡೆಯಬೇಕಾಗಬಹುದು ಅಥವಾ ಉದ್ಯೋಗಕ್ಕಾಗಿ ಪಟ್ಟಣಗಳು ಮತ್ತು ನಗರಗಳಿಗೆ ವಲಸೆ ಹೋಗಬೇಕಾಗಬಹುದು. ಜಾನುವಾರು ಸಾಕಾಣಿಕೆದಾರರಿಗೆ ಮೇವು ದುಬಾರಿಯಾಗುವ ಜೊತೆಗೆ ಅದರ ಲಭ್ಯತೆಯೂ ಕಡಿಮೆಯಾಗಬಹುದು. ಕುಡಿಯುವ ನೀರಿನ ಒತ್ತಡ ಈಗಾಗಲೇ ಗೋಚರಿಸುತ್ತಿದ್ದು, ನೂರಾರು ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಬೇಕಾಗಿದೆ. ಹಿಂದಿನ ಮೌಲ್ಯಮಾಪನದಲ್ಲಿ 178 ತಾಲ್ಲೂಕುಗಳಲ್ಲಿ ಮಣ್ಣಿನ ತೇವಾಂಶದ ಕೊರತೆ ಹಾಗೂ 132 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿತ ಕಂಡುಬಂದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಸರ್ಕಾರದ ಕ್ರಮಗಳು:

ಸರ್ಕಾರ ಹಲವು ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಕುಡಿಯುವ ನೀರಿನ ವ್ಯವಸ್ಥೆಗಾಗಿ 306 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಮೇವು ಬೀಜದ ಕಿಟ್‌ಗಳಿಗಾಗಿ 25 ಕೋಟಿ ರು. ಮೀಸಲಿಡಲಾಗಿದೆ. ಸುಮಾರು 49 ಲಕ್ಷ ರೈತರು ಬೆಳೆ ವಿಮಾ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಬೆಳೆ ನಷ್ಟದ ಸಮೀಕ್ಷೆ ನಡೆಸುತ್ತಿವೆ. ರಾಜ್ಯ ಸರ್ಕಾರ ಕೇಂದ್ರದಿಂದ ಹೆಚ್ಚಿನ ನೆರವನ್ನೂ ಕೋರಿದೆ.

ರೈತರ ಆದಾಯ ರಕ್ಷಣೆ ಗುರಿ:

ರೈತರು ಎಲ್ಲವನ್ನೂ ಕಳೆದುಕೊಂಡ ನಂತರ ಪರಿಹಾರ ನೀಡುವುದಕ್ಕಿಂತ, ಅವರ ಆದಾಯವನ್ನು ರಕ್ಷಿಸುವುದೇ ಮುಖ್ಯ ಗುರಿಯಾಗಬೇಕು. ತೀವ್ರವಾಗಿ ಬಾಧಿತ ರೈತರಿಗೆ ಕೃಷಿ ಸಾಲಗಳ ಪುನಾರಚನೆ ಮತ್ತು ತಾತ್ಕಾಲಿಕ ಬಡ್ಡಿ ರಿಯಾಯಿತಿ ನೀಡುವ ಬಗ್ಗೆ ಸರ್ಕಾರ ಪರಿಗಣಿಸಬೇಕು. ಬೆಳೆ ವಿಮೆಯ ಪರಿಹಾರ ಮೊತ್ತವನ್ನು ತ್ವರಿತವಾಗಿ ಪಾವತಿಸಬೇಕು. ಕೃಷಿ ಕಾರ್ಮಿಕರಿಗೆ ಪರ್ಯಾಯ ಆದಾಯದ ಮೂಲ ಒದಗಿಸಲು ಗ್ರಾಮೀಣ ಉದ್ಯೋಗ ಕಾರ್ಯಕ್ರಮಗಳನ್ನು ವಿಸ್ತರಿಸಬೇಕು. ಇದೇ ಸಂದರ್ಭದಲ್ಲಿ ವಿಬಿ-ಜಿ ರಾಮ್‌ ಜಿ ಸೇರಿದಂತೆ ಉದ್ಯೋಗ ಕಾರ್ಯಕ್ರಮಗಳ ಮೂಲಕ ಕೃಷಿ ಹೊಂಡಗಳು, ಕೆರೆಗಳ ಹೂಳೆತ್ತುವುದು, ಚೆಕ್‌ಡ್ಯಾಂಗಳು, ಜಲಾನಯನ ಅಭಿವೃದ್ಧಿ ಮತ್ತು ಅಂತರ್ಜಲ ಮರುಪೂರಣದಂತಹ ಶಾಶ್ವತ ಆಸ್ತಿಗಳನ್ನು ನಿರ್ಮಿಸಬಹುದು.

ಸರ್ಕಾರ ಏನು ಮಾಡಬಹುದು?:

ಹೆಚ್ಚುವರಿಯಾಗಿ, ಕರ್ನಾಟಕವು ತನ್ನ ದೀರ್ಘಕಾಲೀನ ಬೆಳೆ ತಂತ್ರಗಾರಿಕೆಯನ್ನು ಮರುಚಿಂತನೆ ಮಾಡಬೇಕಿದೆ. ಅಂತರ್ಜಲದ ಮೇಲೆ ನಿರಂತರ ಒತ್ತಡವಿರುವ ಪ್ರದೇಶಗಳಲ್ಲಿ, ಸಮರ್ಪಕ ನೀರಾವರಿ ಇಲ್ಲದೆ ರೈತರು ಹೆಚ್ಚು ನೀರು ಅಗತ್ಯವಿರುವ ಬೆಳೆಗಳ ಮೇಲೆ ಅವಲಂಬಿತರಾಗಲು ಸಾಧ್ಯವಿಲ್ಲ. ರಾಗಿ ಸೇರಿದಂತೆ ಸಿರಿಧಾನ್ಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು, ಮೇವು ಬೆಳೆಗಳು ಮತ್ತು ಬರ-ನಿರೋಧಕ ತಳಿಗಳಿಗೆ ಸರ್ಕಾರ ಹೆಚ್ಚಿನ ಬೆಂಬಲ ನೀಡಬೇಕು. ಸೂಕ್ಷ್ಮ ನೀರಾವರಿ ಮತ್ತು ಮಳೆನೀರು ಕೊಯ್ಲು ಬರ ತುರ್ತು ಸಂದರ್ಭಗಳಲ್ಲಿ ಮಾತ್ರ ಜಾರಿಗೆ ಬರುವ ಕ್ರಮಗಳಾಗಿರದೆ, ಕೃಷಿ ಯೋಜನೆಯ ಅವಿಭಾಜ್ಯ ಅಂಗವಾಗಬೇಕು.

4,565 ಗ್ರಾಮಗಳನ್ನು ಒಳಗೊಂಡಿರುವ ಸರ್ಕಾರದ ನೀರಿನ ಬಜೆಟ್‌ ರೂಪಿಸುವ ಕಾರ್ಯವು ಶ್ಲಾಘನೀಯ ಆರಂಭವಾಗಿದೆ. ಆದರೆ ನೀರಿನ ಬಜೆಟ್ ಕೇವಲ ಅಂಕಿಅಂಶಗಳ ಕಸರತ್ತಾಗಿ ಉಳಿಯಬಾರದು; ಯಾವ ಬೆಳೆಗಳನ್ನು ಬೆಳೆಯಬೇಕು, ಎಷ್ಟು ಅಂತರ್ಜಲವನ್ನು ಹೊರತೆಗೆಯಬಹುದು ಮತ್ತು ನೀರಾವರಿ ಹಾಗೂ ಅಂತರ್ಜಲ ಮರುಪೂರಣಕ್ಕೆ ಸಾರ್ವಜನಿಕ ಹೂಡಿಕೆಯನ್ನು ಎಲ್ಲಿ ಕೇಂದ್ರೀಕರಿಸಬೇಕು ಎಂಬ ನಿರ್ಧಾರಗಳಿಗೆ ಅದು ಮಾರ್ಗದರ್ಶನ ನೀಡಬೇಕು.

ಬರವು ಕರ್ನಾಟಕದ ನೀರಿನ ಆದ್ಯತೆಗಳ ಕುರಿತು ಒಂದು ಸವಾಲಿನ ಪ್ರಶ್ನೆಯನ್ನು ಎತ್ತುತ್ತದೆ. ಜಲಾಶಯಗಳು ಒತ್ತಡದಲ್ಲಿರುವಾಗ, ರಾಜ್ಯವು ಕುಡಿಯುವ ನೀರು, ಕೃಷಿ, ಪರಿಸರ ಸುಸ್ಥಿರತೆ ಮತ್ತು ಅಂತಾರಾಜ್ಯ ನೀರಿನ ಬಾಧ್ಯತೆಗಳ ಅಗತ್ಯಗಳನ್ನು ಸಮತೋಲನಗೊಳಿಸಬೇಕು. ಈ ಸಮತೋಲನ ಸಾಧಿಸಲು ರಾಜಕೀಯ ಒತ್ತಡದ ಆಧಾರದ ಮೇಲಿನ ನಿರ್ಧಾರಗಳ ಬದಲು ಪಾರದರ್ಶಕ, ವೈಜ್ಞಾನಿಕ ನೀರಿನ ಲೆಕ್ಕಪತ್ರ ಅಗತ್ಯವಿದೆ.

ಅಂತಿಮವಾಗಿ, ಕರ್ನಾಟಕದ ಬರ ನೀತಿಯ ನಿಜವಾದ ಮಾನದಂಡವೆಂದರೆ ಬೆಳೆ ನಷ್ಟದ ನಂತರ ರಾಜ್ಯವು ಎಷ್ಟು ಹಣವನ್ನು ವಿತರಿಸುತ್ತದೆ ಎಂಬುದಲ್ಲ; ಮುಂದಿನ ಮುಂಗಾರು ವಿಫಲವಾದಾಗ ಗ್ರಾಮೀಣ ಆರ್ಥಿಕತೆ ಸ್ವಯಂಚಾಲಿತವಾಗಿ ಕುಸಿಯದಂತೆ ರಾಜ್ಯವು ತಡೆಯಲು ಸಾಧ್ಯವಾಗುತ್ತದೆಯೇ ಎಂಬುದಾಗಿದೆ.

PREV
Read more Articles on

Recommended Stories

ಎಲ್ಲರನ್ನೂ ಏಕಛತ್ರದಡಿ ಒಗ್ಗೂಡಿಸುವ ಗಣಪ
ಸಂಕಷ್ಟಕ್ಕೆ ಮಾತ್ರವಲ್ಲ ಸಾಲ, ಜೀವನಶೈಲಿ, ಪ್ರವಾಸಕ್ಕೂ ಪರ್ಸನಲ್ ಲೋನ್ ಮೊರೆ ಹೋದ ಯುವಪಡೆ